ಸಂದರ್ಶನ : ಛೋಟಾ ರಾಜನ್ ಬಂಧನ ಕೇವಲ ಆಕಸ್ಮಿಕ
ಬೆಂಗಳೂರು, ಅಕ್ಟೋಬರ್ 30 : ಇಂಡೋನೇಷ್ಯಾದ ಬಾಲಿಯಲ್ಲಿ ಬಂಧನಕ್ಕೊಳಗಾಗಿರುವ ಭೂಗತ ದೊರೆ ಛೋಟಾ ರಾಜನ್ನನ್ನು ಭಾರತಕ್ಕೆ ಕರೆ ತರುತ್ತಿರುವುದು ಮತ್ತೊಬ್ಬ ಭೂಗತ ದೊರೆ, 1993 ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂನನ್ನು ಹೆಡೆಮುರಿಕಟ್ಟಿ ಭಾರತಕ್ಕೆ ಎಳೆತರುವುದಕ್ಕಾ ಅಥವಾ ಆತನ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವುದಕ್ಕಾ?
ಹೀಗೆಂದು ಮಾಧ್ಯಮಗಳಲ್ಲಿ ಎಲ್ಲೆಡೆ ಪ್ರಚಾರ ನೀಡಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಹೊರದೇಶದಿಂದಲೇ ದಾವೂದ್ ಇಬ್ರಾಹಿಂ ಕುರಿತು ಗುಪ್ತಚರ ಇಲಾಖೆಗೆ ಸಾಕಷ್ಟು ಮಾಹಿತಿ ನೀಡುತ್ತಿದ್ದ ಛೋಟಾ ರಾಜನ್ ಇಲ್ಲಿಗೆ ಬಂದು ಇನ್ನೇನು ಹೆಚ್ಚಿಗೆ ಮಾಹಿತಿ ನೀಡಬಲ್ಲ? ಛೋಟಾ ರಾಜನ್ನನ್ನು ಭಾರತಕ್ಕೆ ತರುತ್ತಿರುವುದರ ಹಿಂದಿನ ಅಸಲಿ ಕಾರಣವಾದರೂ ಏನು?
ಈ ಕುರಿತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಸಂಸ್ಥೆಯ ಮಾಜಿ ಅಧಿಕಾರಿ ವಿ ಬಾಲಚಂದ್ರನ್ ಅವರು, ಛೋಟಾ ರಾಜನ್ ಬಂಧನಕ್ಕೆ ಸಂಬಂಧಿಸಿದಂತೆ ಹಲವಾರು ಆಸಕ್ತಿದಾಯಕ ಸಂಗತಿಗಳನ್ನು ಒನ್ಇಂಡಿಯಾ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಛೋಟಾ ರಾಜನ್ ಭದ್ರತೆಗೆ ಸಂಬಂಧಿಸಿದಂತೆ ಭಾರತ ಭಾರೀ ರಿಸ್ಕ್ ತೆಗೆದುಕೊಳ್ಳುತ್ತಿದೆಯಾ? ಸಂದರ್ಶನದ ಮುಂದಿನ ಭಾಗದಲ್ಲಿ ಓದಿ... [ಭಾರತಕ್ಕೆ ಹೋದ್ರೆ ನಾನು ಫಿನಿಷ್]
ದಾವೂದ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಲ್ಲನೆ?
ಇದು ಮಾಧ್ಯಮದ ವಿಶ್ಲೇಷಣೆ. ರಾಜನ್ನಿಂದ ದಾವೂದ್ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಬಹುದು ಅಂತ ಹೇಳುತ್ತಿರುವುದು ಮಾಧ್ಯಮಗಳು ಮಾತ್ರ. ನಮ್ಮ ಗುರಿ ದಾವೂದ್ ಇಬ್ರಾಹಿಂನನ್ನು ಹಿಡಿಯುವುದಿರುವಾಗ ರಾಜನ್ ಬಂಧನ ನಿಜಕ್ಕೂ ಆಶ್ಚರ್ಯಕರ. ಅಲ್ಲದೆ, ದಾವೂದ್ ನಿಂದಲೇ ತಲೆಮರೆಸಿಕೊಂಡು ಓಡಾಡುತ್ತಿರುವ ರಾಜನ್ ದಾವೂದ್ ಬಗ್ಗೆ ಇನ್ನೇನು ಹೆಚ್ಚಿನ ಮಾಹಿತಿ ನೀಡಬಲ್ಲ?
ಛೋಟಾ ರಾಜನ್ ಸ್ವತಃ ಶರಣಾಗಿದ್ದಾನಾ?
ನನಗೆ ಹಾಗೆನೂ ಅನ್ನಿಸುವುದಿಲ್ಲ. ಇಂಡೋನೇಷ್ಯಾದ ಬಾಲಿಯಲ್ಲಿ ಛೋಟಾ ರಾಜನ್ ಬಂಧನವಾದದ್ದು ಕೇವಲ ಆಕಸ್ಮಿಕ ಎಂಬುದು ನನ್ನ ಅಭಿಮತ. ಈ ಸಂಗತಿ ಗುಪ್ತಚರ ಇಲಾಖೆಯಲ್ಲಿಯೇ ಭಾರೀ ಜಿಜ್ಞಾಸೆಗೆ, ಚರ್ಚೆಗೆ ಕಾರಣವಾಗಿದೆ.
ಭಾರತ ರಿಸ್ಕ್ ತೆಗೆದುಕೊಂಡಿದೆ ಎಂದು ಹೇಳಿದ್ದಿರಿ
ರಾಜನ್ ಜೀವ ಗಂಡಾಂತರದಲ್ಲಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದ ಜೈಲುಗಳಲ್ಲಿ ಇರುವ ಭ್ರಷ್ಟಾಚಾರವನ್ನು ಗಮನಿಸಿದರೆ ರಾಜನ್ಗೆ ಭೇದಿಸಲಾಗದಂಥ ಭದ್ರತೆ ನೀಡುತ್ತೇವೆಂಬ ಹೇಳಿಕೆ ಮೂರ್ಖತನದ್ದು. ಐಬಿ ಈ ವಿಷಯದಲ್ಲಿ ಭಾರೀ ರಿಸ್ಕ್ ತೆಗೆದುಕೊಂಡಿದೆ. ಆತನನ್ನು ನಿಯಮಿತವಾಗಿ ಕೋರ್ಟಿಗೆ, ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗಬೇಕು. ಇದು ಸರಳವಾದ ಸಂಗತಿಯಲ್ಲ.
ರಾಜನ್ ಬಂಧನ ಮೆಗಾ ಧಾರಾವಾಹಿಯಂತೆ
ಹಲವಾರು ಕಾರಣಗಳಿಗಾಗಿ ನಾನು ಇದನ್ನು ಹೇಳಿದ್ದೇನೆ. ಮೊದಲಿಗೆ, ದೂರದರ್ಶನದಲ್ಲಿ ರಾಜನ್ ಬಂಧನದ ಬಗ್ಗೆ ಹುಯಿಲೆಬ್ಬಿಸಲಾಯಿತು. ದಾವೂದ್ ಬಂಧನಕ್ಕೆ ರಾಜನ್ ಸುಳಿವು ನೀಡಬಲ್ಲ ಎಂಬ ಅಧಿಕಾರಿಯೊಬ್ಬರ ಹೇಳಿಕೆ ಮತ್ತೂ ಹಾಸ್ಯಾಸ್ಪದ. ರಾಜನ್ ಜೊತೆ ಐಬಿ ಸತತ ಸಂಪರ್ಕದಲ್ಲಿತ್ತು ಎಂಬುದನ್ನು ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಹೇಳಿದ್ದಾರೆ. ದಾವೂದ್ ಬಂಧನಕ್ಕೆ ಹಾಕಿದ್ದ ಪ್ಲಾನ್, ಅದನ್ನು ಕೆಲ ಮುಂಬೈ ಪೊಲೀಸ್ ಅಧಿಕಾರಿಗಳು ಹಾಳುಗೆಡವಿದ್ದು, ದಾವುದ್ ಬಲೆಗೆ ಛೋಟಾ ರಾಜನ್ ತಂಡದವರ ಸಹಾಯ ಪಡೆದಿದ್ದೆಲ್ಲವನ್ನೂ ಅವರು ಹೇಳಿದ್ದಾರೆ.
ಐಬಿ ಅಧಿಕಾರಿ ರಾಜನ್ನಲ್ಲಿ ಎಲ್ಲಿಯಾದರೂ ಭೇಟಿಯಾಗಬಹುದಿತ್ತು
ರಾಜನ್ನನ್ನು ಬಂಧಿಸಲೇಬೇಕಾಗಿದ್ದರೆ ಭಾರತಕ್ಕೆ ಈ ಮಾರ್ಗವಲ್ಲ, ಇನ್ನೂ ನೂರು ಮಾರ್ಗಗಳು ಲಭ್ಯವಿವೆ. ರಾಜನ್ ಅಡಗಿಕೊಳ್ಳಲು ಭಾರತ ಅಂತಹ ಸುರಕ್ಷಿತ ದೇಶವಲ್ಲ ಅಂತ ಗುಪ್ತಚರ ಇಲಾಖೆಗೂ ಗೊತ್ತು. ದಾವೂದ್ ಬಗ್ಗೆ ಮಾಹಿತಿಗಾಗಿ ಛೋಟಾ ರಾಜನ್ನನ್ನು ಭಾರತಕ್ಕೇಕೆ ತರಬೇಕಿತ್ತು. ಅದನ್ನು ಇಂಟೆಲಿಜೆನ್ಸ್ ಇಲಾಖೆಯ ಯಾವುದೇ ಅಧಿಕಾರಿ ಬೇರಾವುದೇ ದೇಶದಲ್ಲಿ ಆತನನ್ನು ಭೇಟಿಯಾಗಿ ಪಡೆಯಬಹುದಿತ್ತಲ್ಲ?