ಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನ
ನವದೆಹಲಿ, ಜು.21: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 30 ಲಕ್ಷ ಮೀರುವ ಸಾಧ್ಯತೆಯಿದೆ. ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆಯ ಸುಮಾರು 10 ಪಟ್ಟು ಹೆಚ್ಚಿದೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಮಾನವ ದುರಂತಗಳಲ್ಲಿ ಒಂದಾಗಿದೆ ಎಂದು ಹೊಸ ಅಧ್ಯಯನವು ಹೇಳಿದೆ.
1.4 ಶತಕೋಟಿ ಜನರು ಇರುವ ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಬಗ್ಗೆ ವಾಷಿಂಗ್ಟನ್ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಅಧ್ಯಯನ ನಡೆಸಿದೆ. ಈ ಅಧ್ಯಯನವು ಸಾಂಕ್ರಾಮಿಕ ಸಮಯದಲ್ಲಿ ರಾಜ್ಯದ ದತ್ತಾಂಶಗಳು, ಅಂತರರಾಷ್ಟ್ರೀಯ ಅಂದಾಜುಗಳು, ಸೆರೋಲಾಜಿಕಲ್ ಅಧ್ಯಯನಗಳ ಆಧಾರದ ಮೇಲೆ ಸಿದ್ದಪಡಿಸಿದೆ. ಹಾಗೆಯೇ ಕೊರೊನಾವೈರಸ್ ಸೋಂಕಿನ ಸಾವು ಭಾರತದಲ್ಲಿ ಹೆಚ್ಚಾಗಿದೆ ಎಂದು ಈ ಅಧ್ಯಯನದಲ್ಲಿ ತಿಳಿದುಬಂದಿದೆ.
'3 ನೇ ಕೋವಿಡ್ ಅಲೆ ಜು. 4 ರಂದೇ ಅಪ್ಪಳಿಸಿದೆ' ಎಂದ ಹೈದರಾಬಾದ್ನ ಭೌತವಿಜ್ಞಾನಿ
"ನಿಜವಾದ ಸಾವುಗಳು ಲಕ್ಷಾಂತರ ಸಂಖ್ಯೆಯಲ್ಲಿರಬಹುದು, ನೂರಾರು ಸಾವಿರಗಳಲ್ಲ. ಇದು ಭಾರತದ ಅತ್ಯಂತ ಕೆಟ್ಟ ಮಾನವ ದುರಂತವಾಗಿದೆ" ಎಂದು ಈ ಅಧ್ಯಯನವು ಹೇಳಿದೆ. ಈ ಅಧ್ಯಯನ ನಡೆಸಿದ ತಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರು ಇದ್ದಾರೆ ಎಂದು ವರದಿಯಾಗಿದೆ. ಇನ್ನು ಮಂಗಳವಾರವಷ್ಟೇ ರಾಜ್ಯ ಸಭೆಯಲ್ಲಿ ಆರೋಗ್ಯ ಸಚಿವರು ದೇಶದ ಕೊರೊನಾ ಸಾವಿನ ಸಂಖ್ಯೆಯ ಅಧಿಕೃತ ಮಾಹಿತಿಯಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಅದಕ್ಕೆ ರಾಜ್ಯ ಸರ್ಕಾರಗಳೇ ಕಾರಣ ಎಂದು ಹೇಳಿದ್ದರು. "ನಾವು ವಿರೋಧ ಪಕ್ಷದ ಸಂಸದರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದೇವೆ ಮತ್ತು ರಚನಾತ್ಮಕ ಚರ್ಚೆ ನಡೆಸಲು ನಾವು ನಿರ್ಧರಿಸಿದ್ದೇವೆ. ಎಲ್ಲಾ ಕೆಲಸದ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಹೋಗಿದೆ. ಎಲ್ಲಾ ಕೊರತೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡಲಾಗಿದೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಅಧಿಕೃತ ಅಂಕಿಅಂಶವನ್ನು ಪ್ರಶ್ನಿಸಿದ ಅಧ್ಯಯನ
ಸರ್ಕಾರದ ಅಧಿಕೃತ ಸಂಖ್ಯೆಗಳನ್ನು ಈ ಅಧ್ಯಯನವು ಪದೇ ಪದೇ ಪ್ರಶ್ನಿಸಿದೆ. ರಾತ್ರಿ ಬೆಳಗಾಗುತ್ತಿದ್ದಂತೆ ಗಂಗಾ ನದಿಯುದ್ದಕ್ಕೂ ಶವಗಳನ್ನು ತೇಲುತ್ತಿದ್ದ ಬಗ್ಗೆಯೂ ಈ ಅಧ್ಯಯನವು ಪ್ರಶ್ನೆ ಎತ್ತಿದೆ. ತಜ್ಞರ ಪ್ರಕಾರ ದೇಶದ ಅಧಿಕೃತ ಅಂದಾಜುಗಳು ಭಾರೀ ಕಡಿಮೆಯಿದೆ. ಮಂಗಳವಾರ ಬಿಡುಗಡೆಯಾದ ಅಧ್ಯಯನವು ಜನವರಿ 2020 ಮತ್ತು ಜೂನ್ 2021 ರ ನಡುವೆ ಸಾಮಾನ್ಯವಾಗಿ ನಿರೀಕ್ಷೆಗಿಂತ ಅಧಿಕ 3.4 ರಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ಕೋವಿಡ್ ಸಾವುಗಳು 4 ಮಿಲಿಯನ್ ತಲುಪಿರಬಹುದು ಎಂದು ಸೂಚಿಸುವ ಅಂದಾಜು ಒಳಗೊಂಡಿದೆ.
ಮಾರಕವಾಗಿದ್ದ ಕೋವಿಡ್ ಮೊದಲ ಅಲೆ
"ಕೋವಿಡ್ ಸಾವುಗಳನ್ನು ಸಂಖ್ಯಾಶಾಸ್ತ್ರೀಯ ವಿಶ್ವಾಸದಿಂದ ಅಂದಾಜು ಮಾಡುವುದು ಅಸ್ಪಷ್ಟವೆಂದು ಸಾಬೀತುಪಡಿಸಬಹುದು. ಆದರೆ ಎಲ್ಲಾ ಅಂದಾಜುಗಳು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 400,000 ರ ಅಧಿಕೃತ ಎಣಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಮೊದಲ ಕೋವಿಡ್ ಅಲೆಯು ನಾವು ನಂಬಿರುವುದಕ್ಕಿಂತ ಹೆಚ್ಚು ಮಾರಕವಾಗಿದೆ ಎಂದು ಅಧ್ಯಯನ ವಿವರಿಸಿದೆ. ಕಳೆದ ವರ್ಷ ಸೋಂಕಿನ ಮೊದಲ ಅಲೆಯ ಸಂದರ್ಭ ಕೊರೊನಾ ಕಾರಣದಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಕೊರೊನಾ ಮಾತ್ರವಲ್ಲದೇ ಸಾವಿರಾರು ಜನರು ಆಮ್ಲಜನಕ, ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನದಲ್ಲಿ ಉಲ್ಲೇಖ ಮಾಡಲಾಗಿದೆ.
ಕೋವಿಡ್ನ 2 ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ.30 ರಷ್ಟು ಅಧಿಕ: ಐಸಿಎಂಆರ್
ಕೋವಿಡ್ 2 ನೇ ಅಲೆಯ ಭೀಕರತೆಗೆ ಕಾರಣವೇನು?
ಮಾರ್ಚ್ 2020 ರಿಂದ ಫೆಬ್ರವರಿ 2021 ರವರೆಗಿನ ಮೊದಲ ಅಲೆಯ ನೈಜ ಸಮಯದಲ್ಲಿ ದುರಂತದ ಪ್ರಮಾಣವನ್ನು ಗ್ರಹಿಸಲು ದೇಶದ ಅಸಮರ್ಥತೆಯು ಎರಡನೇ ಕೋವಿಡ್ ಅಲೆಯ ಭೀಕರತೆಗೆ ಕಾರಣವಾಗಿದೆ ಎಂದು ಅಧ್ಯಯನವು ಹೇಳಿದೆ. ದೇಶದಲ್ಲಿ ಕೊರೊನಾ ಸಾವಿನ ತೀವ್ರತೆಯ ಬಗ್ಗೆ ಹಲವಾರು ವರದಿಗಳು ಆಗಿದ್ದವು. ಇದನ್ನು ಪ್ರತಿನಿಧಿಸುವ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ರಾಜಕಾರಣಿಗಳು ಹಾಗೂ ಆಸ್ಪತ್ರೆಯ ನಿರ್ವಾಹಕರು ತಮ್ಮ ವರ್ಚಸ್ಸಿನ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಕೋವಿಡ್ ಸಾವನ್ನು ಲೆಕ್ಕಿಸದೆ ಅಥವಾ ಕಡೆಗಣಿಸಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಹಾಗೆಯೇ ಕುಟುಂಬಸ್ಥರು ಕೋವಿಡ್ ಸಂಪರ್ಕಗಳನ್ನು ಅವಮಾನದಿಂದ ಮರೆಮಾಚುತ್ತಿರಬಹುದು. ಇವೆಲ್ಲವೂ ಕೋವಿಡ್ ಸಾವಿನ ಸಂಖ್ಯೆ ಹೆಚ್ಚು ದಾಖಲಾಗದಿರಲು ಕಾರಣವಾಗಿರಬಹುದು ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ಈ ನಡುವೆ ಮಂಗಳವಾರ ರಾಜ್ಯ ಸಭೆಯಲ್ಲಿ ಆರೋಗ್ಯ ಸಚಿವ ಅಶ್ವಿನಿ ವೈಷ್ಣವ್, ''ಒಂದು ವೇಳೆ ಕೋವಿಡ್ ಪ್ರಮಾಣ ಅಥವಾ ಕೋವಿಡ್ ಸಾವಿನ ಪ್ರಮಾಣ ಸರಿಯಾಗಿ ದಾಖಲಾಗದಿದ್ದರೆ ಅದು ರಾಜ್ಯ ಸರ್ಕಾರದ ತಪ್ಪು. ನಾವು ರಾಜ್ಯ ಸರ್ಕಾರದಿಂದ ಅಂಕಿ ಅಂಶ ಪಡೆದು ಅದನ್ನು ಲೆಕ್ಕ ಹಾಕಿ ದೇಶದ ಅಂಕಿ ಅಂಶ ಬಿಡುಗಡೆ ಮಾಡುವುದು ಮಾತ್ರ,'' ಎಂದಿದ್ದಾರೆ.
ಕೋವಿಡ್ ಸವಾಲು ಕೊನೆಯಾಗಿಲ್ಲ
"ಸಾಂಕ್ರಾಮಿಕದ ಸವಾಲು ಮುಗಿದಿಲ್ಲ" ಎಂದು ಮೋದಿಯ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಮತ್ತು ಅಧ್ಯಯನದ ಸಹ ಲೇಖಕರಾದ ಬ್ರೌನ್ ವಿಶ್ವವಿದ್ಯಾಲಯದ ಹಿರಿಯ ಸಹವರ್ತಿ ಅರವಿಂದ್ ಸುಬ್ರಮಣಿಯನ್ ಹೇಳಿದರು. "ಲಸಿಕೆಯು ಅತ್ಯುತ್ತಮ ಭರವಸೆಯನ್ನು ನೀಡುತ್ತದೆ. ಆದರೆ ಅದರ ವೇಗವನ್ನು ಗಣನೀಯವಾಗಿ ಹೆಚ್ಚಿಸಬೇಕಾಗಿದೆ," ಎಂದು ತಿಳಿಸಿದ್ದಾರೆ. ಮುಂಬರುವ ಮೂರನೇ ಕೋವಿಡ್ ಅಲೆಯ ಬಗ್ಗೆ ಮೋದಿ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಸರ್ಕಾರಿ ವಿಜ್ಞಾನಿಗಳು ಆಗಸ್ಟ್ನಲ್ಲಿಯೇ ಕೊರೊನಾ ಸೋಂಕಿನ ಮೂರನೇ ಅಲೆ ಅಪ್ಪಿಳಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು "ಈ ಅಧ್ಯಯನದ ಅಂದಾಜು ಅಂಕಿ ಅಂಶವು ಸವಾಲೊಡ್ಡುವ ನಿಟ್ಟಿನದ್ದಲ್ಲ. ಬದಲಾಗಿ ಪಾರದರ್ಶಕತೆಯಿಂದ ಹೊರಹಾಕುವುದು," ಎಂದು ಹೆಚ್ಚುವರಿ ಸಾವಿನ ಅಧ್ಯಯನದ ಲೇಖಕರಾದ ಅಭಿಷೇಕ್ ಆನಂದ್, ಜಸ್ಟಿನ್ ಸ್ಯಾಂಡ್ಫೂರ್ ಮತ್ತು ಸುಬ್ರಮಣಿಯನ್ ಹೇಳಿದ್ದಾರೆ. "ಎಲ್ಲಾ ತೊಂದರೆಗಳನ್ನು ಗಮನಿಸಿದರೆ, ನಿಜವಾದ ಅಂದಾಜು ಮಾಡುವುದು ಕಷ್ಟಕರವಾಗಿರುತ್ತದೆ. ವಿಭಿನ್ನ ಮೂಲಗಳಿಂದ ಡೇಟಾವನ್ನು ಒಟ್ಟುಗೂಡಿಸುವ ಮೂಲಕ ಮಾತ್ರ ನಾವು ಸಾಂಕ್ರಾಮಿಕದ ವಾಸ್ತವತೆಯ ಬಗ್ಗೆ ತಿಳಿಸಿದ್ದೇವೆ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video