ಕೈಗಾರಿಕೆಗಳಿಗೆ ಎಚ್ಚರಿಕೆ ಕೊಟ್ಟ ರಾಷ್ಟ್ರೀಯ ಹಸಿರು ನ್ಯಾಯಪೀಠ
ನವದೆಹಲಿ, ಜೂನ್ 07: ಪರಿಸರ ಸಂಬಂಧಿ ನಿಯಮಗಳ ಸಂಬಂಧ ಕೈಗಾರಿಕೆಗಳು ಪೂರ್ವಾನುಮತಿ ಪಡೆಯದೇ ಕಾರ್ಯನಿರ್ವಹಿಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ- ಎನ್ಜಿಟಿ ಸೋಮವಾರ ಆದೇಶಿಸಿದೆ.
ಈ ವಿಷಯದಲ್ಲಿ ವಿನಾಯಿತಿ ನೀಡುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಹರಿಯಾಣದ ಎನ್ಜಿಒ ದಸ್ತಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭ ಹಸಿರು ಪೀಠ ಈ ಆದೇಶ ಹೊರಡಿಸಿದೆ. ಎನ್ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠವು ಈ ಕುರಿತು ವಿಚಾರಣೆ ನಡೆಸಿದ್ದು, "ಪರಿಸರ ಸಂಬಂಧಿ ನಿಯಮಗಳಲ್ಲಿ ಪೂರ್ವಾನುಮತಿ ಪಡೆಯದೇ ಪರಿಹಾರ ಪಾವತಿ ಆಧಾರದಲ್ಲಿ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡುವಂತಿಲ್ಲ" ಎಂದು ಆದೇಶಿಸಿದೆ.
ಕೈಗಾರಿಕೆಗಳಿಗೆ ಈ ಅನುಮತಿ ಕಡ್ಡಾಯವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಎಲ್ಲಾ ಕೈಗಾರಿಕೆಗಳೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಪೀಠ ತಿಳಿಸಿದೆ.
ಪ್ರಕೃತಿ ಜೊತೆ ಮಾನವರೂ ಸರ್ವನಾಶ! ವರ್ಷಕ್ಕೆ ಕೋಟಿ ಕೋಟಿ ಮರ ಉಡೀಸ್!
ಸೆಪ್ಟೆಂಬರ್ 14, 2006ರ Environmental impact assessment ಅಧಿಸೂಚನೆಯಡಿಯಲ್ಲಿ ಪೂರ್ವಾನುಮತಿ ಅಗತ್ಯವಾಗಿದೆ. ಕಾನೂನು ಆದೇಶ ಉಲ್ಲಂಘಿಸಿದರೆ ಅಂಥ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ಇದು ಶಾಸನಬದ್ಧ ಆದೇಶವಾಗಿದ್ದು, ಅದನ್ನು ಪಾಲಿಸಲೇಬೇಕು ಎಂದು ನ್ಯಾಯಪೀಠ ಹೇಳಿದೆ.