ಕೇರಳದಲ್ಲಿ ಮನೆಗೆ ವಾಪಸ್ ಬಂದವರನ್ನು ಸ್ವಾಗತಿಸಲು ಮೊಸಳೆ, ಹಾವುಗಳು
ತಿರುವನಂತಪುರಂ, ಆಗಸ್ಟ್ 21: ಪ್ರವಾಹಕ್ಕೆ ಸಿಲುಕಿದ ನಂತರ ನಿರಾಶ್ರಿತರ ಕೇಂದ್ರಗಳಲ್ಲಿದ್ದವರು ವಾಪಸ್ ತಮ್ಮ ಮನೆಗಳಿಗೆ ಬರುತ್ತಿದ್ದಾರೆ. ಆದರೆ ಮನೆಗಳಲ್ಲಿ ಹಾವು ಮತ್ತಿತರ ಕ್ರಿಮಿ- ಕೀಟಗಳು ಬಂದು ಸೇರಿಕೊಂಡಿವೆ. ತ್ರಿಶ್ಶೂರ್ ಜಿಲ್ಲೆಯ ಚಾಲಕುಡಿಯಲ್ಲಿ ವ್ಯಕ್ತಿಯೊಬ್ಬರು ಸೋಮವಾರ ಹಿಂತಿರುಗಿದ್ದಾರೆ. ಆದರೆ ಅಷ್ಟರಲ್ಲಿ ಮನೆಯೊಳಗೆ ಇದ್ದ ಅತಿಥಿಯನ್ನು ನೋಡಿ ಗಾಬರಿ ಬಿದ್ದುಹೋಗಿದ್ದಾರೆ.
ಏಕೆಂದರೆ, ಮೊಸಳೆ ಆರಾಮವಾಗಿ ಮನೆಯಲ್ಲಿ ವಾಸವಾಗಿತ್ತಂತೆ. ತಕ್ಷಣವೇ ಅಕ್ಕಪಕ್ಕದವರ ಸಹಾಯದಿಂದ ಅದನ್ನು ಹಿಡಿದು, ಕಟ್ಟಿ ಹಾಕಲಾಗಿದೆ. ತ್ರಿಶ್ಶೂರ್ ನಲ್ಲಿ ಮಳೆ ಅನಾಹುತ ವಿಪರೀತ ಆಗಿದೆ. ಆ ನಂತರ ಅಲಪುಳ, ಪಥನಂತಿಟ್ಟ, ಇಡುಕ್ಕಿ, ಕೋಳಿಕ್ಕೋಡ್, ಎರ್ನಾಕುಲಂ, ಮಲಪ್ಪುರಂ ಹಾಗೂ ವಯನಾಡ್ ನಲ್ಲಿ ಅನಾಹುತಗಳು ಸಂಭವಿಸಿವೆ.
ಒಂದೇ ದಿನ 26 ಜನರನ್ನು ರಕ್ಷಿಸಿದ ನೌಕಾದಳದ ಕ್ಯಾಪ್ಟನ್
ಕಳೆದ ನೂರು ವರ್ಷಗಳಲ್ಲೇ ಕೇರಳ ಕಂಡ ಭೀಕರ ಪ್ರವಾಹ ಪರಿಸ್ಥಿತಿ ಇದು. ಈ ಅನಾಹುತದಲ್ಲಿ ಹತ್ತಿರ ಹತ್ತಿರ ನಾನೂರು ಮಂದಿ ಪ್ರಾಣ ಬಿಟ್ಟಿದ್ದಾರೆ. ಹತ್ತಾರು ಲಕ್ಷ ಮಂದಿ ಮನೆ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೂ ತೀವ್ರ ಹಾನಿಯಾಗಿದೆ.
ಮಲ್ಲಪುರಂನಲ್ಲಿ ಹಾವು ಹಿಡಿಯುವ ಮುಸ್ತಫಾಗೆ ಈಗ ಸಿಕ್ಕಾಪಟ್ಟೆ ಕೆಲಸ. ನೀರಿನ ಪ್ರಮಾಣ ಕಡಿಮೆ ಆಗುತ್ತಾ ಬಂದಂತೆ ಕಳೆದ ಎರಡು ದಿನದಲ್ಲಿ ಆತ ಮನೆಗಳಿಂದ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾನೆ. ಎರ್ನಾಕುಲಂ ಜಿಲ್ಲೆ ಅಂಗಮಾಲಿಯ ಆಸ್ಪತ್ರೆಯೊಂದರಲ್ಲಿ ಹಾವು ಕಡಿದ ಐವತ್ತೆರಡು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಥನಂತಿಟ್ಟದಲ್ಲಿ ತಮ್ಮ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳೋಣ ಅಂದುಕೊಂಡು ವಾಪಸ್ ಬಂದವರು ಹಾವುಗಳನ್ನು ನೋಡಿ, ಹಾಗೇ ವಾಪಸ್ ಹೋಗಿದ್ದಾರೆ. ವಿಷವನ್ನು ತೆಗೆಯುವಂಥ ಔಷಧಗಳನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಕೇರಳ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ.