"ಭಾರತೀಯರೇ ನನ್ನ ಗುರು" ಎಂದ ದಲೈ ಲಾಮಾ
ಸೂರತ್, ಜ. 1: ಭಾರತದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆ ವಿಶ್ವದ ಹಲವು ದೇಶಗಳ ಗಮನ ಸೆಳೆಯುತ್ತಿದೆ. ನೊಬೆಲ್ ಪ್ರಶಸ್ತಿ ವಿಜೇತ ದಲೈ ಲಾಮಾ ಕೂಡ ಇದರಿಂದ ಹೊರತಾಗಿಲ್ಲ.
ಇದೇ ಮೊದಲ ಬಾರಿಗೆ ಗುಜರಾತ್ ಪ್ರವಾಸ ಕೈಗೊಂಡಿರುವ ದಲೈ ಲಾಮಾ "ಭಾರತೀಯರೇ ನನ್ನ ಗುರು" ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
'ಸಂತೋಕ್ಬಾ ಪ್ರಶಸ್ತಿ' ಸ್ವೀಕರಿಸಲು ಸೂರತ್ ನಗರಕ್ಕೆ ಬಂದಿಳಿದ ದಲೈ ಲಾಮಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
"ಭಾರತದ ಪುರಾತನ ವಿಶ್ವವಿದ್ಯಾಲಯವಾದ ನಳಂದಾ ಚಿಂತನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಆದ್ದರಿಂದ ನಾನು ಭಾರತೀಯರನ್ನು ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಗುರುಗಳೆಂದು ಪರಿಗಣಿಸಿದ್ದೇನೆ" ಎಂದು ಹೇಳಿದ್ದಾರೆ. [ಶಿಕ್ಷಣ ಕೊಡಿಸಿ, ಆದ್ರೆ ಮತಾಂತರ ಮಾಡಬೇಡಿ]
"ನಾವು ಚೇಲಾಗಳು (ಶಿಷ್ಯರು). ಆದ್ದರಿಂದ ಓರ್ವ ಸರಳ ಚೇಲಾ ಆಗಿ ನಾನು ನನ್ನ ಗುರುಗಳನ್ನು ಅಭಿನಂದಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಯಾವುದು ಈ ಸಂತೋಕ್ಬಾ ಪ್ರಶಸ್ತಿ? : ಸೂರತ್ ಮೂಲದ ಉದ್ಯಮಿ ಗೋವಿಂದ ಧೋಲಾಕಿಯಾ ಅವರು ತಮ್ಮ ತಾಯಿಯ ಸ್ಮರಣಾರ್ಥ ಶ್ರೀ ರಾಮಕೃಷ್ಣ ಫೌಂಡೇಶನ್ ಸ್ಥಾಪಿಸಿದ್ದಾರೆ. ಗಣನೀಯ ಸಾಮಾಜಿಕ ಸೇವೆ ಸಲ್ಲಿಸಿದವರಿಗೆ ಶ್ರೀ ರಾಮಕೃಷ್ಣ ಫೌಂಡೇಶನ್ ಮೂಲಕ ಸಂತೋಕ್ಬಾ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು 25 ಲಕ್ಷ ರೂ. ನಗದು ಹಾಗೂ ವಜ್ರ ಖಚಿತವಾದ ಚಿನ್ನ ಲೇಪಿತ ಫಲಕವನ್ನು ಒಳಗೊಂಡಿದೆ.