ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!
ನವದೆಹಲಿ, ಜುಲೈ.19: ಭಾರತದಲ್ಲಿ ಕೊರೊನಾವೈರಸ್ ಮಹಾಮಾರಿಯು ಸಮುದಾಯದ ಹಂತದಲ್ಲಿ ಹರಡುವುದಕ್ಕೆ ಶುರುವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಪಾಯ ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ.
Recommended Video
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಸ್ಪಿಟಲ್ ಬೋರ್ಡ್ ಚೇರ್ ಮೆನ್ ಡಾ.ವಿ.ಕೆ.ಮೊಂಗಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರತಿನಿತ್ಯ ದೇಶದಲ್ಲಿ 30,000ಕ್ಕೂ ಅಧಿಕ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ದೇಶದ ಭವಿಷ್ಯದಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಂದ ದೇಶಕ್ಕೆ ಮುಕ್ತಿ ಯಾವಾಗ? ಖ್ಯಾತ ಜ್ಯೋತಿಷಿಯ ಭವಿಷ್ಯ
ಕೊರೊನಾವೈರಸ್ ಸೋಂಕು ಹಲವು ವಲಯಗಳಲ್ಲಿ ಹರಡುತ್ತಿರುವುದು ಗೊತ್ತಿರುವ ವಿಚಾರ. ಆದರೆ ಈ ಪೈಕಿ ಗ್ರಾಮೀಣ ಭಾಗಗಳಿಗೂ ಮಹಾಮಾರಿ ವ್ಯಾಪಿಸುತ್ತಿದೆ. ಸಮುದಾಯದ ಹಂತದಲ್ಲಿ ಕೊರೊನಾವೈರಸ್ ಹರಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಡಾ.ವಿಕೆ.ಮೊಂಗಾ ತಿಳಿಸಿದ್ದಾರೆ.
ರಾಜ್ಯದಲ್ಲೂ ಸಮುದಾಯದಲ್ಲಿ ವ್ಯಾಪಿಸುತ್ತಿರುವ ಮಹಾಮಾರಿ
ನವದೆಹಲಿಯಲ್ಲಿ ಕೊರೊನಾವೈರಸ್ ಸಮುದಾಯಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹರಡುವುದನ್ನು ತಕ್ಕಮಟ್ಟಿಗೆ ನಿಯಂತ್ರಿಸಲಾಗಿದೆ. ಆದರೆ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಕೇರಳ, ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಆಂತರಿಕ ವಲಯಗಳಲ್ಲಿ ಮಹಾಮಾರಿ ಹರಡುತ್ತಿರುವ ಬಗ್ಗೆ ಸೋಂಕಿತ ಪ್ರಕರಣಗಳ ಅಂಕಿ-ಸಂಖ್ಯೆಯೇ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಡಾ.ವಿ.ಕೆ.ಮೊಂಗಾ ತಿಳಿಸಿದ್ದಾರೆ.
ಕೊರೊನಾವೈರಸ್ ಕಮ್ಯುನಿಟಿ ಸ್ಪ್ರೆಡ್ ಎಂದರೇನು?
ಸಮುದಾಯದಲ್ಲಿ ಹರಡುವಿಕೆ ಪ್ರಕ್ರಿಯೆ ಹೇಗೆ ಇರುತ್ತದೆ ಎಂದರೆ ಕೊರೊನಾವೈರಸ್ ಸೋಂಕಿತ ಪ್ರಕರಣದ ಮೂಲವೇ ಸಿಗುವುದಿಲ್ಲ. ಜನರಿಗೆ ಯಾವ ಸೋಂಕಿತನಿಂದ ಸೋಂಕು ಅಂಟಿಕೊಂಡಿತು ಎನ್ನುವುದನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ಯಾರಿಗೆ ಹೇಗೆ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತದೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಒಬ್ಬ ಸೋಂಕಿತ ವ್ಯಕ್ತಿಯಿಂದ ಸಾಮಾಜಿಕ ವಲಯದಲ್ಲಿ ಸೋಂಕು ಹರಡುವುದೆು. ಇಲ್ಲಿ ಯಾವುದೇ ಕಂಟೇನ್ಮೆಂಟ್ ವಲಯಗಳನ್ನು ಗುರುತಿಸುವುದಕ್ಕೂ ಆಗುವುದಿಲ್ಲ. ಯಾವ ಸೋಂಕಿತ ವ್ಯಕ್ತಿಯ ಯಾವ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ಯಾವ ರೀತಿಯಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗುತ್ತಾರೆ ಎನ್ನುವುದಕ್ಕೆ ಪತ್ತೆ ಮಾಡುವುದು ಸಾಧ್ಯವಿಲ್ಲ.
ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?
ಸಹಜವಾಗಿ ಜೀವಿಸುತ್ತಿರುವವರಲ್ಲೂ ಹೊಕ್ಕುತ್ತೆ ವೈರಸ್!
ಒಂದು ಬಾರಿ ಕೊರೊನಾವೈರಸ್ ಸೋಂಕು ಸಮುದಾಯಕ್ಕೆ ವ್ಯಾಪಿಸಿದರೆ ಮುಗಿಯಿತು ಕಥೆ. ಸಹಜವಾಗಿ ಬದುಕುತ್ತಿರುವವರ ದೇಹವನ್ನೂ ಕೂಡಾ ವೈರಸ್ ಹೊಕ್ಕುತ್ತದೆ. ಜನರ ಅರಿವಿಗೆ ಬಾರದಂತೆ ಯಾವುದೋ ಮೂಲದಿಂದ ಮಹಾಮಾರಿ ದೇಹವನ್ನು ಸೇರಿ ಬಿಡುತ್ತದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಗಮಿಸಿದಾಗ ಸೋಂಕು ಸಮುದಾಯದಲ್ಲಿ ಹರಡುತ್ತಿರುವುದು ಖಾತ್ರಿಯಾದಂತೆ ತೋರುತ್ತದೆ. ಇಂಥ ಬೆಳವಣಿಗೆ ದೇಶದ ಪಾಲಿಗೆ ಬಲು ಅಪಾಯಕಾರಿ ಎಂದು ಆರಂಭದಿಂದಲೂ ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಕೆ ನೀಡುತ್ತಿದ್ದರು.
ಕೇಂದ್ರ ಸರ್ಕಾರ ಸಮುದಾಯಕ್ಕೆ ಹರಡಿಲ್ಲ ಸೋಂಕು ಎನ್ನುತ್ತೆ
ಕೊರೊನಾವೈರಸ್ ಸೋಂಕಿತ ಸಂಖ್ಯೆ ಪ್ರತಿನಿತ್ಯ 30 ಸಾವಿರದ ಗಡಿ ದಾಟುತ್ತಿದೆ. ಮಹಾನಗರಗಳಲ್ಲೇ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಕೇಂದ್ರ ಸರ್ಕಾರವು ಮತ್ತದೇ ಹಳೆರಾಗವನ್ನು ಹಾಡುತ್ತಿದೆ. ಕೊರೊನಾವೈರಸ್ ಮಹಾಮಾರಿಯು ಸಮುದಾಯಕ್ಕೆ ಹರಡಿಯೇ ಇಲ್ಲ ಎಂದು ವಾದಿಸುತ್ತಿದೆ.
ಭಾರತದಲ್ಲಿ ಕೊರೊನಾವೈರಸ್ ಮಹಾಸ್ಫೋಟ ಹೇಗಿದೆ?
ಕೊರೊನಾವೈರಸ್ ಮಹಾಸ್ಫೋಟಕ್ಕೆ ಭಾರತದಲ್ಲಿನ ಚಿತ್ರಣವೇ ಬದಲಾದಂತೆ ತೋರುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲೇ ಮೊಟ್ಟಮೊದಲ ಬಾರಿಗೆ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 38,902 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ 10,77,618ಕ್ಕೆ ಏರಿಕೆಯಾಗಿದೆ. ಈ ಪೈಕಿ 6,77,423 ಸೋಂಕಿತರು ಗುಣಮುಖರಾಗಿದ್ದು, 3,73,379 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಮಹಾಮಾರಿಗೆ 543 ಮಂದಿ ಪ್ರಾಣ ಬಿಟ್ಟಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ಇನ್ನು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,58,127 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದ್ದು, ಇದುವರೆಗೂ 1,37,91,869 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.