ಸಿಬಿಐ ಬಂಧನ ಭೀತಿಯಿಂದ ಪಾರಾದ ಮಾಜಿ ಸಚಿವ ಪಿ. ಚಿದಂಬರಂ
ನವದೆಹಲಿ, ಮೇ 31: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಸದ್ಯಕ್ಕೆ ನಿರಾಳರಾಗಿದ್ದಾರೆ.
ಸಿಬಿಐ ನಿಂದ ಜುಲೈ 3ರವರೆಗೆ ಪಿ. ಚಿದಂಬರಂರನ್ನು ಬಂಧಿಸದಂತೆ ನ್ಯಾಯಾಲಯ ಮಧ್ಯಂತರ ಭದ್ರತೆ ನೀಡಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಚಿದಂಬರಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನಿರಾಕರಿಸಿದ್ದಾರೆ. "ವಿಷಯಗಳನ್ನು ಚರ್ಚೆ ಮಾಡಲು ಇದು ಸರಿಯಾದ ಸಮಯವಲ್ಲ," ಎಂದಿದ್ದಾರೆ.
ನಿನ್ನೆಯಷ್ಟೇ ಏರ್ಸೆಲ್ - ಮಾಕ್ಸಿಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಜೂನ್ 5ರ ವರೆಗೆ ಬಂಧನ ಭೀತಿಯಿಂದ ಚಿದಂಬರಂ ಪಾರಾಗಿದ್ದರು.
ಇದಾದ ಬಳಿಕ ಬುಧವಾರ ಅವರು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಜಾಮೀನು ಅರ್ಜಿಯಲ್ಲಿ ಅವರು, "ತನಿಖೆ ದುರುದ್ದೇಶಪೂರಿತವಾಗಿದೆ. ಅರ್ಜಿದಾರನು ಸಿಬಿಐ ಮುಂದೆ ಕಾಣಿಸಿಕೊಳ್ಳುತ್ತಾನೆ ಮತ್ತು ತನಿಖೆಗೆ ಸಹಕಾರ ನೀಡುತ್ತಾನೆ" ಎಂದು ಹೇಳಿದ್ದರು.
ಪ್ರಕರಣದಲ್ಲಿ ವಿಚಾರಣೆಗೆ ಮೇ 31ರಂದು ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಮಾಜಿ ಹಣಕಾಸು ಸಚಿವರಿಗೆ ನಿರ್ದೇಶನ ನೀಡಿತ್ತು.
ಈ ಹಿಂದೆ ತನಿಖಾ ಸಂಸ್ಥೆಯು ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ಫೆಬ್ರವರಿ 28ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದು.