ನಮಗೆಲ್ಲಾ ಕೊರೊನಾ ಲಸಿಕೆಯ "ಬೂಸ್ಟರ್ ಶಾಟ್" ಅವಶ್ಯಕತೆಯಿದೆಯೇ? WHO ವಿಜ್ಞಾನಿ ವಿವರಣೆ...
ನವದೆಹಲಿ, ಜೂನ್ 21: ಮುಂದಿನ ಕೊರೊನಾ ಅಲೆ ನಿರ್ವಹಣೆಗೆ ಶೀಘ್ರಗತಿಯಲ್ಲಿ ಲಸಿಕೆ ನೀಡುವುದು ಅವಶ್ಯಕವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಷ್ಟು ವೇಗದಲ್ಲಿ ಎಷ್ಟು ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಲಾಗುತ್ತದೆಯೋ ಅಷ್ಟೇ ಪರಿಣಾಮಕಾರಿಯಾಗಿ ಕೊರೊನಾ ಸೋಂಕಿನ ಹರಡುವಿಕೆ ತಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಆದರೆ ಲಸಿಕೆ ಪಡೆದುಕೊಂಡವರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ. ಮೂರನೇ ಅಲೆ ನಿರ್ವಹಣೆಗೆ ಸಿದ್ಧತೆಗಳು ಸಾಗುತ್ತಿರುವ ಈ ಸಂದರ್ಭ, ಮೂರನೇ ಡೋಸ್, ಅಂದರೆ "ಬೂಸ್ಟರ್ ಶಾಟ್" ಲಸಿಕೆ ಪಡೆಯುವ ಅಗತ್ಯದ ಕುರಿತೂ ಚರ್ಚೆ ನಡೆಯುತ್ತಿದೆ. ಈಗ ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆಯೇ? ಈ ಕುರಿತ ಮಾಹಿತಿ ಮುಂದಿದೆ...
ಹಲವು ದೇಶಗಳಲ್ಲಿ ಬೂಸ್ಟರ್ ಡೋಸ್
ಕೊರೊನಾ ಸೋಂಕು ರೂಪಾಂತರಗಳನ್ನು ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ಹಲವು ದೇಶಗಳಲ್ಲಿ ಕೊರೊನಾ ಬೂಸ್ಟರ್ ಶಾಟ್ಗಳನ್ನು ನೀಡುವ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. ಕೊರೊನಾ ಮುಂದಿನ ಅಲೆ ನಿರ್ವಹಣೆಗೆ ಬೂಸ್ಟರ್ ಡೋಸ್ ನೀಡುವುದು ಅವಶ್ಯಕ ಎಂದು ಪರಿಗಣಿಸಲಾಗುತ್ತಿದೆ. ಆದರೆ ಬೂಸ್ಟರ್ ಡೋಸ್ ಅವಶ್ಯಕತೆಯಿದೆಯೇ ಎಂದು ಈಗಲೇ ಹೇಳುವುದು ಅತಿ ಬೇಗನೇ ಅಭಿಪ್ರಾಯ ನೀಡಿದಂತಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಎಷ್ಟು ಕಾಲದವರೆಗೆ ಕೊರೊನಾ ಲಸಿಕೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು?
ಬೂಸ್ಟರ್ ಡೋಸ್ ಬಗ್ಗೆ ಸ್ಪಷ್ಟತೆ ಇಲ್ಲ
"ಈ ಬೂಸ್ಟರ್ ಡೋಸ್ನ ದಕ್ಷತೆ ಕುರಿತು ಇನ್ನೂ ಸ್ಪಷ್ಟತೆ ದೊರೆತಿಲ್ಲ. ಈ ಬೂಸ್ಟರ್ ಡೋಸ್ಗಳನ್ನು ನೀಡಿದರೆ ಪ್ರಯೋಜನವಿದೆಯೇ ಇಲ್ಲವೇ? ಯಾವಾಗ ನೀಡಬೇಕು, ಯಾವ ಸಮಯದಲ್ಲಿ ನೀಡಿದರೆ ಹೆಚ್ಚು ಪ್ರಯೋಜನಕಾರಿ? ಯಾರಿಗೆ ನೀಡಬೇಕು? ಈ ಎಲ್ಲಾ ಪ್ರಶ್ನೆಗಳಿಗೂ ಇನ್ನೂ ಉತ್ತರ ದೊರೆತಿಲ್ಲ. ಹೀಗಾಗಿ ಈ ಲಸಿಕೆ ಕುರಿತು ಶಿಫಾರಸ್ಸು ಮಾಡಲು ಈಗಲೇ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ ಸ್ವಾಮಿನಾಥನ್.
ಇನ್ನೂ ಲಸಿಕೆಯ ಮೊದಲ ಡೋಸ್ ಅನ್ನೇ ನೀಡಿಲ್ಲ
ಹಲವು ದೇಶಗಳಲ್ಲಿ ಕೊರೊನಾ ಲಸಿಕೆಗಳ ಮೊದಲ ಡೋಸ್ ಅನ್ನೇ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ. ಇಂಥ ಸಂದರ್ಭದಲ್ಲಿ ಮೂರನೇ ಡೋಸ್ ಬಗ್ಗೆ ಮಾತುಗಳು ಕೇಳಿಬರುತ್ತಿವೆ ಎಂದು ಅವರು ಹೇಳಿದ್ದಾರೆ. ಆದರೆ ಕೊರೊನಾ ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ ಲಸಿಕೆಗಳ ಪರಿಣಾಮಕಾರಿ ಅಂಶಗಳ ಕುರಿತು ಪ್ರಶ್ನೆಗಳು ಎದ್ದಿವೆ. ಈಗ ಲಭ್ಯವಿರುವ ಲಸಿಕೆಗಳು ಕೊರೊನಾ ರೂಪಾಂತರಗಳ ವಿರುದ್ಧ ಹೋರಾಡುವ ಕುರಿತು ಸ್ಪಷ್ಟನೆ ದೊರೆಯದ ಕಾರಣ ಮೂರನೇ ಡೋಸ್ ಲಸಿಕೆ ಪ್ರಸ್ತಾಪ ಬಂದಿವೆ.
ಕೊರೊನಾ ಲಸಿಕೆಗಳಿಂದ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳ
ಬೂಸ್ಟರ್ ಡೋಸ್ನಿಂದ ರೋಗನಿರೋಧಕ ಶಕ್ತಿ ಇನ್ನಷ್ಟು ಹೆಚ್ಚಳ
"ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ನಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಜೊತೆಗೆ ರೂಪಾಂತರಗೊಳ್ಳುತ್ತಿರುವ ಸೋಂಕನ್ನು ನಿಯಂತ್ರಿಸಲು ಇದು ಸಹಕಾರಿಯಾಗಬಲ್ಲದು" ಎಂದು ದೆಹಲಿ ಏಮ್ಸ್ನ ಔಷಧ ವಿಭಾಗದ ವೈದ್ಯ ಸಂಜೀವ್ ಸಿನ್ಹಾ ಈಚೆಗಷ್ಟೆ ಹೇಳಿದ್ದರು. ಇದೇ ಜನವರಿ ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದ ಬಹುಪಾಲು ಜನರಿಗೆ ಎರಡನೇ ಅಲೆಯಲ್ಲಿ ತೊಂದರೆಯಾಗಿಲ್ಲ. ಲಸಿಕೆಯು ಕೊರೊನಾ ಸೋಂಕನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ ಆರು ತಿಂಗಳವರೆಗೂ ರೋಗನಿರೋಧಕ ಶಕ್ತಿಯಿರುತ್ತದೆ. ನಂತರ ದೇಹದಲ್ಲಿ ಪ್ರತಿರೋಧಕ ಶಕ್ತಿ ಕ್ರಮೇಣ ತಗ್ಗಬಹುದು ಎಂಬ ಅನುಮಾನವಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಮತ್ತೆ ಅವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರಬಹುದು. ಅಂಥವರಿಗೆ ಬೂಸ್ಟರ್ ಡೋಸ್ನ ಅಗತ್ಯ ಬರಬಹುದು ಎಂದಿದ್ದರು.
ಸೋಂಕಿನಿಂದ ಗುಣಮುಖರಾದವರಿಗೆ ಮೂರನೇ ಡೋಸ್ ಬೇಡ
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ, ಚಿಕಿತ್ಸೆ ಕಾರಣವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಅಂಥವರಿಗೆ ಮೂರನೇ ಡೋಸ್ ಅಗತ್ಯ ಇರುವುದೇ ಇಲ್ಲ. ಅವರಿಗೆ ಲಸಿಕೆ ನೀಡುವ ಅವಶ್ಯಕತೆ ಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೆಹಲಿ ಹಾಗೂ ಪಾಟ್ನಾದ ಏಮ್ಸ್ನಲ್ಲಿ, ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಕೋವ್ಯಾಕ್ಸಿನ್ನ ಮೂರನೇ ಡೋಸ್, ಅಂದರೆ ಬೂಸ್ಟರ್ ಡೋಸ್ ನೀಡುವ ಕುರಿತು ವೈದ್ಯಕೀಯ ಪ್ರಯೋಗ ಆರಂಭಿಸಲಾಗಿದೆ.