ಕೊರೊನಾವೈರಸ್ ಸೋಂಕು ಹರಡಲು ಕಾರಣ ಯಾರು?
ನವದೆಹಲಿ, ಆಗಸ್ಟ್.26: ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಬೇಜವಾಬ್ದಾರಿ ಮನುಷ್ಯರೇ ಕಾರಣವಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡೈರೆಕ್ಟರ್ ಜನರಲ್ ಡಾ.ಬಾಲರಾಮ್ ಭಾರ್ಗವ್ ದೂಷಿಸಿದ್ದಾರೆ.
Recommended Video
ದೇಶದಲ್ಲಿ ಕೊವಿಡ್-19 ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಸೋಂಕು ಹರಡುವಿಕೆಗೆ ಈ ಬೇಜವಾಬ್ದಾರಿಯುತ ಜನರು ಕಾರಣೀಕರ್ತರಾಗುತ್ತಿದ್ದಾರೆ. ಇದರಲ್ಲಿ ನಾನು ಯುವಕರು ಮತ್ತು ವೃದ್ಧರು ಎಂದು ಪ್ರತ್ಯೇಕವಾಗಿ ವಿಭಾಗಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಸೋಂಕಿನ ಬಗ್ಗೆ ಬಹುತೇಕ ಜನರು ನಿರ್ಲಕ್ಷ್ಯ ವಹಿಸಿದ್ದಾರೆ.
ಈ 5 ದೇಶಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?
ಭಾರತದಲ್ಲಿ ಕೊರೊನಾವೈರಸ್ ಸೋಂಕು ಒಂದು ಸಾಂಕ್ರಾಮಿಕ ಪಿಡುಗಿನಂತೆ ಹರಡುವುದಕ್ಕೆ ಈ ನಿರ್ಲಕ್ಷ್ಯವೇ ಮೂಲವಾಗಿದೆ. ಮಹಾಮಾರಿಯ ಬಗ್ಗೆ ಜನರಲ್ಲಿ ಮೊದಲಿಗಿದ್ದ ಭಯವು ಈಗಿಲ್ಲ. ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ ಎಂದು ಡಾ.ಬಾಲರಾಮ್ ಭಾರ್ಗವ್ ಆರೋಪಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸುವವರಲ್ಲೇ ಸೋಂಕು:
ಕೊರೊನಾವೈರಸ್ ಸೋಂಕಿನಿಂದ ಸದಾ ಎಚ್ಚರಿಕೆ ವಹಿಸುವ ಜನರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದರೆ ಸೋಂಕು ಹರಡುವಿಕೆಗೆ ಆ ಜನರು ಕಾರಣವಾಗಿರುವುದಿಲ್ಲ. ಬದಲಿಗೆ ಯಾವುದೇ ಮುನ್ನೆಚ್ಚರಿಕೆಗಳಿಲ್ಲದೇ, ಬೇಜವಾಬ್ದಾರಿಯಾಗಿ ನಡೆದುಕೊಳ್ಳುವ ಮಂದಿಯೇ ಸೋಂಕನ್ನು ಹರಡುವಂತೆ ಮಾಡುತ್ತಿದ್ದಾರೆ ಎಂದು ಡಾ.ಬಾಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಮಾಸ್ಕ್ ಧರಿಸಿದವರಲ್ಲಿ ಸೋಂಕು ಕಡಿಮೆ:
ಸಾರ್ವಜನಿಕ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪಾರಾಗಲು ಮಾಸ್ಕ್ ಧರಿಸುವುದಷ್ಟೇ ಸಾಕಾಗುತ್ತದೆ ಎನ್ನುವುದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿದ ಜನರಿಗೆ ಸೋಂಕು ಅಂಟಿಕೊಂಡ ಪ್ರಕರಣಗಳು ವಿರಳವಾಗಿರುವುದು ಕಂಡು ಬಂದಿದೆ. ಆದರೆ ಮಾಸ್ಕ್ ಧರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಜನರು ತಮ್ಮನ್ನು ತಾವೇ ಅಪಾಯಕ್ಕೊಡ್ಡಿಕೊಳ್ಳುತ್ತಿದ್ದಾರೆ ಎಂದು ಡಾ.ಬಾಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಭಾರತದಲ್ಲಿ ಮಂಗಳವಾರ ಒಂದೇ ದಿನ 60975 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಂಗಳವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 848 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 58390ಕ್ಕೆ ಏರಿಕೆಯಾಗಿದೆ. ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 3167324ಕ್ಕೆ ಏರಿಕೆಯಾಗಿದೆ. ಈ ಪೈಕಿ 24,04,585 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 7,04,348 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.