Breaking: ಅಂತರ್ಜಾತಿ ವಿವಾಹ, ಬ್ರಾಹ್ಮಣನ ಶವ ಮುಟ್ಟದ ಗ್ರಾಮಸ್ಥರು!
ಗುವಾಹಟಿ, ಆಗಸ್ಟ್ 12: ಮೂರು ದಶಕಗಳ ಹಿಂದೆ ತನ್ನ ಜಾತಿಯ ಹೊರತಾಗಿ ಬೇರೆ ಜಾತಿಯ ಮಹಿಳೆಯನ್ನು ಮದುವೆಯಾಗಿದ್ದ ಬ್ರಾಹ್ಮಣ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರು ಒಪ್ಪದಿರುವ ಘಟನೆ ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಶವವನ್ನು ಮುಟ್ಟಲು ಗ್ರಾಮಸ್ಥರು ನಿರಾಕರಿಸಿದ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಸಹೋದರ ನದಿಯ ದಡದಲ್ಲಿ ಅಂತ್ಯಕ್ರಿಯೆ ಮಾಡದೆಯೇ ಸಮಾಧಿ ಮಾಡಿದ್ದಾರೆ. ಈಗ ಮಧ್ಯ ಅಸ್ಸಾಂನ ದರಾಂಗ್ ಜಿಲ್ಲೆಯ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ.
60 ವರ್ಷದ ಮೃತನ ಕುಟುಂಬದವರ ಆಶಯದಂತೆ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ದರಾಂಗ್ ಜಿಲ್ಲಾಧಿಕಾರಿ ಪ್ರಣಬ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಅತುಲ್ ಶರ್ಮಾ ಎಂಬುವವರು 27 ವರ್ಷಗಳ ಹಿಂದೆ ರಾಜ್ಯದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿರುವ ಕೋಚ್ ಸಮುದಾಯದ ಪ್ರಣಿತಾ ದೇವಿ ಎಂಬುವವರನ್ನು ವಿವಾಹವಾಗಿದ್ದರು. ಅವರ ಮದುವೆಯ ನಂತರ, ಅತುಲ್ ಶರ್ಮಾ ಮತ್ತು ಅವರ ಇಡೀ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗಿದೆ. ಗ್ರಾಮದಲ್ಲಿ ನಡೆಯುವ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ.
"ಬುಧವಾರ ರಾತ್ರಿ ನನ್ನ ಪತಿ ತೀರಿಕೊಂಡ ನಂತರ, ಬೆಳಿಗ್ಗೆ ನಾನು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದೇನೆ. ಆದರೆ ಅವರು ನನ್ನ ಪತಿಯ ದೇಹವನ್ನು ಮುಟ್ಟುವುದಿಲ್ಲ ಮತ್ತು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು. ನಾನು ಕೋಚ್ ಸಮುದಾಯದವಳು ಎಂಬ ಕಾರಣಕ್ಕೆ ನನ್ನ ಪತಿ ಬ್ರಾಹ್ಮಣನಾಗಿದ್ದರೂ ಗ್ರಾಮಸ್ಥರು ಅವರನ್ನು ಮುಟ್ಟಲಿಲ್ಲ" ಎಂದು ಪ್ರಣಿತಾ ದೇವಿ ಸುದ್ದಿಗಾರರಿಗೆ ತಿಳಿಸಿದರು.
"ಗ್ರಾಮಸ್ಥರು ಯಾವುದೇ ಸಹಾಯವನ್ನು ಮಾಡಲಿಲ್ಲ. ಆಗ ನನ್ನ ಗಂಡನ ಸಹೋದರರೊಬ್ಬರು ಶವವನ್ನು ಹತ್ತಿರದ ನದಿಯ ದಡಕ್ಕೆ ತೆಗೆದುಕೊಂಡು ಹೋಗಿ ಹೂಳಿದರು. ನನ್ನ ಪತಿಯ ಅಂತ್ಯಸಂಸ್ಕಾರ ಮಾಡದೇ ಸಮಾಧಿ ಮಾಡಲಾಗಿದೆ. ಇದರಿಂದ ನನಗೆ ನೋವಾಗಿದೆ" ಎಂದು ಆಕೆ ದುಖಃ ತೊಡಿಕೊಂಡಿದ್ದಾರೆ.
ಘಟನೆಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದ ನಂತರ ಜಿಲ್ಲಾಧಿಕಾರಿ ಪ್ರಣಬ್ ಕುಮಾರ್ ಶರ್ಮಾ "ಮೃತರ ದೇಹವನ್ನು ಸಮಾಧಿಯಿಂದ ತೆಗೆದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುವಂತೆ ನಾವು ಸೂಚನೆ ನೀಡಿದ್ದೇವೆ" ಎಂದಿದ್ದಾರೆ.
ಶರ್ಮಾ ಅವರ ಮೃತದೇಹವನ್ನು ಶುಕ್ರವಾರ ಮಧ್ಯಾಹ್ನ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರವಾದ ಮಂಗಳದಾಯಿಗೆ ಕೊಂಡೊಯ್ಯಲಾಗಿದೆ. ಶವಪರೀಕ್ಷೆ ಬಳಿಕ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಘಟನೆ ಬಗ್ಗೆ ಇನ್ನು ಯಾವುದೇ ಎಫ್ಐಆರ್ ದಾಖಲಿಸಿಲ್ಲ, ನಮ್ಮ ಕಡೆಯಿಂದ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ದಾರಾಂಗ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.