ಬೈಕುಲ್ಲಾ ಜೈಲು ಗಲಭೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಜಾಮೀನು
ಮುಂಬೈ ಮೇ 18: 2017 ರಲ್ಲಿ ಬೈಕುಲ್ಲಾ ಜೈಲಿನಲ್ಲಿ ನಡೆದ ಗಲಭೆಯ ನಂತರ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮಾಧ್ಯಮ ಕಾರ್ಯನಿರ್ವಾಹಕರಾದ ಇಂದ್ರಾಣಿ ಮುಖರ್ಜಿ ಅವರಿಗೆ ಇಂದು (ಮೇ 18) ಜಾಮೀನು ನೀಡಲಾಗಿದೆ. 2012ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಆರೋಪದ ಮೇಲೆ ಇಂದ್ರಾಣಿ ಮುಖರ್ಜಿ ಬಂಧನದಲ್ಲಿದ್ದರು. ಈ ಪ್ರಕರಣದಲ್ಲಿ ವಕೀಲೆ ಸನಾ ರಯೀಸ್ ಖಾನ್ ಮೂಲಕ ಮುಖರ್ಜಿ ಮನವಿ ಸಲ್ಲಿಸಿದ್ದಾರೆ. ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇಂದು ಮುಖರ್ಜಿ ಅವರಿಗೆ 15,000 ರೂಪಾಯಿಗಳ ವೈಯಕ್ತಿಕ ಬಾಂಡ್, ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಯಾರಿಗಾದರೂ ಯಾವುದೇ ಪ್ರೇರಣೆ, ಬೆದರಿಕೆ ಅಥವಾ ಭರವಸೆ ನೀಡದಿರುವುದು ಸೇರಿದಂತೆ ಇತರ ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಬೈಕುಲ್ಲಾ ಜೈಲಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಮುಖರ್ಜಿ ಮತ್ತು 30ಕ್ಕೂ ಹೆಚ್ಚು ಕೈದಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಕೇಸ್ ದಾಖಲಾಗಿದ್ದು 'ಆರೋಪಿಗಳ ಕಸ್ಟಡಿ ವಿಚಾರಣೆಯನ್ನು ಸಮರ್ಥಿಸಲಾಗುವುದಿಲ್ಲ' ಎಂದು ನ್ಯಾಯಾಲಯ ಮುಖರ್ಜಿಯ ಬಿಡುಗಡೆಯ ಮನವಿಯನ್ನು ಅನುಮತಿಸಿದೆ.
ಇಂದ್ರಾಣಿಗೆ ಜಾಮೀನು
2017 ರಲ್ಲಿ ಕೊಲೆ ಅಪರಾಧದದಲ್ಲಿ ಜೈಲು ಸೇರಿದ್ದ ಮಂಜುಳಾ ಶೆಟ್ಟಿ ಮೇಲೆ ಬೈಕುಲ್ಲಾ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅದೇ ದಿನ ಶೆಟ್ಟಿ ಮೃತಪಟ್ಟಿದ್ದರು. ಬಳಿಕ ಜೈಲಿನಲ್ಲಿ ಇದು ಗಲಭೆ, ಘರ್ಷಣೆಗೆ ಕಾರಣವಾಗಿತ್ತು. ಶೆಟ್ಟಿ ಅವರ ಮೇಲೆ ಜೈಲು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾವಿನ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮುಖರ್ಜಿ ಮತ್ತು 30ಕ್ಕೂ ಹೆಚ್ಚು ಕೈದಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಗಲಭೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಯಿತು. ಕಳೆದ ವರ್ಷ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ವೇಳೆ ಹಾಜರಾಗುವಂತೆ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. "ಆರೋಪಿಗಳ ಕಸ್ಟಡಿ ವಿಚಾರಣೆಯನ್ನು ಸಮರ್ಥಿಸಲಾಗುವುದಿಲ್ಲ"ಎಂದು ನ್ಯಾಯಾಲಯವು ಮುಖರ್ಜಿಯ ಬಿಡುಗಡೆಯ ಮನವಿಯನ್ನು ಅನುಮತಿಸಿದೆ.
ಸಿಬಿಐ ಕೈಗೆ ಇಂದ್ರಾಣಿ ಸಿಕ್ಕಿಬಿದ್ದಿದ್ದು ಹೇಗೆ?
ಮುಂಬೈ ಪೊಲೀಸರು ಮತ್ತು ನಂತರ ಸಿಬಿಐ ಪ್ರಕಾರ, ಇಂದ್ರಾಣಿ ಮುಖರ್ಜಿ ಅವರು ಮಾಧ್ಯಮದ ಕಾರ್ಯನಿರ್ವಾಹಕ ಪೀಟರ್ ಮುಖರ್ಜಿ ಅವರನ್ನು ಮದುವೆಯಾದ ನಂತರ ತನ್ನ ಇಬ್ಬರು ಮಕ್ಕಳಾದ ಶೀನಾ ಮತ್ತು ಮಿಖಾಯಿಲ್ ಅನ್ನು ತೊರೆದಿದ್ದರು. ಅವರನ್ನು ಗುವಾಹಟಿಯಲ್ಲಿ ತನ್ನ ಹೆತ್ತವರೊಂದಿಗೆ ಬಿಟ್ಟಿದ್ದರು. ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಅವರ ಫೋಟೋವನ್ನು ನೋಡಿದ ಶೀನಾಳಿಗೆ ಭಾರೀ ಬೇಸರವಾಗಿದೆ. ನಂತರ ಶೀನಾ ಬೋರಾ ತನ್ನ ತಾಯಿಯನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾಳೆ. ಇಂದ್ರಾಣಿ ಅವಳನ್ನು ತನ್ನ ಸಹೋದರಿಯ ಮಗಳೆಂದು ತನ್ನ ಪತಿ ಪೀಟರ್ಗೆ ಪರಿಚಯಿಸಿದ್ದಳು ಎಂದು ತಿಳಿದುಬಂದಿದೆ. ಶೀನಾ ತನ್ನ ಮಗಳೆಂದು ಹೇಳದಂತೆ ರಹಸ್ಯವಾಗಿಡಲು ಇಂದ್ರಾಣಿ ಬಯಸಿದ್ದಳು. ಬಳಿಕ ಶೀನಾ ಅವರು 2012 ರಲ್ಲಿ ಕಣ್ಮರೆಯಾದರು. ಈ ಕೊಲೆಯಲ್ಲಿ ಇಂದ್ರಾಣಿಯ ಮೊದಲ ಪತಿ ಸಂಜೀವ್ ಖನ್ನಾ ಕೂಡ ಆರೋಪಿಯಾಗಿದ್ದಾರೆ.
ಮಗಳನ್ನು ಕೊಂದಿದ್ದ ತಾಯಿ
2012ರ ಏಪ್ರಿಲ್ನಲ್ಲಿ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ ಹಾಗೂ ಶ್ಯಾಮವರ್ ರೈ ಕಾರಿನಲ್ಲಿ ಶೀನಾ ಬೋರಾ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ರಾಯಗಡ ಜಿಲ್ಲೆಯ ಕಾಡೊಂದರಲ್ಲಿ ಆಕೆಯ ಮೃತದೇಹವನ್ನು ಸುಟ್ಟುಹಾಕಿದ್ದರು. ತನಿಖಾ ಸಂಸ್ಥೆಗಳು ಶೀನಾ ಅವರ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಆದರೆ, ಇಂದ್ರಾಣಿ ಈ ಹೇಳಿಕೆಗಳನ್ನು ತಳ್ಳಿಹಾಕಿದ್ದರು. ಇಂದ್ರಾಣಿಯ ಬಂಧನದ ನಂತರ, ಪಿತೂರಿಯ ಭಾಗವಾಗಿದ್ದಕ್ಕಾಗಿ ಸಿಬಿಐ ಪೀಟರ್ ಮುಖರ್ಜಿಯನ್ನು ಬಂಧಿಸಿತು. ಪೀಟರ್ ಮುಖರ್ಜಿ ಅವರಿಗೆ 2020 ರಲ್ಲಿ ಜಾಮೀನು ನೀಡಲಾಯಿತು. ವಿಚಾರಣೆಯ ಸಮಯದಲ್ಲಿ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ವಿಚ್ಛೇದನ ಪಡೆದರು.
ಪ್ರಕರಣದ ಆರೋಪಿಗಳು ಯಾರು?
2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿದೆ. ಶೀನಾ ಬೋರಾ ಹತ್ಯೆ ಆರೋಪಿ ಇಂದ್ರಾಣಿ ಅವರ ಜಾಮೀನು 4 ಬಾರಿ ತಿರಸ್ಕೃತಗೊಂಡಿತ್ತು. ಈವರೆಗೂ ಅವರು ಬೈಕುಲಾ ಜೈಲಿನಲ್ಲಿದ್ದರು.
ಸಿಬಿಐಗೆ ಪತ್ರ ಬರೆದಿದ್ದ ಇಂದ್ರಾಣಿ
ಇಂದ್ರಾಣಿ ಬಂಧನದ ಬಳಿಕ ಶೀನಾ ಬೋರಾ ಜೀವಂತವಾಗಿದ್ದಾಳೆ ಎಂದು ತಾಯಿ ಇಂದ್ರಾಣಿ ಮುಖರ್ಜಿ ಕಳೆದ ವರ್ಷ ಡಿಸೆಂಬರ್ನಲ್ಲಿ ಸಿಬಿಐಗೆ ಪತ್ರ ಬರೆದಿದ್ದರು. 2012ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಕೊಂದ ಆರೋಪ ಹೊತ್ತಿದ್ದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ, ಶೀನಾ ಬೋರಾ ಜೀವಂತವಾಗಿದ್ದಾಳೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಿಗೆ ಪತ್ರ ಬರೆದಿದ್ದರು. ತಾನು ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಭೇಟಿಯಾಗಿದ್ದೆ ಎಂದು ಹೇಳಿರುವ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದರು. ಹೀಗಾಗಿ ಕಾಶ್ಮೀರದಲ್ಲಿರುವ ಶೀನಾ ಬೋರಾ ಅವರನ್ನು ಹುಡುಕುವಂತೆ ಸಿಬಿಐಗೆ ಇಂದ್ರಾಣಿ ಮುಖರ್ಜಿ ಕೋರಿದ್ದರು.