ಪಾಕಿಸ್ತಾನದ ಗಲ್ಲು ಶಿಕ್ಷೆಯಿಂದ ಪಾರಾಗಿ ಬರುತ್ತಾರಾ ಜಾಧವ್?
ನವದೆಹಲಿ, ಜುಲೈ 5: ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಅವರ ಭವಿಷ್ಯ ಜುಲೈ 17ರಂದು ನಿರ್ಧಾರವಾಗಲಿದೆ.
ಜಾಧವ್ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಿದ ಸೇನಾ ನ್ಯಾಯಾಲಯದ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಜುಲೈ 17ರಂದು ನಿರ್ಧರಿಸುವ ಸಾಧ್ಯತೆ ಇದೆ.
'ಕುಲಭೂಷಣ್ ಜಾಧವ್ ಅವರ ಪ್ರಕರಣದ ಕುರಿತ ತೀರ್ಪನ್ನು ಕೆಲವೇ ವಾರಗಳಲ್ಲಿ ಘೋಷಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಖಿಕ ಸಲ್ಲಿಕೆ ದಾಖಲಿಸಲಾಗಿದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ
ಫೆಬ್ರವರಿ 18ರಿಂದ ನಾಲ್ಕು ದಿನ ಈ ಪ್ರಕರಣದ ಸಂಬಂಧ ನೆದರ್ಲೆಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸತತ ವಿಚಾರಣೆ ನಡೆಸಲಾಗಿತ್ತು.
ಗಲ್ಲುಶಿಕ್ಷೆಗೆ ತಡೆ ನೀಡಿದ್ದ ನ್ಯಾಯಾಲಯ
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ (48) ಅವರನ್ನು ಪಾಕಿಸ್ತಾನದಲ್ಲಿ ಗೂಢಚಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಅಲ್ಲಿನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು. ಜಾಧವ್ ಅವರ ಗಲ್ಲುಶಿಕ್ಷೆಗೆ 2017ರ ಮೇ 18ರಂದು ತಡೆ ನೀಡಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವವರೆಗೂ ಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ಸೂಚಿಸಿತ್ತು.
ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?
ಇರಾನ್ನಿಂದ ಅಪಹರಿಸಿ ಬಂಧನ
ಜಾಧವ್ ಅವರು ಬೇಹುಗಾರಿಕೆ ಮಾಡುವ ಸಲುವಾಗಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಬಂದಿದ್ದರು. 2016ರ ಮಾರ್ಚ್ 3ರಂದು ಅವರನ್ನು ಬಂಧಿಸಲಾಗಿತ್ತು ಎಂದು ಪಾಕ್ ಆರೋಪಿಸಿತ್ತು.
ಆದರೆ, ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿದ್ದ ಭಾರತ, ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ವಾದಿಸಿದೆ.
ಭಾರತದ ಪರ ವಕೀಲ ಹರೀಶ್ ಸಾಳ್ವೆ ಅವರು ಕೇವಲ ಒಂದು ರೂಪಾಯಿ ಶುಲ್ಕ ಪಡೆದು ಜಾಧವ್ ಅವರ ಪರ ವಾದ ಮಂಡಿಸಿದ್ದರು.
ನಕಲಿ ದಾಖಲೆ ಸೃಷ್ಟಿಸಲಾಗಿದೆ
ಪಾಕಿಸ್ತಾನ ಸೇನೆ ಅಪಹರಣ ಮಾಡಿರುವುದಕ್ಕೆ ಭಾರತದ ಬಳಿ ಸಾಕ್ಷ್ಯ ಇದೆ. ಪಾಕಿಸ್ತಾನ ಜಾಧವ್ ಅವರನ್ನು ವಶಕ್ಕೆ ಪಡೆದುಕೊಂಡ ದಿನಾಂಕವನ್ನು ತಿಳಿಸಿಲ್ಲ.
ಜಾಧವ್ ವಿರುದ್ಧ ತಡವಾಗಿ ಎಫ್ಐಆರ್ ದಾಖಲಿಸಲಾಗಿದೆ. ನಕಲಿ ದಾಖಲೆಗಳ ಮೂಲಕ ಪಾಕಿಸ್ತಾನ ಸುಳ್ಳು ಪ್ರಚಾರ ಮಾಡಿದೆ. ಪಾಕಿಸ್ತಾನವು ಜಾಧವ್ ಅವರ ಪತ್ನಿಯ ಕುರಿತಾದ ವಿವರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಜಾಧವ್ ಅವರ ಗುರುತಿಗಾಗಿ ಭಾರತ ದಾಖಲೆಗಳನ್ನು ಒದಗಿಸಿತ್ತು ಎಂದು ವಾದಿಸಲಾಗಿತ್ತು.
ಪಾಕ್ ವಿದೇಶಾಂಗ ಕಚೇರಿ ವಕ್ತಾರನ ಟ್ವಿಟ್ಟರ್ ಖಾತೆ ಅಮಾನತು
ವಿಚಾರಣೆಯ ದಾಖಲೆ ಒದಗಿಸಿಲ್ಲ
ಜಾಧವ್ ಬಂಧನ ಕಾನೂನು ವಿರೋಧಿ. ಪಾಕಿಸ್ತಾನದ ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ. ಭಾರತ ಆರೋಪಪಟ್ಟಿಯ ಪ್ರತಿಗಳನ್ನು ಕೇಳಿತ್ತು. ಆದರೆ ಇದುವರೆಗೂ ಜಾಧವ್ ವಿಚಾರಣೆಯ ಯಾವ ದಾಖಲೆಗಳನ್ನೂ ಪಾಕಿಸ್ತಾನ ಒದಗಿಸಿಲ್ಲ. ಸಾಕ್ಷಿಗಳ ವಿಚಾರಣೆಗೆ ಸಹ ಅವಕಾಶ ನೀಡಿಲ್ಲ ಎಂದು ಹರೀಶ್ ಸಾಳ್ವೆ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಹೇಳಿದ್ದರು.