ದೇಶದಲ್ಲಿ ಎಚ್ಚರಿಕೆ ಗಂಟೆ ಬಾರಿಸುತ್ತಿದೆ ಕೊರೊನಾ ಸೋಂಕಿನ "R" ದರ
ನವದೆಹಲಿ, ಆಗಸ್ಟ್ 02: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದೆ. ವಾರದಿಂದೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಕೊರೊನಾ ಮೂರನೇ ಅಲೆಯ ಸೂಚನೆ ನೀಡುತ್ತಿದೆ.
ಇದರೊಂದಿಗೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಮತ್ತೆ ನಾಲ್ಕು ಲಕ್ಷ ದಾಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ 97.35 ಇದ್ದರೂ ಆತಂಕವನ್ನು ತಳ್ಳಿಹಾಕುವಂತಿಲ್ಲ. ಈ ಆತಂಕಕ್ಕೆ ಪೂರಕವಾಗಿ ಅಧ್ಯಯನವೊಂದು ಹೊಸ ಎಚ್ಚರಿಕೆ ರವಾನಿಸಿದೆ. ಚೆನ್ನೈ ಮೂಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಭಾರತದಲ್ಲಿ ಸೋಂಕಿನ "R" ದರ (Reproduction rate-ಪುನರುತ್ಪತ್ತಿ ದರ) ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸುತ್ತಿರುವುದಾಗಿ ತಿಳಿಸಿದೆ. ಅಧ್ಯಯನ ಏನು ಹೇಳುತ್ತಿದೆ? ಮುಂದೆ ಓದಿ...
ಕೊರೊನಾ ಸೋಂಕಿನ ಈ "R" ದರ ಎಂದರೇನು?
ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ. ಜುಲೈ 30ರ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿನ ಪುನರುತ್ಪತ್ತಿ ದರ 1.01 ಇದೆ. ಅಂದರೆ ಒಬ್ಬ ವ್ಯಕ್ತಿಯಿಂದ ನೂರು ಮಂದಿಗೆ ಸೋಂಕು ಹರಡುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.
ಕೊರೊನಾ ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಸುರಕ್ಷಿತ?
ಜುಲೈ ಕೊನೆಯಲ್ಲಿ ಮತ್ತೆ ಹೆಚ್ಚಾದ ಸೋಂಕಿನ ಪುನರುತ್ಪತ್ತಿ ದರ
ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಇಡೀ ದೇಶದಲ್ಲಿ ಈ ಆರ್ ದರ 1.37 ಇರುವುದೆಂದು ಅಂದಾಜಿಸಲಾಗಿತ್ತು. ಮಾರ್ಚ್ 9ರಿಂದ ಏಪ್ರಿಲ್ 21ರವರೆಗೆ 1.37 ಇದ್ದು, ಏಪ್ರಿಲ್ 24 ಹಾಗೂ ಮೇ 1ರ ನಡುವೆ ಇದು 1.10ಗೆ ಇಳಿದಿತ್ತು. ಮೇ 9-ಮೇ 11ರವರೆಗೆ ಈ ದರ 0.98ಗೆ ಇಳಿಕೆಯಾಗಿತ್ತು. ಕ್ರಮೇಣ ತಗ್ಗಿದ್ದು, ಜುಲೈ ಕೊನೆಗೆ ಈ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಜುಲೈ 3-22ರವರೆಗೆ ಇದು 0.95ಗೆ ಏರಿಕೆಯಾಗಿದೆ.
ಮುಂದಿನ ಎರಡು ವಾರಗಳಲ್ಲಿ ಇನ್ನಷ್ಟು ಹೆಚ್ಚಳ
ಈ ಆರ್ ದರವು 1ಕ್ಕಿಂತ ಕಡಿಮೆಯಿದ್ದರೆ ಅಪಾಯವಿಲ್ಲ ಎಂದು ಪರಿಗಣಿಸಬಹುದು. ಆದರೆ ಇದನ್ನು ಮೀರಿದರೆ ಪ್ರಕರಣಗಳ ಸಂಖ್ಯೆಯೂ ಏಕಾಏಕಿ ಏರಿಕೆಯಾಗುವುದು ಖಚಿತ. ಮುಂದಿನ ಎರಡು ವಾರಗಳಲ್ಲಿ ಈ ದರ ಇನ್ನಷ್ಟು ಹೆಚ್ಚಳವಾಗಲಿದ್ದು, ರಾಜ್ಯದ ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಈ ಭಾಗದಲ್ಲಿ ಆರ್ ದರ ಒಂದಕ್ಕಿಂತ ಹೆಚ್ಚಿದೆ ಎಂದು ಅಧ್ಯಯನ ನಡೆಸಿದ ಸಿತಾಭ್ರಾ ಸಿನ್ಹಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಲಸಿಕೆ ಪಡೆದ ಗರ್ಭಿಣಿಯರೆಷ್ಟು?
ಭಾರತದಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳು
ಭಾರತದಲ್ಲಿ ಸೋಮವಾರ, ಆಗಸ್ಟ್ 2ರಂದು 40,134 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದು ದಿನದ ಅವಧಿಯಲ್ಲಿ 36,946 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 422 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 3,16,95,958 ಕೊರೊನಾ ಪ್ರಕರಣಗಳಿದ್ದು, ಇದುವರೆಗೂ 3,08,57,467 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ 4,24,773 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಅಕ್ಟೋಬರ್ನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ
ಕೊರೊನಾ ಮೂರನೇ ತರಂಗ ಈ ತಿಂಗಳೇ ಅಡಿಯಿಡಲಿದ್ದು, ಎರಡನೇ ತರಂಗದಷ್ಟು ಭೀಕರವಾಗಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ಎರಡನೇ ಅಲೆ ಸಮಯದಲ್ಲಿ ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗಿದ್ದವು ಹಾಗೂ ಆನಂತರ ಇಳಿಕೆಯಾದವು. ಮೂರನೇ ಅಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಅಕ್ಟೋಬರ್ನಲ್ಲಿ ಕೊರೊನಾ ಉತ್ತುಂಗಕ್ಕೇರಿ ಮತ್ತೆ ತಗ್ಗಲಿದೆ ಎಂದು ತಿಳಿಸಿದ್ದಾರೆ.