ನಮ್ಮನ್ನು ಕೊಲ್ಲಬೇಡಿ, ಬದುಕಲು ಬಿಡಿ: ಪ್ರೇಮಿಗಳ ದಯನೀಯ ಮೊರೆ
ತಿರುವನಂತಪುರಂ, ಜುಲೈ 20: ಪ್ರೀತಿ ಎಂದೂ ಬತ್ತದ ಒರತೆ ಇದಕ್ಕೆ ಉತ್ತಮ ಉದಾಹರಣೆ ಕೇರಳ. ಇತ್ತೀಚೆಗಷ್ಟೆ ಭೀಕರ ಮರ್ಯಾದೆಗೇಡು ಹತ್ಯೆಗೆ ಸಾಕ್ಷಿಯಾದ ಕೇರಳದಲ್ಲಿ ಈಗ ಮತ್ತೊಂದು ಪ್ರೀತಿ ಹುಟ್ಟಿದೆ.
ಕೆಲವು ತಿಂಗಳುಗಳ ಹಿಂದಷ್ಟೆ ದೇಶವನ್ನೇ ದಿಗ್ಭ್ರಮೆಗೊಳಿಸಿದ್ದ ಮರ್ಯಾದೆಗೇಡು ಹತ್ಯೆ ಕೇರಳದಲ್ಲಿ ನಡೆದಿತ್ತು. ಕೆವಿನ್ ಎಂಬ ಕನಸು ಕಂಗಳ ಹುಡುಗ ತನಿಗಿಂತ ಉಚ್ಛ ಜಾತಿಯ, ಉಚ್ಛ ಅಂತಸ್ತಿನ ಯುವತಿಯನ್ನು ಪ್ರೀತಿಸಿದನೆಂದು ಆಕೆಯ ಅಣ್ಣನೇ ಕೆವಿನ್ನನ್ನು ಭೀಕರವಾಗಿ ಹತ್ಯೆ ಮಾಡಿದ್ದ.
'ಇಚಾ' ಲವ್ಸ್ 'ಪೊಣ್ಣಿ': ಇದು ಕೇರಳದ ರಕ್ತಸಿಕ್ತ ಪ್ರೇಮ ಅಧ್ಯಾಯ
ಇಂತಹಾ ಭೀಕರ ಮರ್ಯಾದೆಗೇಡು ಹತ್ಯೆ ನಡೆದ ಅದೇ ಕೇರಳದಲ್ಲಿ, ಧರ್ಮಗಳನ್ನು ಮೀರಿ ಪ್ರೀತಿಯೊಂದು ಮತ್ತೆ ಮೊಳೆದಿದೆ. ಆದರೆ ಅದಕ್ಕೂ ತಮ್ಮನ್ನು ಎಲ್ಲಿ ಮುರುಟಿ ಹಾಕುತ್ತಾರೋ ಎಂಬ ಭಯ ಕಾಡುತ್ತಿದೆ.
ಕ್ರಿಶ್ಚಿಯನ್ ಹುಡುಗ-ಮುಸ್ಲಿಂ ಹುಡುಗಿ
ಬುಧವಾರವಷ್ಟೆ ಹ್ಯಾರಿಸನ್ ಹ್ಯಾರಿಸ್ ಎಂಬ ಕ್ರಿಶ್ಚಿಯನ್ ಹುಡುಗ ಮುಸ್ಲಿಂ ಹುಡುಗಿ ಸಹಾನಾಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಅವರ ಪ್ರೀತಿಗೂ ಧರ್ಮದ ನಂಜು ಕಣ್ಣಿಗೆ ತುಂಬಿಕೊಂಡ ಕೆಲವರು ಕೆಡುಕು ಮಾಡುವ ಬೆದರಿಕೆ ಒಡ್ಡಿದ್ದಾರೆ.
ಎಸ್ಡಿಪಿಐನಿಂದ ಕೊಲೆ ಬೆದರಿಕೆ
ಈ ಯುವಜೋಡಿಯನ್ನು ಕೊಲೆ ಮಾಡುವುದಾಗಿ ಎಸ್ಡಿಪಿಐ ಮತ್ತು ಸಹಾನಾಳ ಕುಟುಂಬ ಸದಸ್ಯರು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಸ್ವತಃ ಯುವ ಜೋಡಿಯೇ ಫೇಸ್ಬುಕ್ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಮದುವೆಯಾದ ನಂತರ ಫೇಸ್ಬುಕ್ ಲೈವ್ ಮಾಡಿರುವ ಈ ಜೋಡಿ, ನಮಗೆ ಸಾಯಲು ಇಷ್ಟವಿಲ್ಲ, ನಮ್ಮನ್ನು ಒಟ್ಟಿಗೆ ಬದುಕಲು ಬಿಡಿ ಎಂದು ಅಂಗಲಾಚಿದ್ದಾರೆ.
ಸಹನಾಳ ಕುಟುಂಬದಿಂದ ಬೆದರಿಕೆ
ವಿಡಿಯೋದಲ್ಲಿ ಮಾತನಾಡಿರುವ ಹ್ಯಾರಿಸ್, ನನಗೆ ಕೆವಿನ್ನಂತೆ ಆಗಲು ಇಷ್ಟವಿಲ್ಲ, ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ, ಒಟ್ಟಾಗಿ ಬಾಳಬೇಕೆಂದು ಮದುವೆಯಾಗಿದ್ದೇವೆ, ನಮ್ಮನ್ನು ಬದುಕಲು ಬಿಡಿ ಎಂದು ಹೇಳಿದ್ದಾರೆ. ಜೊತೆಗೆ ಎಸ್ಡಿಪಿಐ ಮತ್ತು ಸಹಾನಾಳ ಮನೆಯವರು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಮತಾಂತರ ಮಾಡಲಾಗಿಲ್ಲ
ಸಹಾನಾ ಮಾತನಾಡಿ, ಹ್ಯಾರಿಸ್ ನನ್ನು ಮದುವೆಯಾದರೂ ನಾನು ಮುಸ್ಲಿಂ ಆಗಿಯೇ ಇದ್ದೀನಿ, ಆತ ನನ್ನನ್ನು ಮತಾಂತರ ಮಾಡಿಲ್ಲ, ಅಥವಾ ಅದಕ್ಕೆ ಒತ್ತಡವನ್ನೂ ಹೇರಿಲ್ಲ, ನಾನು ನನ್ನ ಸ್ವ-ಇಚ್ಛೆಯಿಂದಲೇ ಹ್ಯಾರಿಸ್ನನ್ನು ಪ್ರೀತಿಸಿದ್ದೇನೆ, ಮದುವೆಯಾಗಿದ್ದೇನೆ, ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ಮನವಿ ಮಾಡಿದ್ದಾಳೆ.
ಸರ್ಕಾರ ರಕ್ಷಣೆ ನೀಡಬೇಕಿದೆ
ನೋಡಿದರೆ ಮನಸು ತುಂಬಿ ಬರುವಂತಿರುವ ಈ ಯುವ ಜೋಡಿಯನ್ನು ರಕ್ತದಲ್ಲಿ ನೆನಸಲು ಮೂಲಭೂತವಾದಿ ಮನಸ್ಸುಗಳು ಹವಣಿಸುತ್ತಿದ್ದು, ಕೇರಳ ಸರ್ಕಾರ ಇವರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಲೇಬೇಕಿದೆ.