ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಪುಲ್ವಾಮ ದಾಳಿ ಹುತಾತ್ಮ ಸಿಆರ್ ಪಿಎಫ್ ಯೋಧರ ಸಾಲ ಮನ್ನಾ
ಮುಂಬೈ, ಫೆಬ್ರವರಿ 18: ಪುಲ್ವಾಮಾ ಉಗ್ರ ದಾಳಿ ವೇಳೆ ಹುತಾತ್ಮರಾದ 23 ಸಿಆರ್ ಪಿಎಫ್ ಸಿಬ್ಬಂದಿಯ ಬಾಕಿ ಸಾಲ ಮನ್ನಾಗೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕ್ರಿಯೆ ಆರಂಭಿಸಿದೆ. ಕಳೆದ ವಾರ ನಡೆದ ಉಗ್ರಗಾಮಿ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾಗಿದ್ದರು.
ಹುತಾತ್ಮರಾದವರ ಪೈಕಿ 23 ಸಿಆರ್ ಪಿಎಫ್ ಸಿಬ್ಬಂದಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಅವರಿಂದ ಬಾಕಿ ಇದ್ದ ಎಲ್ಲ ಸಾಲವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಲಾಗಿದೆ ಎಂದು ಬ್ಯಾಂಕ್ ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಲ್ಲ ಸಿಆರ್ ಪಿಎಫ್ ಸಿಬ್ಬಂದಿಯೂ ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ಬ್ಯಾಂಕ್ ನ ಗ್ರಾಹಕರು. ಅವರಿಗೆ ತಲಾ 30 ಲಕ್ಷ ರುಪಾಯಿ ವಿಮೆಯನ್ನು ಕೂಡ ಒದಗಿಸುತ್ತದೆ.
ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್ಐಸಿ
ನಮ್ಮ ದೇಶವನ್ನು ರಕ್ಷಿಸುವ ಸೈನಿಕರು ಹುತಾತ್ಮರಾಗಿರುವುದು ತೀವ್ರ ದುಃಖಕರ ಸಂಗತಿ. ಈಗಾಗಲೇ ತುಂಬಲಾರದ ನಷ್ಟ ಅನುಭವಿಸಿರುವ ಸೈನಿಕರ ಕುಟುಂಬಕ್ಕೆ ನಮ್ಮ ಬ್ಯಾಂಕ್ ಕಡೆಯಿಂದ ಒಂದು ಗೌರವ ಎಂದು ಬ್ಯಾಂಕ್ ನ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಬ್ಯಾಂಕ್ ನಿಂದ ಯುಪಿಐ ಒಂದನ್ನು ಮಾಡಿದ್ದು, ಯೋಧರ ಕುಟುಂಬಕ್ಕೆ ಈ ಮೂಲಕ ಆರ್ಥಿಕ ನೆರವು ನೀಡಬಹುದು.