ಜರ್ಸಿಯಲ್ಲಿ ಹೆಸರು ಬದಲಿಸಿಕೊಂಡ ಕೊಹ್ಲಿ, ಎಬಿಡಿ: ಕೋವಿಡ್ ಹೀರೊಗಳಿಗೆ ಅರ್ಪಣೆ
ದುಬೈ, ಸೆಪ್ಟೆಂಬರ್ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇಲ್ಲಿದೆ ಹೆಮ್ಮೆ ಪಡುವಂತಹ ಸುದ್ದಿ. ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಜರ್ಸಿಯಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅಯ್ಯೋ, ಹೆಸರು ಬದಲಿಸಿಕೊಂಡರೆ ಹೆಮ್ಮೆ ಪಡುವ ವಿಷಯ ಏನಪ್ಪಾ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡಬಹುದು. ಅದಕ್ಕೆ ಇಲ್ಲಿದೆ ಉತ್ತರ
ಆರ್ಸಿಬಿಯ ಮೊದಲ ಪಂದ್ಯಕ್ಕೂ ಮೊದಲೇ ಕೊಹ್ಲಿ ಮತ್ತು ಎಬಿಡಿ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಸಂದೇಶ ನೋಡೋಕೆ ಸಿಂಪಲ್ ಆಗಿದ್ರೂ ಬಹಳ ಅರ್ಥಪೂರ್ಣವಾಗಿದೆ.
IPL 2020: ಈ ಐವರು ಬ್ಯಾಟ್ಸ್ಮನ್ಗಳು ಬಲು ಡೇಂಜರಸ್
ಇಡೀ ಜಗತ್ತು ಕೊರೊನಾವೈರಸ್ ಸಂಕಷ್ಟದಲ್ಲಿ ಮುಳುಗಿದ್ದು, ಈ ವೇಳೆ ಕೊರೊನಾ ವಾರಿಯರ್ಸ್ ಸೇವೆ ಮರೆಯುವ ಹಾಗಿಲ್ಲ.ಹಾಗೆಯೇ ಎಲೆಮರೆಕಾಯಿಯಂತೆ ಸೇವೆ ಮಾಡಿರುವ ಹೀರೋಗಳು ಇದ್ದಾರೆ. ಇಂತವರಿಗೆ ಕೊಹ್ಲಿ ಮತ್ತು ಎಬಿಡಿ ಟ್ರಿಬ್ಯೂಟ್ ನೀಡಿದ್ದಾರೆ.
ವಿರಾಟ್ ಕೊಹ್ಲಿಯು ತಮ್ಮ ಜರ್ಸಿಯಲ್ಲಿ ಸಿಮ್ರನ್ಜಿತ್ ಸಿಂಗ್ ಎಂಬುವವರ ಹೆಸರನ್ನು ಹೊಂದಿದ್ದಾರೆ. ಸಿಮ್ರನ್ಜಿತ್ ಸಿಂಗ್ ಕೊರೊನಾ ಸಂಕಷ್ಟದಲ್ಲಿ ನೂರಾರು ಜನರ ಸಹಾಯಕ್ಕೆ ನಿಂತಿದ್ದಾರೆ. ತನ್ನದೇ ಸ್ವಂತ ಹಣ ಖರ್ಚು ಮಾಡಿ ಅನೇಕ ಜನರನ್ನು ಅವರವರ ಊರುಗಳಿಗೆ ತಲುಪಿಸಿದ್ದಾರೆ. ಸಿಮ್ರನ್ಜಿತ್ ಸಿಂಗ್ ತಮ್ಮ ಸ್ನೇಹಿತರ ಜೊತೆಗೂಡಿ 98,000 ರೂಪಾಯಿ ಸಂಗ್ರಹಿಸಿ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ.
ಇನ್ನು ಎಬಿ ಡಿವಿಲಿಯರ್ಸ್ ತಮ್ಮ ಜೆರ್ಸಿಯಲ್ಲಿ ಪರಿತೋಷ್ ಎಂಬ ಸಾಧಕನ ಹೆಸರನ್ನು ಹೊಂದಿದ್ದಾರೆ. ಪರಿತೋಷ್ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನೂರಾರು ಜನರಿಗೆ ಅನೇಕ ದಿನಗಳು ಊಟದ ವ್ಯವಸ್ಥೆ ಮಾಡಿದ್ದಾರೆ. ನಡೆದುಕೊಂಡು ಮನೆಗೆ ಸಾಗುತ್ತಿದ್ದವರ ಹೊಟ್ಟೆ ತುಂಬಿಸಿದ್ದಾರೆ. ಹೀಗಾಗಿ ಈತನ ಸಾಧನೆಗೆ ನನ್ನ ಸೆಲ್ಯೂಟ್ ಎಂದು ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹೀಗಾಗಿ ಕೊಹ್ಲಿ ಮತ್ತು ಎಬಿಡಿ ಇಬ್ಬರು ಕೂಡ ತಮ್ಮ ಜೆರ್ಸಿಯಲ್ಲಿ ಕೊರೊನಾ ಸಂಕಷ್ಟದ ದಿನಗಳ ಸಾಧಕರ ಹೆಸರನ್ನು ಉಲ್ಲೇಖಿಸಿರುವುದು, ಇತರ ತಂಡಗಳು ಮತ್ತು ಆಟಗಾರರಿಗೆ ಪ್ರೇರಣೆಯಾಗಿದೆ.