ಸ್ವಚ್ಛ ಭಾರತ, ಸ್ವಚ್ಛ ರೈಲ್ವೆ ಅಭಿಯಾನ: ಪ್ರಯಾಣಿಕರಿಗೆ ಶುಚಿತ್ವದ ಪಾಠ
ನವದೆಹಲಿ, ಜೂನ್ 29: ಭಾರತೀಯ ರೈಲ್ವೆಯ ಬೋಗಿಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿನೂತನ ಹೆಜ್ಜೆಯನ್ನು ಇರಿಸಲಾಗಿದೆ. ಸ್ವಚ್ಛ ಭಾರತ, ಸ್ವಚ್ಛ ರೈಲ್ವೆ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ದೇಶದ ರೈಲ್ವೆಯನ್ನು ಉತ್ತಮ ಮತ್ತು ಸ್ವಚ್ಛ ಸ್ಥಿತಿಯಲ್ಲಿ ಇರಿಸಲು ಹೊಸ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ, ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷರು, ಜಿಎಂ ಮತ್ತು ಡಿಆರ್ಎಂ ಈಗ ಸಾಮಾನ್ಯ ಮತ್ತು ಸ್ಲೀಪರ್ ಕೋಚ್ ಬೋಗಿಗಳಲ್ಲಿ ಸಾರ್ವಜನಿಕ ಸೌಕರ್ಯಗಳು, ಶುಚಿತ್ವದ ಬಗ್ಗೆ ನಿಗಾ ವಹಿಸಲಿದ್ದಾರೆ.
ಭಾರತೀಯ ರೈಲ್ವೆ ಆಧುನೀಕರಣಕ್ಕೆ ವಿಶ್ವ ಬ್ಯಾಂಕ್ ನೆರವು
ಭಾರತೀಯ ರೈಲ್ವೆಗಳಲ್ಲಿನ ಮೂಲಭೂತ ಸೌಕರ್ಯಗಳ ನಿರ್ವಹಣೆ, ಸ್ವಚ್ಛತೆಯನ್ನು ಯಾವ ರೀತಿ ನಿಭಾಯಿಸಲಾಗುತ್ತದೆ ಎಂಬುದನ್ನು ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ರೀತಿಯಲ್ಲೇ ಪ್ರಯಾಣಿಸಿ ಪತ್ತೆ ಮಾಡಲಿದ್ದಾರೆ. ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ತಕ್ಷಣ ಅದನ್ನು ಸರಿಪಡಿಸುವುದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಸ್ವಚ್ಛತೆ ತಪಾಸಣೆಗಾಗಿ ಹಠಾತ್ ಭೇಟಿ
ಭಾರತೀಯ ರೈಲ್ವೆ ಹಿರಿಯ ಅಧಿಕಾರಿಗಳು ಇತ್ತೀಚೆಗೆ 544 ರೈಲುಗಳಲ್ಲಿನ ಸೌಲಭ್ಯಗಳ ಹಠಾತ್ ತಪಾಸಣೆಯನ್ನು ಹೊರತಂದಿದ್ದಾರೆ. ಇಲಾಖೆ ಅಧಿಕಾರಿಗಳು ಸಾಮಾನ್ಯ ಜನರಂತೆ ರೈಲಿನಲ್ಲಿ ಪ್ರಯಾಣಿಸಿ ಸ್ವಚ್ಛತೆ, ಊಟೋಪಚಾರ ಅಥವಾ ರೈಲುಗಳು ಮತ್ತು ಶೌಚಾಲಯಗಳ ದೀಪಗಳ ಸರಿಯಾದ ಸೌಲಭ್ಯವನ್ನು ಪರಿಶೀಲಿಸಿದರು. ಇದೇ ಮೊದಲ ಬಾರಿಗೆ ರೈಲ್ವೆ ಮಂಡಳಿ ಅಧಿಕಾರಿಗಳು ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸುತ್ತಿರುವುದು ಕಂಡು ಬಂದಿತು.
ಭಾರತೀಯ ರೈಲ್ವೆ ಅಭಿಯಾನ
ಭಾರತೀಯ ರೈಲ್ವೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸ್ವಚ್ಛ ಭಾರತ, ಸ್ವಚ್ಛ ರೈಲು ಅಭಿಯಾನದ ಭಾಗವಾಗಿ ಜೂನ್ 24 ರಿಂದ ಎಲ್ಲಾ ವಲಯಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ರೈಲ್ವೆ ನಿರ್ವಹಣೆ ಲೋಪ ಕಂಡು ಬಂದರೆ ಕ್ರಮ
ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ತಪಾಸಣೆಯ ಸಮಯದಲ್ಲಿ ರೈಲುಗಳಲ್ಲಿನ ಸೌಲಭ್ಯಗಳು ಮತ್ತು ಶುಚಿತ್ವವನ್ನು ಪರಿಶೀಲಿಸಲಾಗುತ್ತಿದೆ. ತಪಾಸಣೆ ವೇಳೆ ಪ್ರಯಾಣಿಕರ ದೂರು ಆಧರಿಸಿ ಆಯಾ ವಿಭಾಗದ ವಲಯದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಎರಡನೇ ಹಂತದ ಅಭಿಯಾನ ಹೇಗಿರುತ್ತೆ?
ಎರಡನೇ ಹಂತದ ಅಭಿಯಾನ ಶೀಘ್ರದಲ್ಲೇ ಆರಂಭವಾಗಲಿದೆ. ಮೊದಲ ಹಂತದ ಫಲಿತಾಂಶ ಬಂದ ನಂತರ, ಬಯೋ ಟಾಯ್ಲೆಟ್ನಿಂದ ದುರ್ವಾಸನೆ ಮತ್ತು ಉಸಿರುಗಟ್ಟಿಸುವ ಸಮಸ್ಯೆಯನ್ನು ಹೋಗಲಾಡಿಸಲು ಹೊಸ ತಂತ್ರಜ್ಞಾನ ಅಥವಾ ಶೌಚಾಲಯ ವಿನ್ಯಾಸದಲ್ಲಿನ ಬದಲಾವಣೆಗಳ ಕುರಿತು ಚರ್ಚೆ ನಡೆಯಲಿದೆ.