ಪಾಕ್ನಲ್ಲಿರುವ ಜಾಧವ್ಗೆ ಗಲ್ಲುಶಿಕ್ಷೆಯೇ? ಬಿಡುಗಡೆಯೇ?: ಬುಧವಾರ ನಿರ್ಧಾರ
ನವದೆಹಲಿ, ಜುಲೈ 16: ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಭವಿಷ್ಯ ನಾಳೆ (ಜುಲೈ 17) ನಿರ್ಧಾರವಾಗಲಿದೆ.
ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಪ್ರಕರಣದ ಕುರಿತು ನೆದರ್ಲ್ಯಾಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಹೊರಡಿಸುವ ನಿರೀಕ್ಷೆಯಿದೆ.
ಕುಲಭೂಷಣ್ ಅವರು ಗಲ್ಲುಶಿಕ್ಷೆಯಿಂದ ಪಾರಾಗಿ ಬಿಡುಗಡೆ ಹೊಂದಿ ಭಾರತಕ್ಕೆ ಮರಳುತ್ತಾರೆಯೇ ಅಥವಾ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿಯುತ್ತದೆಯೇ? ಅಥವಾ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ ಇನ್ನಷ್ಟು ಸಮಯ ಜೈಲಿನಲ್ಲಿ ಇರುವಂತೆ ತೀರ್ಪು ನೀಡಲಿದೆಯೇ ಎಂಬ ಕುತೂಹಲ ಮೂಡಿದೆ.
ಈ ತೀರ್ಪು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಹದಗೆಟ್ಟಿರುವ ಉಭಯ ದೇಶಗಳ ಸಂಬಂಧದ ನಡುವೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಈ ತೀರ್ಪು ಬಹಳ ಸೂಕ್ಷ್ಮವಾಗಿರಲಿದೆ. ಒಂದು ವೇಳೆ ಜಾಧವ್ ಅವರ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿದರೆ ಅದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಉಂಟುಮಾಡಲಿದೆ. ಪಾಕಿಸ್ತಾನದ ಪರ ತೀರ್ಪು ಬಂದರೆ ಭಾರತಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ.
ಪಾಕಿಸ್ತಾನದ ಗಲ್ಲು ಶಿಕ್ಷೆಯಿಂದ ಪಾರಾಗಿ ಬರುತ್ತಾರಾ ಜಾಧವ್?
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಕಡ್ಡಾಯವಾಗಿ ಜಾರಿಯಾಗಬೇಕಿದ್ದರೂ ಅದರ ಆದೇಶಗಳನ್ನು ಸದಸ್ಯ ರಾಷ್ಟ್ರಗಳು ಯಾವಾಗಲೂ ಒಪ್ಪಿಕೊಳ್ಳುತ್ತವೆ ಎನ್ನುವಂತಿಲ್ಲ. ನ್ಯಾಯಾಲಯದ ತೀರ್ಪಿನ ಆಚೆಗೆ ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಸ್ಥಿತಿಗತಿಯು ಒಟ್ಟಾರೆ ನಡೆಯನ್ನು ನಿರ್ಧರಿಸಲಿದೆ.
ಸಂಬಂಧ ವೃದ್ಧಿಗೆ ಬಿಡುಗಡೆ ಅನಿವಾರ್ಯ
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಏನೇ ಇದ್ದರೂ ಭಾರತದೊಂದಿಗಿನ ಸಂಬಂಧ ಸುಧಾರಣೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಪಾಕಿಸ್ತಾನವು ಜಾಧವ್ ಅವರ ಬಿಡುಗಡೆಗೆ ಆದೇಶಿಸಿದರೂ ಅಚ್ಚರಿಯಿಲ್ಲ.
ಪಾಕಿಸ್ತಾನದ ಸೇನಾ ನ್ಯಾಯಾಲಯವು 2017ರಲ್ಲಿ ಜಾಧವ್ ಅವರ ಮೇಲೆ ಭಯೋತ್ಪಾದನೆ ಮತ್ತು ಗೂಢಚರ್ಯೆಯ ಆರೋಪ ಹೊರಿಸಿ ಗಲ್ಲುಶಿಕ್ಷೆ ವಿಧಿಸಿತ್ತು. ಅದಕ್ಕೆ ಅಲ್ಲಿನ ಸೇನಾಧಿಕಾರಿ ಖಮರ್ ಬಾಜ್ವಾ ಸಹಿ ಹಾಕಿದ್ದರು.
ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ
ವಿಯೆನ್ನಾ ಒಪ್ಪಂದದ ಉಲ್ಲಂಘನೆ ಆರೋಪ
ಆದರೆ, ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯವು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿ ಸಲ್ಲಿಸಿದ ಬಳಿಕ ಗಲ್ಲುಶಿಕ್ಷೆ ಜಾರಿಗೆ ತಡೆ ನೀಡಲಾಗಿತ್ತು. ಜಾಧವ್ ಅವರಿಗೆ ಕಾನ್ಸುಲರ್ ಭೇಟಿಯ ಅವಕಾಶ ಕೊಡದೆ ಪಾಕಿಸ್ತಾನವು 1963ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಭಾರತವು ಪಾಕಿಸ್ತಾನದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿತ್ತು.
ವಿಯೆನ್ನಾ ಒಪ್ಪಂದವು ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿತ್ತು. ಜಾಧವ್ ಅವರೊಬ್ಬ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಗೂಢಚಾರಿಯಾಗಿರುವುದರಿಂದ ಅವರಿಗೆ ಕಾನೂನು ಹೋರಾಟ ನಡೆಸಲು ಅವಕಾಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿತ್ತು.
ತಾಯಿ, ಪತ್ನಿ ಭೇಟಿಗೆ ಅವಕಾಶ
ತೀವ್ರ ಒತ್ತಡ ಮತ್ತು ಟೀಕೆಗಳಿಗೆ ಮಣಿದ ಬಳಿಕ 2017ರ ಡಿಸೆಂಬರ್ನಲ್ಲಿ ಪಾಕಿಸ್ತಾನವು ಕುಲಭೂಷಣ್ ಜಾಧವ್ ಅವರ ಪತ್ನಿ ಮತ್ತು ತಾಯಿ ಅವರು ಜೈಲಿಗೆ ಭೇಟಿ ನೀಡಲು ಅವಕಾಶ ಕೊಟ್ಟಿತ್ತು. ಇದನ್ನು 'ಇಸ್ಲಾಂ ಸಂಪ್ರದಾಯದಂತೆ ಮತ್ತು ಸಂಪೂರ್ಣ ಮಾನವೀಯತೆ ನೆಲೆಯಲ್ಲಿ' ನೀಡಿದ್ದಾಗಿ ಅದು ಹೇಳಿಕೊಂಡಿತ್ತು. ಆದರೆ, ಇಸ್ಲಾಮಾಬಾದ್ನಲ್ಲಿ ಅವರಿಬ್ಬರನ್ನು ಅಲ್ಲಿ ನಡೆಸಿಕೊಂಡಿದ್ದ ರೀತಿಗೆ ಭಾರತ ಕೆಂಡಾಮಂಡಲವಾಗಿತ್ತು.
ಭಾರತ ನಿರಂತರವಾಗಿ ಮನವಿಗಳನ್ನು ಸಲ್ಲಿಸಿದ್ದರೂ ಜಾಧವ್ ಅವರಿಗೆ ಕಾನ್ಸುಲರ್ ಭೇಟಿಗೆ ನಿರಾಕರಿಸಿತ್ತು. ತನ್ನ ಬೇಹುಗಾರ ಸಂಗ್ರಹಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಭಾರತ ಹತಾಶೆಯಿಂದ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.
ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?
ಬಲೂಚಿಸ್ತಾನದಲ್ಲಿ ಬೇಹುಗಾರಿಕೆ ಆರೋಪ
ಫೆಬ್ರವರಿ 18ರಿಂದ ನಾಲ್ಕು ದಿನ ಈ ಪ್ರಕರಣದ ಸಂಬಂಧ ನೆದರ್ಲೆಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸತತ ವಿಚಾರಣೆ ನಡೆಸಲಾಗಿತ್ತು. ಜಾಧವ್ ಅವರು ಬೇಹುಗಾರಿಕೆ ಮಾಡುವ ಸಲುವಾಗಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಬಂದಿದ್ದರು. 2016ರ ಮಾರ್ಚ್ 3ರಂದು ಅವರನ್ನು ಬಂಧಿಸಲಾಗಿತ್ತು ಎಂದು ಪಾಕ್ ಆರೋಪಿಸಿತ್ತು.
ಆದರೆ, ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿದ್ದ ಭಾರತ, ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಅಪಹರಿಸಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ವಾದಿಸಿದೆ. ಭಾರತದ ಪರ ವಕೀಲ ಹರೀಶ್ ಸಾಳ್ವೆ ಅವರು ಕೇವಲ ಒಂದು ರೂಪಾಯಿ ಶುಲ್ಕ ಪಡೆದು ಜಾಧವ್ ಅವರ ಪರ ವಾದ ಮಂಡಿಸಿದ್ದರು.