ವಿಮಾನ ನಿಲ್ದಾಣಗಳ ಬಿಡ್ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪ
ನವದೆಹಲಿ, ಅಕ್ಟೋಬರ್ 13: ದೇಶದ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಏರ್ಪೋರ್ಟ್ ಸಂಸ್ಥೆಗೆ ಒಪ್ಪಿಸುವ ನಿರ್ಧಾರದಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯಸಭೆ ಸದಸ್ಯ ಎಲಮಾರನ್ ಕರೀಮ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಕೇಂದ್ರ ವಿಚಕ್ಷಣಾ ಆಯೋಗಕ್ಕೆ (ಸಿವಿಸಿ) ದೂರು ನೀಡಿದ್ದಾರೆ.
ಈ ದೂರನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಿವಿಸಿ ರವಾನಿಸಿದ್ದು, ಸಚಿವಾಲಯವು ಈ ಕುರಿತು ತನಿಖೆ ನಡೆಸುವ ನಿರೀಕ್ಷೆಯಿದೆ.
ಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಆರು ವಿಮಾನ ನಿಲ್ದಾಣಗಳನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಿರುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ. ಈ ನಿರ್ಧಾರದ ಸಂದರ್ಭದಲ್ಲಿ ಸರ್ಕಾರವು ಅನಗತ್ಯ ಅವಸರ ತೋರಿದೆ ಎಂದು ಸಿಪಿಎಂ ಸಂಸದ ಕರೀಮ್ ದೂರಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯವು ನಮ್ಮ ರಾಷ್ಟ್ರೀಯ ಸಂಪತ್ತಿಗೆ ಸೂಕ್ತ ಬೆಲೆ ದೊರಕುವಂತೆ ಪ್ರಯತ್ನ ಮಾಡುವ ಬದಲು 2019ರ ಫೆಬ್ರವರಿ 28ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಆತುರ ಮಾಡಿದೆ. ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯ ಹಿತಾಸಕ್ತಿಗೆ ಅನುಕೂಲವಾಗುವಂತೆ ಅಹ್ಮದಾಬಾದ್, ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲು ಅದಾನಿ ಎಂಟರ್ಪ್ರೈಸಸ್ಗೆ ಇದೇ ಸಚಿವಾಲಯವು ಅವಧಿ ವಿಸ್ತರಿಸಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಸದ್ಯದ ಹವಾಮಾನ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆ ಸಾಧ್ಯವಿಲ್ಲ: ಅದಾನಿ ಗ್ರೂಪ್
ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 50 ವರ್ಷಗಳವರೆಗೆ ಅಹ್ಮದಾಬಾದ್, ಲಕ್ನೋ, ಮಂಗಳೂರು, ತಿರುವನಂತಪುರಂ, ಜೈಪುರ ಮತ್ತು ಗುವಾಹಟಿಯ ಆರು ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ನಿಭಾಯಿಸುವ ಬಿಡ್ಸ್ಗಳನ್ನು 2019ರ ಫೆಬ್ರವರಿಯಲ್ಲಿ ಅದಾನಿ ಸಮೂಹ ಪಡೆದುಕೊಂಡಿತ್ತು.