'ಕ್ಲಾತ್' ನೋಡಿ 'ಕ್ಲಾಸ್' ಅಳೆಯುವ ಮನಸ್ಥಿತಿ ಬದಲಾಗಬೇಕಿದೆ: ಸುಧಾಮೂರ್ತಿ
'ಇದು ಬಿಸಿನೆಸ್ ಕ್ಲಾಸ್ ಜನರು ನಿಲ್ಲಿವ ಸಾಲು, ಹೋಗಿ ಎಕಾನಮಿ ಕ್ಲಾಸ್ ನಲ್ಲಿ ನಿಲ್ಲಿ' ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರಿಗೆ ಲಂಡನ್ನಿನ ಹೆಥ್ರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದ ಮಾತು!
ಸೆಲ್ವಾರ್ ಕಮೀಜ್ ತೊಟ್ಟಿದ್ದ ಸುಧಾಮೂರ್ತಿಯವರನ್ನು ಮಹಿಳೆಯೊಬ್ಬರು ಅವಮಾನಿಸಿದ ರೀತಿ ಇದು! ತಮ್ಮ ಈ ಕಹಿ ಅನುಭವವನ್ನು ಸುಧಾಮೂರ್ತಿಯವರು ತಮ್ಮ ಹೊಸ ಕೃತಿ 'Three Thousand Stitches' ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಅನ್ನೋದು ಶುದ್ಧ ಅವಿವೇಕ: ಎಸ್ ಎಲ್ ಭೈರಪ್ಪ
ಇನ್ಫೋಸಿಸ್ ಪ್ರತಿಷ್ಠಾನವನ್ನು ಪತಿ ನಾರಾಯಣ ಮೂರ್ತಿಯವರೊಂದಿಗೆ ಕಟ್ಟಿ ಬೆಳೆಸಿದ, ಜಗತ್ತಿನ ಪ್ರಭಾವೀ ಐಟಿ ಕಂಪೆನಿಗಳಲ್ಲಿ ಇನ್ಫೋಸಿಸ್ ಹೆಸರು ಮಿನುಗುವಂತೆ ಮಾಡಿದ ಸುಧಾ ಮೂರ್ತಿಯವರನ್ನು ಅವರು ತೊಟ್ಟ ಉಡುಗೆಯಿಂದಾಗಿ ಕೀಳಂದಾಜಿಸಿದ , ಬಟ್ಟೆಯ ಮೂಲಕ 'ಬಿಸಿನೆಸ್ ಕ್ಲಾಸೋ, ಎಕಾನಮಿ ಕ್ಲಾಸೋ' ಎಂದು ಅಳೆಯುವ ಜನರ ಮನಸ್ಥಿತಿಯ ಬಗ್ಗೆ ಸುಧಾಮೂರ್ತಿಯವರು ವಿಷಾದ ವ್ಯಕ್ತಪಡಿದ್ದಾರೆ.
'ಕ್ಲಾಸ್' ಎಂದರೆ ಶ್ರೀಮಂತರು ಎಂದಲ್ಲ. ಶ್ರೀಮಂತಿಕೆ ಎಂಬುದು ಹಣದಲ್ಲಿಲ್ಲ. ಏರ್ಪೋರ್ಟ್ ಸಿಬ್ಬಂದಿ ತನ್ನ 'ಕ್ಲಾಸ್' ಯಾವುದು ಎಂಬುದನ್ನು ಪತ್ತೆ ಮಾಡಿದ್ದು ಹೇಗೆ ಎಂದು ಯೋಚಿಸಿದಾಗ ನನಗೆ ಸಿಕ್ಕ ಉತ್ತರ, 'ನಾನು ತೊಟ್ಟಿದ್ದ ಬಟ್ಟೆ'! ಎಂದು 66 ವರ್ಷದ ಸುಧಾಮೂರ್ತಿ ಬರೆದುಕೊಂಡಿದ್ದಾರೆ.
ಏರ್ಪೋರ್ಟ್ ಸಿಬ್ಬಂದಿಯ ದುರದೃಷ್ಟವೋ ಏನೋ, ಅಂದೇ ಮತ್ತೊಮ್ಮೆ ಸುಧಾಮೂರ್ತಿಯವರನ್ನು ಭೇಟಿಯಾಗುವ ಅವಕಾಶ ಆಕೆಗೆ ಕೂಡಿಬಂತು! ಸರ್ಕಾರಿ ಶಾಲೆಯೊಂದರ ಹಣ ಸಂಗ್ರಹದ ಪ್ರಾಯೋಜಕತ್ವವನ್ನು ಇನ್ಫೋಸಿಸ್ ಪ್ರತಿಷ್ಠಾನ ವಹಿಸಿತ್ತು. ಆ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ವೇದಿಕೆಯ ಮೇಲೆ ಕುಳಿತಿದ್ದರು. ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಏರ್ಪೋರ್ಟಿನಲ್ಲಿ ಸುಧಾಮೂರ್ತಿಯವರ 'ಕ್ಲಾಸ್' ನಿರ್ಧರಿಸಿದ್ದ ಮಹಿಳೆ ಖಾದಿ ಸೀರೆಯುಟ್ಟು, ಆ ಕಾರ್ಯಕ್ರಮಕ್ಕೆ ಸೂಕ್ತವಾಗುವಂಥ ಬಟ್ಟೆ ಧರಿಸಿ ಬಂದಿದ್ದರು! ವೇದಿಕೆಯ ಮೇಲೆ ಸುಧಾ ಮೂರ್ತಿಯವರು ಕುಳಿತಿದ್ದನ್ನು ನೋಡಿ ಆಕೆ ಕಂಗಾಲು!
ಬಟ್ಟೆಯ ಮೂಲಕ ಜನರನ್ನು ಅಳೆಯುವ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ. ಮದುವೆ ಮನೆಗಳಲ್ಲಿ ಅದ್ಧೂರಿ ಬಟ್ಟೆಯನ್ನೇ ಹಾಕಬೇಕು, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದಾಗ ಸರಳ, ಮಾಸಲು ಬಟ್ಟೆಯನ್ನೇ ತೊಡಬೇಕೆಂಬ ಪೂರ್ವಗ್ರಹದಿಂದ ಯಾರೂ ಹೊರಬಂದಿಲ್ಲ. ಅದಕ್ಕೆಂದೇ ಏರ್ಪೋರ್ಟಿನಲ್ಲಿ ಸೆಲ್ವಾರ್ ಕಮೀಜ್ ತೊಟ್ಟವರು ಎಕಾನಮಿ ಕ್ಲಾಸ್ ಗೆ ಹೋಗಬೇಕೆಂಬ ಮನಸ್ಥಿತಿ ಬೆಳೆದಿರುವುದು. ಸಮಾಜದಲ್ಲಿ ಬೇರೂರಿರುವ ಇಂಥ ಕೆಲವು ಪೂರ್ವಗ್ರಹಗಳ ಬಗ್ಗೆ ಅವರು ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.