ಭಾರತೀಯ ನೌಕಾದಿನ: ನೌಕಾಪಡೆ ಕುರಿತು ಹೆಮ್ಮೆಪಡುವ 10 ಸಂಗತಿ
ಮೂರು ಕಡೆಗಳಲ್ಲಿ ಸಾಗರವನ್ನೇ ಹೊದ್ದಿರುವ ಭಾರತಕ್ಕೆ ನೌಕಾಪಡೆಯ ಅಗತ್ಯ ಎಷ್ಟು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಭಾರತದ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಯೋತ್ಪಾದಕರಿಗೆ ಹೀಗೆ ಮೂರು ಕಡೆ ಕಡಲು ಸುತ್ತುವರಿದಿರುವುದು ವರದಾನವೇ. ಹೀಗಿರುವಾಗ ಭಾರತೀಯ ನೌಕಾಪಡೆ ಒಂದು ಕ್ಷಣವೂ ಎಚ್ಚರ ತಪ್ಪದೆ ಮೈಯೆಲ್ಲ ಕಣ್ಣಾಗಿ ಇರಬೇಕಾದುದು ಅನಿವಾರ್ಯ.
ಭಾರತೀಯ ನೌಕಾಪಡೆಯಲ್ಲಿ ವಿಜೃಂಭಿಸುತ್ತಿದೆ ನಾರಿ ಶಕ್ತಿ
ಡಿಸೆಂಬರ್ 04 ನ್ನು ಪ್ರತಿವರ್ಷ ಭಾರತೀಯ ನೌಕಾ ದಿನವನ್ನಾಗಿ ಆಚರಿಸಲಾಗುತ್ತದೆ. 1971, ಡಿಸೆಂಬರ್ 4 ರಂದು ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕೆ ಈ ದಿನವನ್ನು ನೌಕಾದಿನವನ್ನಾಗಿ ಆಚರಿಸಿ, ನೌಕಾಪಡೆಯ, ಭಾರತೀಯ ಸೇನೆಯ ಎಲ್ಲ ಸಿಬ್ಬಂದಿಗಳಿಗೂ ಕೃತಜ್ಞತೆ ಅರ್ಪಿಸಲಾಗುತ್ತದೆ.
ನೌಕ ದಳಕ್ಕೆ ಆಯ್ಕೆಯಾದ ಮಂಗಳೂರಿನ ದಿಶಾಳ ಸಾಹಸಗಾಥೆ
ಭೋರ್ಗರೆವ ಕಡಲಲೆಯ ಮೇಲೆ, ಚಳಿ ಮಳೆ ಎನ್ನದೆ ಹೋರಾಡುವ ನೌಕಾಪಡೆಯ ಪ್ರತಿ ಸೈನಿಕರಿಗೂ ನಮ್ಮದೂ ನಮನವಿರಲಿ. ನೌಕಾದಿನವನ್ನು ಆಚರಿಸುತ್ತಿರುವ ಈ ಹೊತ್ತಲ್ಲಿ, ಭಾರತೀಯ ನೌಕಾಪಡೆಗೆ ಸಂಬಂಧಿಸಿದ 10 ಮಹತ್ವದ ಸಂಗತಿ, ನಿಮಗಾಗಿ ಇಲ್ಲಿದೆ.(ಚಿತ್ರಕೃಪೆ: ಪಿಟಿಐ)
ಮೊದಲ ಕಾರ್ಯಾಚರಣೆ
ಬ್ರಿಟಿಷರು ಭಾರತದಲ್ಲಿದ್ದ ಸಮಯದಲ್ಲಿ, 1612 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ನೌಕಾಪಡೆಯನ್ನು ಸ್ಥಾಪಿಸಿದರು. ಇದನ್ನೇ ನಂತರ ರಾಯಲ್ ಇಂಡಿಯನ್ ನೇವಿ ಎಂದು ಕರೆಯಲಾಗುತ್ತಿತ್ತು. 1950, ಡಿಸೆಂಬರ್ 26 ರಂದು ಇದಕ್ಕೆ ಭಾರತೀಯ ನೌಕಾಪಡೆ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯ್ತು. ಭಾರತೀಯ ನೌಕಾಪಡೆಯ ಮೊದಲ ಕಾರ್ಯಾಚರಣೆ ನಡೆದಿದ್ದು ಪೋರ್ಚುಗೀಸ್ ನೌಕಾಪಡೆಯ ವಿರುದ್ಧ, ಗೋವಾ ವಿಮೋಚನೆಯ ಸಮಯದಲ್ಲಿ ಅಂದರೆ 1961 ರಲ್ಲಿ.
ವೇಗದ ನೌಕಾ ಕ್ಷಿಪಣಿ
ಭಾರತೀಯ ನೌಕಾಪಡೆಯ ಹೆಮ್ಮೆಯ ಬ್ರಹ್ಮೋಸ್ ಕ್ಷಿಣಿಯು ಅತ್ಯಂತ ವೇಗದ ನೌಕಾ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಏಷ್ಯಾದಲ್ಲೇ ದೊಡ್ಡ ನಾವಲ್ ಅಕಾಡೆಮಿ ಭಾರತದಲ್ಲಿ!
ಕೇರಳದ ಕಣ್ಣೂರಿನಲ್ಲಿರುವ ಎಳಿಮಲಾ ನಾವಲ್ ಅಕಾಡೆಮಿಯು ಏಷ್ಯಾದಲ್ಲೇ ಅತ್ಯಂತ ದೊಡ್ಡ ನಾವಲ್ ಅಕಾಡೆಮಿ ಎಂಬ ಕೀರ್ತಿಪಡೆದಿದೆ. ಇತ್ತೀಚೆಗೆ ತಾನೇ ಶುಭಾಂಗಿ ಸ್ವರೂಪ್ ಎಂಬ ಮಹಿಳಾ ನೌಕಾ ಪೈಲೆಟ್ ಇಲ್ಲಿ ನೇಮಕಗೊಂಡು, ಈ ಸಾಧನೆ ಮಾಡಿದ ಮೊದಲ ಭಾರತೀಯ ನಾರಿ ಎನ್ನಿಸಿದ್ದರು.
ಭಾರತೀಯ ನೌಕಾಪಡೆಯ ಜನಕ ಯಾರು ಗೊತ್ತಾ?
ವೀರ ಹೋರಾಟಗಾರ ಛತ್ರಪತಿ ಶಿವಾಜಿ ಅವರನ್ನು ಭಾರತೀಯ ನೌಕಾಪಡೆಯ ಜನಕ ಎಂದು ಕರೆಯಲಾಗುತ್ತದೆ. ಕೊಂಕಣ ಮತ್ತು ಗೋವಾ ಸೀಮೆಯುದ್ದಕ್ಕೂ ಸಮುದ್ರವ್ಯಾಪಾರವನ್ನು ರಕ್ಷಿಸುವುದಕ್ಕಾಗಿ ಸದೃಢ ನೌಕಾಪಡೆಯನ್ನು ಶಿವಾಜಿ ನೇಮಿಸಿದ್ದ ಎಂಬುದು ಇತಿಹಾಸದ ಮೂಲಕ ತಿಳಿಯುತ್ತದೆ. ಅದಕ್ಕೆಂದೇ ಆತನಿಗೆ ಈ ಹೆಗ್ಗಳಿಕೆ.
ಅತ್ಯಂತ ಹಳೆಯ ವಿಮಾನ ವಾಹಕ ನೌಕೆ ಭಾರತದ್ದು!
ಐಎನ್ ಎಸ್ ವಿರಾಟ್, ಭಾರತೀಯ ನೌಕಾನೆಲೆಯ ಅತ್ಯಂತ ಹಳೆಯ ವಿಮಾನ ವಾಹಕ ನೌಕೆ(aircraft) ಎಂಬ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಇದು ಅತ್ಯಂತ ಹಳೆಯ ವಿಮಾನ ವಾಹಕ ನೌಕೆ. ಐಎನ್ ಎಸ್ ವಿಕ್ರಾಂತ್, ಭಾರತದಲ್ಲೇ ನಿರ್ಮಾಣವಾದ ಮೊದಲ ಭಾರತೀಯ ವಿಮಾನ ವಾಹಕ ನೌಕೆ.
ಮುಂಬೈ ದಾಳಿ ನಂತರ ಸಾಗರ್ ಪ್ರಹಾರಿ ಬಲ
2009 ರ 26/11 ಮುಂಬೈ ದಾಳಿಯ ನಂತರ ನೌಕಾಪಡೆಗೆ ಮತ್ತಷ್ಟು ಬಲ ನೀಡಲು ನಿರ್ಧರಿಸಿದ ಭಾರತೀಯ ಸರ್ಕಾರ, ದಿ ಸಾಗರ್ ಪ್ರಹಾರಿ ಬಲ್(ಎಸ್ ಪಿಬಿ) ವನ್ನು ಸ್ಥಾಪಿಸಿತು. ಈ ಘಟಕವು ಭಾರತೀಯ ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗುವ ಕೆಲಸ ಮಾಡುತ್ತದೆ.
ಭಯೋತ್ಪಾದಕರಿಗೆ ಸಿಂಹಸ್ವಪ್ನವಾದ ಮೊಸಳೆಗಳು!
ಮ್ಯಾಕ್ರೋಸ್ ಅಥವಾ ಮರೀನ್ ಕಮಾಂಡೊ ಗಳನ್ನು ಮಗರ್ ಮಚ್ ಎಂದೇ ಕರೆಯಲಾಗುತ್ತದೆ. ಮಗರ್ ಮಚ್ ಅಂದರೆ ಹಿಂದಿಯಲ್ಲಿ ಮೊಸಳೆ ಎಂದು. ಇವರು ಅತ್ಯಂತ ಗೌಪ್ಯವಾಗಿ ಕಾರ್ಯಾಚರಣೆ ಮಾಡುತ್ತ ಕಡಲ ಹಾದಿಯಿಂದ ಸುಲಭವಾಗಿ ನುಸುಳುವ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿದ್ದಾರೆ.
ಪಾಕಿಸ್ತಾನವನ್ನು ಸದೆಬಡಿದ ಭಾರತೀಯ ನೌಕಾಸೇನೆ
1971 ರ ಭಾರತ-ಪಾಕಿಸ್ತಅನ ಯುದ್ಧದ ಸಮಯದಲ್ಲಿ ಪಾಕ್ ಸೇನೆಯನ್ನು ಸದೆಬಡಿಯಲು ಭಾರತೀಯ ಸೇನೆ ಒಂದು ವಿಭಿನ್ನ ವಿಧಾನವನ್ನು ಬಳಸಿತ್ತು. ನೌಕಾ ಕ್ಷಿಪಣಿಯ ಮೂಲಕ ಪಾಕಿಸ್ತಾನದ ಆಯಿಲ್ ಟ್ಯಾಂಕ್ ಗಳನ್ನು ನಾಶಮಾಡಲಾಗಿತ್ತು. ಹಾಗೆಯೇ ಭೂಮಿಯ ಏಲೆ ದಾಳಿ ಮಾಡಲು ಅದು ವಿಮಾನವಾಹಕ ನೌಕೆಯನ್ನು ಬಳಸಿತ್ತು. ಆ ಸಮಯದಲ್ಲಿ ಭಾರತ ತನ್ನ ಒಬ್ಬ ಸೈನಿಕರನ್ನೂ ಕಳೆದುಕೊಳ್ಳದೆ, ಶತ್ರು ರಾಷ್ಟ್ರದ 500 ಕ್ಕೂ ಹೆಚ್ಚು ಸೈನಿಕರನ್ನು ಸದೆಬಡಿದಿತ್ತು. ಆ ದಿನ ಡಿಸೆಂಬರ್ 4, 1971. ಆ ದಿನವನ್ನು ಪ್ರತಿವರ್ಷ ಭಾರತೀಯ ನೌಕಾಪಡೆ ದಿನ ಎಂದು ಆಚರಿಸಲಾಗುತ್ತದೆ.
ಸಾಗರ್ ಪವನ್ ಹೆಗ್ಗಳಿಕೆ
ಇಡೀ ವಿಶ್ವದಲ್ಲಿ ಒಟ್ಟು ಎರಡು ನಾವಲ್ ಏರೋಬಾಟಿಕ್ ತಂಡಗಳಿವೆ. ಅವುಗಳಲ್ಲಿ ಒಂದು ಭಾರತದ್ದು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಅದನ್ನು ಸಾಗರ್ ಪವನ್ ಎಂದು ಕರೆಯಲಾಗುತ್ತದೆ.
ಉಪಗ್ರಹ ತಂತ್ರಜ್ಞಾನ
ಭಾರತೀಯ ನೌಕಾಪಡೆ ಜಿಸ್ಯಾಟ್(GSAT)- 7 ಎಂಬ ಮಲ್ಟಿ ಬ್ರಾಂಡ್ ಸಂವಹನ ಉಪಗ್ರಹವನ್ನು ಸಂವಹನಕ್ಕಾಗಿ ಉಪಯೋಗಿಸುತ್ತಿದೆ. ಇದು ಸಮುದ್ರದ ಮೇಲೆ ನಡೆಯುವ ಚಲನವಲನಗಳ ಪತ್ತೆಗೆ ಅತ್ಯಂತ ಸಹಕಾರಿಯಾಗಿದೆ.