ಜಮ್ಮು: ಫಾರೂಕ್ ಅಬ್ದುಲ್ಲಾ ಮನೆಗೆ ನುಗ್ಗಿದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ
ಜಮ್ಮು, ಆಗಸ್ಟ್ 4: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ನಿವಾಸದೊಳಗೆ ನುಗ್ಗಲು ಯತ್ನಿಸಿದ್ದ ವ್ಯಕ್ತಿಯ ಮೇಲೆ ಗುಂಡಿ ಹಾರಿಸಿ ಹತ್ಯೆ ಮಾಡಲಾಗಿದೆ.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಮಗ ಒಮರ್ ಅಬ್ದುಲ್ಲಾ ವಾಸಿಸುವ ಮನೆಯ 'ಝೆಡ್ ಪ್ಲಸ್' ಭದ್ರತೆಯನ್ನು ಭೇದಿಸಿ ಒಳನುಗ್ಗಿದ ವ್ಯಕ್ತಿಯನ್ನು ಸಿಆರ್ಪಿಎಫ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರು ನಾಯಕರೂ ಮನೆಯಲ್ಲಿ ಇರಲಿಲ್ಲ. ವ್ಯಕ್ತಿಯು ಸುಮಾರು 20 ವರ್ಷದವನು ಎಂದು ಹೇಳಲಾಗಿದೆ.
ಕಾಶ್ಮೀರ: ಐವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ
ಆತನ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರಲ್ಲಿ ಗಡಿಭಾಗದ ಪೂಂಚ್ ಜಿಲ್ಲೆಯ ಮುರಾದ್ ಅಲಿ ಶಾ ಎಂದು ವಿಳಾಸ ದಾಖಲಾಗಿದೆ.
ಈ ವೇಳೆ ಸಿಆರ್ಪಿಎಫ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
'ಆತ ಯಾವುದೇ ಆಯುಧವನ್ನು ತಂದಿರಲಿಲ್ಲ. ವಿಐಪಿ ಪ್ರದೇಶದಲ್ಲಿ ಬಲವಂತವಾಗಿ ಒಳನುಗ್ಗಿ ಲಾಬ್ಬಿ ಪ್ರದೇಶವನ್ನು ಹಾಳುಮಾಡಿದ್ದಲ್ಲದೆ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ' ಎಂದು ಜಮ್ಮು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಸಿಆರ್ಪಿಎಫ್ ಸಿಬ್ಬಂದಿ ಆತನನ್ನು ಹತ್ಯೆ ಮಾಡಲು ಕಾರಣವಾದ ಸಂದರ್ಭಗಳ ಬಗ್ಗೆ ಅವರು ವಿವರ ನೀಡಿಲ್ಲ.
ಕಾರ್ನಲ್ಲಿ ಬಂದಿದ್ದ ಆತ, ಮನೆಯೊಳಗೆ ಪ್ರವೇಶಿಸುವ ಮುನ್ನ ಆತ ಕರ್ತವ್ಯದಲ್ಲಿದ್ದ ಅಧಿಕಾರಿ ಜತೆ ಕೈಕೈ ಮಿಲಾಯಿಸಿದ್ದ. ಅವರಿಗೆ ಗಾಯ ಮಾಡಿದ್ದ ಎಂದು ಜಮ್ಮು ಪೊಲೀಸ್ ಅಧಿಕಾರಿ ವಿವೇಕ್ ಗುಪ್ತಾ ತಿಳಿಸಿದ್ದಾರೆ.
ತಮ್ಮ ಮಗನ ಸಾವಿಗೆ ಕಾರಣವಾದ ಭದ್ರತಾ ಪಡೆಗಳ ವಿರುದ್ಧ ವ್ಯಕ್ತಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಅವನು ಕಳೆದ ರಾತ್ರಿ ನನ್ನ ಜತೆಯೇ ಇದ್ದ. ಪ್ರತಿ ದಿನ ಜಿಮ್ಗೆ ಹೋಗುತ್ತಿದ್ದ ಮತ್ತು ಇಂದು ಬೆಳಿಗ್ಗೆ ಸಹ ಹೋಗಿದ್ದ. ಆತನನ್ನು ಏಕೆ ಕೊಲ್ಲಲಾಯಿತು ಎಂಬುದು ನನಗೆ ಗೊತ್ತಾಗಬೇಕು. ಆತ ಗೇಟ್ನಿಂದ ಒಳನುಗ್ಗುವಾಗ ಭದ್ರತಾ ಸಿಬ್ಬಂದಿ ಎಲ್ಲಿ ಹೋಗಿದ್ದರು? ಆತನನ್ನು ಏಕೆ ಬಂಧಿಸಲಿಲ್ಲ?' ಎಂದು ಅವರು ಪ್ರಶ್ನಿಸಿದ್ದಾರೆ.
ಮುರಾದ್ ಅಲಿಯ ತಂದೆ ಜಮ್ಮುವಿನ ಬಂಟಾಲಾಬ್ನಲ್ಲಿ ಬಂದೂಕಿನ ಅಂಗಡಿ ನಡೆಸುತ್ತಿದ್ದಾರೆ.
ಮನೆಯೊಳಗಿನ ಒಂದು ಟೀಪಾಯಿ, ಮರದ ಬಾಗಿಲು ಮತ್ತು ಹೂವಿನ ಕುಂಡಗಳನ್ನು ಒಡೆಯಲಾಗಿದೆ. ಮನೆಯ ಬೆಡ್ರೂಂಗೆ ಹೋಗುವ ಮೆಟ್ಟಿಲ ಬಳಿ ಆತನನ್ನು ಹತ್ಯೆ ಮಾಡಲಾಗಿದೆ.
ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಆತ ಅದನ್ನು ಲೆಕ್ಕಿಸದೆ ಒಳ ನುಗ್ಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.