ವಿವಿಧ ರಾಜ್ಯದಲ್ಲಿ ಎಎಪಿ ಕಾರ್ಯತಂತ್ರ: ಬಿಜೆಪಿ ಪ್ರತಿ ತಂತ್ರ!
ನವದೆಹಲಿ ಮೇ 27: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತನ್ನ ಗಮನವನ್ನು ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯತ್ತ ನೆಟ್ಟಿದೆ.
ಇದೇ ವೇಳೆ ಮುಂದಿನ ವರ್ಷ ನಡೆಯುವ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳಿಗೂ ಆಮ್ ಆದ್ಮಿ ಪಕ್ಷ ಸಜ್ಜಾಗುತ್ತಿದೆ.
ಕೇರಳದಲ್ಲಿ ಎಎಪಿ-ಟ್ವೆಂಟಿ20 ಮೈತ್ರಿ; ಉಚಿತ ವಿದ್ಯುತ್ ಭರವಸೆ
"ಈ ಹಿನ್ನೆಲೆಯಲ್ಲಿ ಎಲ್ಲಾ ಬಿಜೆಪಿ ರಾಜ್ಯ ಘಟಕಗಳಿಗೆ, ವಿಶೇಷವಾಗಿ ಮುಂಬರುವ ಚುನಾವಣೆಗಳಿಗೆ ಸಜ್ಜಾಗುತ್ತಿರುವ ರಾಜ್ಯ ಘಟಕಗಳಿಗೆ ಹಾಗೂ ಎಎಪಿ ತನ್ನ ನೆಲೆಯನ್ನು ವಿಸ್ತರಿಸಲು ಯೋಜಿಸುತ್ತಿರುವ ರಾಜ್ಯಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಪಕ್ಷಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ,'' ಎಂದು ಬಿಜೆಪಿ ಕಾರ್ಯಕಾರಿಣಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದರು.
Explained: 8 ವರ್ಷ ಪೂರೈಸಿದ ಪ್ರಧಾನಿ ಮೋದಿ ಸರ್ಕಾರ ಜಾರಿಗೊಳಿಸಿದ 8 ಯೋಜನೆಗಳು
ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿರುವ ಕರ್ನಾಟಕ ಹೊರತುಪಡಿಸಿ ಉಳಿದ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಬಿಜೆಪಿ ನೇರ ಎದುರಾಳಿಯಾಗಿದೆ.
ಆಪ್ ವಿಸ್ತರಣೆಗೆ ಅವಕಾಶ ನೀಡದಿರಿ
"ಅರವಿಂದ್ ಕೇಜ್ರವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ತನ್ನ ನೆಲೆಯನ್ನು ವಿಸ್ತರಿಸಲು, ಸಂಘಟನೆಯನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಘಟಕಗಳು ಇದಕ್ಕೆ ಅವಕಾಶ ನೀಡಬಾರದು,'' ಎಂದು ಬಿಜೆಪಿ ಕಾರ್ಯಕಾರಿಣಿಯ ಹಿರಿಯ ಸದಸ್ಯರು ಹೇಳಿದರು.
ಆಪ್ ನಾಯಕರಿಗೆ ಬಿಜೆಪಿ ಸ್ವಾಗತ
"ಯಾವುದೇ ಪೂರ್ವ ಷರತ್ತಿಲ್ಲದೇ ಬಿಜೆಪಿ ಸೇರಲು ಆಸಕ್ತಿ ಹೊಂದಿರುವ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನಾ ಜವಾಬ್ದಾರಿ ಹೊಂದಿರುವ ಆಪ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ಬಿಜೆಪಿ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ,'' ಎಂದು ಅವರು ಮಾಹಿತಿ ನೀಡಿದರು.
ಆಪ್ ವೇಗಕ್ಕೆ ಬಿಜೆಪಿ ಬ್ರೇಕ್
ಹಿಮಾಚಲ ಪ್ರದೇಶದ ಉನ್ನತ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಿಸುವ ಆಪ್ ಮಹಾತ್ವಾಕಾಂಕ್ಷೆಯ ಯೋಜನೆಗೆ ಏಪ್ರಿಲ್ನಲ್ಲಿ ಬಿಜೆಪಿ ದೊಡ್ಡ ಆಘಾತವನ್ನು ನೀಡಿತ್ತು.
" ಗುಜರಾತ್ನ ವಿವಿಧ ಹಂತಗಳಲ್ಲಿ ಸ್ಥಾನ-ಮಾನಗಳನ್ನು ಹೊಂದಿರುವ 500ಕ್ಕೂ ಹೆಚ್ಚು ಆಪ್ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸೇರಿದ್ದಾರೆ. ಅಲ್ಲದೇ ಉತ್ತರಾಖಂಡದಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಇತರ ನಾಯಕರು ಬಿಜೆಪಿ ಸೇರಿದರು,'' ಎಂದರು.
ನಿರ್ಧಿಷ್ಟ ಕಾರ್ಯತಂತ್ರಗಳನ್ನು ರೂಪಿಸಿ
"ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಂತರ ಹೊಸ ಹೊಸ ರಾಜ್ಯಗಳಲ್ಲಿ ಪಕ್ಷವನ್ನು ವಿಸ್ತರಿಸಲು ಎಎಪಿ ಪ್ರಯತ್ನಸುತ್ತಿದೆ. ಆದರೆ ಚುನಾವಣೆಗೆ ಸಜ್ಜಾಗುತ್ತಿರುವ ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಉತ್ತರಾಖಂಡದಲ್ಲಿ ಆಪ್ನ ಹಿರಿಯ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಅರವಿಂದ್ ಕೇಜ್ರಿವಾಲ್ ಯೋಜನೆಗೆ ಬಿಜೆಪಿ ದೊಡ್ಡ ಹೊಡೆತ ನೀಡಿದೆ. ಅಲ್ಲದೇ ಇದು ಮುಂದುವರಿಯಲಿದೆ,'' ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.
ಸ್ಥಳೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅದರ ಆಧಾರದ ಮೇಲೆ ನಿರ್ದಿಷ್ಟ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಬಿಜೆಪಿ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ
"ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪ್ರತಿ ರಾಜ್ಯದ ಅಭಿವೃದ್ಧಿ ಮಾದರಿಗಳೊಂದಿಗೆ ಆಪ್ನ ಕಾರ್ಯತಂತ್ರಗಳನ್ನು ಎದುರಿಸಲಾಗುವುದು. ಹಿಮಾಚಲ ಪ್ರದೇಶ ಸರಕಾರವು ಅಸ್ತಿತ್ವದಲ್ಲಿರುವ ತನ್ನ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಆಪ್ನ ಕಾರ್ಯತಂತ್ರಗಳನ್ನು ಎದುರಿಸಿದೆ. ಇನ್ನೊಂದೆಡೆ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಆಪ್ ಯೋಜನೆಗಳನ್ನು ಮಣಿಸಲಾಗುವುದು,'' ಎಂದು ಬಿಜೆಪಿ ಕಾರ್ಯಕಾರಿಣಿಯ ಹಿರಿಯ ಸದಸ್ಯರು ಹೇಳಿದರು.
ಬಿಜೆಪಿಯಿಂದ 'ಪೋಲ್ ಕೋಲ್' ಅಭಿಯಾನ
"ಏತನ್ಮಧ್ಯೆ ಅರವಿಂದ್ ಕೇಜ್ರಿವಾಲ್ ಅವರ ದೆಹಲಿಯ ವಿಫಲ ಮಾದರಿ ವಿರುದ್ಧ ದಾಳಿಯನ್ನು ತೀವ್ರಗೊಳಿಸುವಂತೆ ದೆಹಲಿಯ ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಲಾಗಿದೆ. ಈಗಾಗಲೇ ಆಪ್ ಸರಕಾರದ ವಿರುದ್ಧ ಮನೆ ಮನೆಗೆ 'ಪೋಲ್ ಕೋಲ್' ಅಭಿಯಾನವನ್ನು ದೆಹಲಿಯ ರಾಜ್ಯ ಬಿಜೆಪಿ ಘಟಕ ಪ್ರಾರಂಭಿಸಿದೆ,'' ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.