ಪ್ರಯಾಣಿಕರ ಗಮನಕ್ಕೆ: ಇದು ಭಾರತೀಯ ರೈಲ್ವೆ ಹೊಸ ಸಹಾಯವಾಣಿ
ನವದೆಹಲಿ, ಮಾರ್ಚ್ 9: ರೈಲು ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೆ ಹೊಸ ಸಹಾಯವಾಣಿ ಪ್ರಕಟಿಸಿದೆ. ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಬಳಕೆಯಲ್ಲಿದ್ದ 182 ಸಂಖ್ಯೆ ಬದಲಿಗೆ ಇನ್ಮುಂದೆ 139 ಸಂಖ್ಯೆ ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 182 ಸಂಖ್ಯೆ ಏಪ್ರಿಲ್ 1, 2021ರಿಂದ ಚಾಲನೆಯಲ್ಲಿರುವುದಿಲ್ಲ. ಹೀಗಾಗಿ, ಅಗತ್ಯ ನೆರವು, ದೂರು, ದುಮ್ಮಾನ ಹೇಳಿಕೊಳ್ಳಲು ಏಕಿಕೃತ ಸಹಾಯವಾಣಿಯನ್ನು ಆಯ್ಕೆಮಾಡಿ ಪ್ರಕಟಿಸಲಾಗಿದೆ.
ರೈಲು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ, ಅಪರಾಧ ಕೃತ್ಯಗಳು ಕಂಡಲ್ಲಿ, ಕಿರುಕುಳವಾದಲ್ಲಿ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ.
ಹೇಗೆ ಕಾರ್ಯ ನಿವರ್ವಹಿಸಲಿದೆ: ಸಹಾಯವಾಣಿ 139ಗೆ ಕರೆ ಮಾಡಿದರೆ ಆರ್ಪಿಎಫ್ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ. ಸಮಸ್ಯೆ ಏನಾಗಿದೆ? ಎನ್ನುವುದನ್ನು ಸಹಾಯವಾಣಿ ನಿಯಂತ್ರಕರಿಗೆ ತಿಳಿಸಬೇಕು. ಆ ಕೂಡಲೇ ಕಾರ್ಯ ಪ್ರವೃತ್ತರಾಗುವ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಅಗತ್ಯವಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಯಲ್ಲಿ ಕರೆ ಮಾಡಿದವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸುವರು.
#OneRailOneHelpline139
- 139 ಒಟ್ಟು 12 ಭಾಷೆಗಳಲ್ಲಿ ಲಭ್ಯವಿರಲಿದೆ.
- ಪ್ರಯಾಣಿಕರು ಐವಿಆರ್ಎಸ್ (Interactive Voice Response System) ಅಥವಾ ಕಾಲ್ ಸೆಂಟರ್ಗೆ ಸಂಪರ್ಕ ಹೊಂದಬಹುದು.
- ಸಹಾಯವಾಣಿ ಎಲ್ಲಾ ಬಗೆಯ ಫೋನ್ಗಳಲ್ಲೂ ಲಭ್ಯವಿರಲಿದೆ. ಸ್ಮಾರ್ಟ್ ಫೋನ್ ಬೇಕೇ ಬೇಕು ಎಂದೇನಿಲ್ಲ.
- ದಿನವೊಂದಕ್ಕೆ ಸುಮಾರು 3,44,513 ಎಸ್ಎಂಎಸ್/ ಕರೆ ಸ್ವೀಕರಿಸಲಾಗುತ್ತಿದೆ.
ಕಾರ್ಯ ವಿಧಾನ ವಿವರಣೆ
- ವೈದ್ಯಕೀಯ ನೆರವು, ಸುರಕ್ಷತಾ ಸಹಾಯ ಅಗತ್ಯವಿದ್ದರೆ 139 ಒತ್ತಿದ ಬಳಿಕ 1 ಒತ್ತಬೇಕು.
- ವಿಚಾರಣೆಗಾಗಿ 2 ಒತ್ತಬೇಕು. ಪಿಎನ್ಆರ್ ಸ್ಥಿತಿಗತಿ, ರೈಲು ಆಗಮನ/ನಿರ್ಗಮನ ವಿವರ, ಟಿಕೆಟ್ ದರ ವಿವರ, ಟಿಕೆಟ್ ಬುಕ್ಕಿಂಗ್, ಟಿಕೆಟ್ ಕ್ಯಾನ್ಸಲಿಂಗ್, ತಲುಪಬೇಕಾದ ಸ್ಥಳದ ಬಗ್ಗೆ ಅಲರ್ಟ್, ವ್ಹೀಲ್ ಚೇರ್ ಬುಕ್ಕಿಂಗ್, ಊಟದ ಬುಕ್ಕಿಂಗ್ ಮುಂತಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಸಹಾಯವಾಣಿ ಸಬ್ ಮೆನು
ಸಹಾಯವಾಣಿ ಸಬ್ ಮೆನುವಿನಲ್ಲಿ ವಿವಿಧ ರೀತಿಯ ದೂರುಗಳಿಗೆ ವಿವಿಧ ಸಂಖ್ಯೆಗಳನ್ನು ನಿಗದಿ ಪಡಿಸಲಾಗಿದೆ. ಸಹಾಯವಾಣಿ 139 ಒತ್ತಿದ ಬಳಿಕ ಸಾಮಾನ್ಯ ದೂರು ದಾಖಲಿಸಲು ಸಬ್ ಮೆನು ಸಂಖ್ಯೆ 4 ಒತ್ತಬೇಕು. ಜಾಗೃತಿಗೆ ಸಂಬಂಧಿಸಿದ ವಿಷಯವಾದರೆ, 5ನೇ ಸಂಖ್ಯೆಯನ್ನು ಪ್ರೆಸ್ ಮಾಡಿ, ಪಾರ್ಸೆಲ್ ಹಾಗೂ ಸಾಗಣೆ ಸಂಬಂಧಿಸಿದ ದೂರು, ವಿವರಣೆಗಾಗಿ 6ನೇ ಸಂಖ್ಯೆ ಒತ್ತಿ, ಐಆರ್ಟಿಸಿಗೆ ಸಂಬಂಧಿಸಿದ ವಿಚಾರಣೆಗಾಗಿ 7 ಒತ್ತಿ.
ದೂರುಗಳ ಸ್ಥಿತಿಗತಿ ತಿಳಿಯಲು 9ನೇ ಸಂಖ್ಯೆ ಒತ್ತಿ, ಕಾಲ್ ಸೆಂಟರ್ ಸಿಬ್ಬಂದಿ ಜೊತೆ ಮಾತನಾಡಲು ಚಿಹ್ನೆ (*) ಒತ್ತಬೇಕಾಗುತ್ತದೆ.
ಮಾರ್ಚ್ 25,2020ರಿಂದ ಕೊವಿಡ್ ಕಾರಣಕ್ಕಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಜೂನ್ ನಂತರ ಸೀಮಿತವಾಗಿ ವಿಶೇಷ ರೈಲುಗಲ ಸಂಚಾರ ಆರಂಭಿಸಲಾಯಿತು.
|
ಜಾಗೃತಿ ಸಂದೇಶ
- ಅಪರಿಚಿತರಿಂದ ಯಾವುದೇ ತಿಂಡಿ, ಜ್ಯೂಸ್ ಇನ್ನಿತರ ಆಹಾರ ಪದಾರ್ಥಗಳನ್ನು ಪಡೆಯಬಾರದು
- ಚಿನ್ನಾಭರಣ ಧರಿಸಿ ಕಿಟಕಿ ಬಳಿ ಕುಳಿತುಕೊಳ್ಳಬಾರದು
- ರೈಲು ನಿಲ್ದಾಣದಿಂದ ಹೊರಡುವ ಮತ್ತು ನಿಲ್ಲುವ ಸಮಯದಲ್ಲಿ ಜಾಗರೂಕರಾಗಿರಬೇಕು
- ವ್ಯಾನಿಟಿ ಬ್ಯಾಗಿನಲ್ಲಿ ಬೆಲೆಬಾಳುವ ಸೊತ್ತು ಇದ್ದರೆ ಇತರರಿಗೆ ಅನುಮಾನ ಬಾರದಂತೆ ನೋಡಿಕೊಳ್ಳಿ
- ಲಗೇಜುಗಳನ್ನು ಸೀಟಿನ ಅಡಿಯಲ್ಲಿ ಅಳವಡಿಸಲಾಗಿರುವ ಸೇಫ್ಟಿ ಚೈನಿನಿಂದ ಭದ್ರಪಡಿಸಿಕೊಳ್ಳಬೇಕು.
- ಫೋನ್ ಕೈಯಲ್ಲಿ ಹಿಡಿದುಕೊಂಡು ಬಾಗಿಲ ಬಳಿ ಮಾತನಾಡುತ್ತಾ ನಿಲ್ಲಬಾರದು.