ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಮತ್ತೊಂದು ಆಘಾತ ನೀಡಿದ ರೈಲ್ವೆ ಇಲಾಖೆ
ನವದೆಹಲಿ, ಫೆಬ್ರವರಿ 25: ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸಿರುವ ಜನರಿಗೆ ಭಾರತೀಯ ರೈಲ್ವೆ ಮತ್ತೊಂದು ಆಘಾತ ನೀಡಿದೆ. ಅಲ್ಪ ದೂರದ ಪ್ರಯಾಣಕ್ಕೆ ಟಿಕೆಟ್ ಪಡೆಯುವ ರೈಲ್ವೆ ಪ್ರಯಾಣಿಕರು ಬೆಲೆ ಏರಿಕೆಯ ಬಿಸಿ ಎದುರಿಸುವಂತಾಗಿದೆ. ಈ ದಿಢೀರ್ ಬೆಲೆ ಏರಿಕೆ ದೈನಂದಿನ ಓಡಾಟ, ಕೂಲಿ ಕೆಲಸಗಳಿಗೆ ತೆರಳುವ ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ನೀಡಿದೆ. ಆದರೆ ಟಿಕೆಟ್ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ರೈಲ್ವೆ ಇಲಾಖೆ, ಇದು ಅನಗತ್ಯ ಓಡಾಟವನ್ನು ತಗ್ಗಿಸುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ.
ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಹೇರಿಕೆಯಾದ ಲಾಕ್ಡೌನ್ನ ನಿಯಮಗಳು ಹಂತ ಹಂತವಾಗಿ ಸಡಿಲಿಕೆಯಾದ ಬಳಿಕ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಮಾತ್ರ ಆರಂಭಿಸಿತ್ತು. ನಿಧಾನವಾಗಿ ಇತರೆ ರೈಲುಗಳ ಸಂಚಾರ ಕೂಡ ಆರಂಭವಾಗುತ್ತಿದ್ದು, ಸರ್ಕಾರ ಅನುಮತಿ ನೀಡಿದ ಬಳಿಕ ಎಲ್ಲ ರೈಲುಗಳ ಸಂಚಾರವೂ ಹಿಂದಿನಂತೆ ನಡೆಯುವ ನಿರೀಕ್ಷೆಯಿದೆ.
ನೈಋತ್ಯ ರೈಲ್ವೆ ವಿಸ್ಟಾಡಾಮ್ ಕೋಚ್ಗೆ ಭಾರೀ ಬೇಡಿಕೆ
ಭಾರತೀಯ ರೈಲ್ವೆಯು ದೂರ ಪ್ರಯಾಣದ ರೈಲುಗಳ ಸಂಚಾರವನ್ನು ಮಾತ್ರ ಆರಂಭಿಸಿತ್ತು. ಕಡಿಮೆ ಅಂತರದ ನಿಲ್ದಾಣಗಳಿಗೆ ಪ್ರಯಾಣಿಸುವ ರೈಲುಗಳನ್ನೂ ವಿಶೇಷ ರೈಲುಗಳು ಎಂದು ಪರಿಗಣಿಸಲಾಗಿದೆ.
ಎಕ್ಸ್ಪ್ರೆಸ್ ದರಕ್ಕೆ ಸಮ
ಕೋವಿಡ್-19 ಸಾಂಕ್ರಾಮಿಕದ ಕಾರಣ ವಿಶೇಷ ನಿಯಮದ ಅಡಿಯಲ್ಲಿ ಈ ರೈಲುಗಳ ದರವನ್ನು ಕೆಲವು ಅಂತರದವರೆಗೆ ಮೈಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಕಾಯ್ದಿರಿಸದ ಟಿಕೆಟ್ ದರಕ್ಕೆ ಸಮನಾಗಿ ನಿಗದಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹೇಳಿಕೆ ನೀಡಿದೆ.
ಪ್ರಯಾಣಿಕರ ಅಸಮಾಧಾನ
ರೈಲ್ವೆ ಇಲಾಖೆಯು ಸ್ಥಳೀಯ ಅಥವಾ ಪ್ರಯಾಣಿಕ ರೈಲುಗಳ ಸಂಚಾರವನ್ನು ಈಚೆಗೆ ಆರಂಭಿಸಿದೆ. ನಿರಂತರವಾಗಿ ರೈಲುಗಳಲ್ಲಿ ಪ್ರಯಾಣಿಸುವವರು, ತುರ್ತಾಗಿ ಪ್ರಯಾಣ ಕೈಗೊಳ್ಳುವವರು ಟಿಕೆಟ್ ದರದ ಏರಿಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹೊಡೆತ: ಪಶ್ಚಿಮ ವಿಭಾಗದ ರೈಲ್ವೆಗೆ 5,000 ಕೋಟಿ ರೂ. ನಷ್ಟ
ಅಲ್ಪ ಪ್ರಮಾಣದಲ್ಲಿ ಹೆಚ್ಚಳ
'ತೀರಾ ಅಗತ್ಯವಲ್ಲದ ಹಾಗೂ ತಪ್ಪಿಸಬಹುದಾದ ಪ್ರಯಾಣಗಳಿಂದ ಜನರನ್ನು ದೂರ ಉಳಿಯುವಂತೆ ಮಾಡಲು ಪ್ರಯಾಣಿಕ ಹಾಗೂ ಇತರೆ ಅಲ್ಪ ದೂರದ ರೈಲುಗಳ ಪ್ರಯಾಣ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಳ ಮಾಡಿದೆ ಎಂದು ತಿಳಿಸಲು ರೈಲ್ವೇಸ್ ಬಯಸುತ್ತದೆ' ಎಂದು ಹೇಳಿಕೆ ಮಾಹಿತಿ ನೀಡಿದೆ.
ಜನಸಂದಣಿ ತಡೆಯಲು ಕ್ರಮ
'ಕೋವಿಡ್-19 ಇನ್ನೂ ನಮ್ಮ ಸುತ್ತಲೂ ಇದೆ. ವಾಸ್ತವವಾಗಿ ಕೆಲವು ರಾಜ್ಯಗಳಲ್ಲಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ಜನರು ಪ್ರಯಾಣದಿಂದ ದೂರ ಇರುವಂತೆ ಮತ್ತು ಪರೀಕ್ಷೆಗೆ ಒಳಪಡುವಂತೆ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ರೈಲುಗಳಲ್ಲಿ ಪ್ರಯಾಣಿಕರು ಹೆಚ್ಚು ತುಂಬಿಕೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ' ಎಂದು ಅದು ತಿಳಿಸಿದೆ.
ಬೆಂಗಳೂರು ನಗರಕ್ಕೆ ಸಿಹಿಸುದ್ದಿ ಕೊಟ್ಟ ರೈಲ್ವೆ ಸಚಿವರು
ಜನಸಾಮಾನ್ಯರಿಗೆ ಹೊರೆ
ಉದಾಹರಣೆಗೆ ಪಂಜಾಬ್ನ ಅಮೃತಸರದಿಂದ ಪಠಾಣ್ಕೋಟ್ಗೆ ಸುಮಾರು 114 ಕಿಮೀ ದೂರವಿದ್ದು, ಇದಕ್ಕೆ ರೈಲಿನಲ್ಲಿ 25 ರೂ ಟಿಕೆಟ್ ದರವಿತ್ತು. ಈಗ ಪ್ರಯಾಣಿಜರು 55 ರೂ ತೆರಬೇಕಾಗುತ್ತದೆ. ಇದು ಎಲ್ಲ ಊರುಗಳ ನಡುವಿನ ರೈಲು ಸಂಚಾರಕ್ಕೆ ಅನ್ವಯವಾಗಲಿದೆ. ಇದರಿಂದ ನಿರಂತರವಾಗಿ ರೈಲಿನಲ್ಲಿ ಓಡಾಡುವ ಅನಿವಾರ್ಯತೆಯುಳ್ಳ ಕೂಲಿಕಾರ್ಮಿಕರು, ಸಾಮಾನ್ಯ ಜನರಿಗೆ ಹೊರೆಯಾಗಲಿದೆ.