ಭಾರತದ ಶೇ.30ರಷ್ಟು ಜನರಲ್ಲಿ ಕೊವಿಡ್-19 ರೋಗನಿರೋಧಕ ಶಕ್ತಿ ವೃದ್ಧಿ
ನವದೆಹಲಿ, ಅಕ್ಟೋಬರ್.18: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹಾವಳಿಯು ನಿಗದಿತ ಗಡಿಯನ್ನು ದಾಟಿದೆ ಎಂದು ಸರ್ಕಾರ ನೇಮಿಸಿದ ತಜ್ಞರ ಸಮಿತಿಯು ತಿಳಿಸಿದೆ. ಎಲ್ಲ ಮಾನದಂಡ ಮತ್ತು ಶಿಷ್ಟಾಚಾರ ಪಾಲಿಸಿದ್ದಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಕೊವಿಡ್-19 ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಮಿತಿಯು ಭವಿಷ್ಯ ನುಡಿದಿದೆ.
ಚಳಿಗಾಲ ಮತ್ತು ಸಾಲು ಸಾಲು ಹಬ್ಬ ಹರಿದಿನಗಳ ಹಿನ್ನೆಲೆ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುವ ಆತಂಕವಂತೂ ಇದ್ದೇ ಇದೆ. ಕೊವಿಡ್-19 ನಿಯಮಗಳನ್ನು ಸಡಿಲಗೊಳಿಸಿದ್ದು, ಮುಂದಿನ ಒಂದು ತಿಂಗಳಿನಲ್ಲೇ ಕನಿಷ್ಠ 26 ಲಕ್ಷ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಸಮಿತಿಯು ಎಚ್ಚರಿಕೆ ನೀಡಿದೆ.
ಭಾರತದಲ್ಲಿ 24 ಗಂಟೆಯಲ್ಲಿ 61,871 ಹೊಸ ಕೋವಿಡ್ ಪ್ರಕರಣ
ಭಾರತವು ಪ್ರಸ್ತುತ ಅಂದಾಜು 135 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ.30ರಷ್ಟು ಜನರಲ್ಲಿ ಮಾತ್ರ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಉಳಿದಂತೆ ಶೇ.70ರಷ್ಟು ಜನರು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ತಜ್ಞರ ಸಮಿತಿಯು ತಿಳಿಸಿದೆ.
ಕೊವಿಡ್-19 ನಿಯಂತ್ರಣಕ್ಕೆ ಶಿಷ್ಟಾಚಾರ ಪಾಲನೆ ಕಡ್ಡಾಯ
ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕಿದ್ದಲ್ಲಿ ಮಾನದಂಡ ಮತ್ತು ಶಿಷ್ಟಾಚಾರ ಪಾಲನೆಯನ್ನು ಕಡ್ಡಾಯಗೊಳಿಸಬೇಕು. ಹಾಗೆ ಅಂದುಕೊಂಡಂತೆ ಆಗಿದ್ದಲ್ಲಿ 2021ರ ಫೆಬ್ರವರಿ ವೇಳೆಗೆ ಅತಿ ಕಡಿಮೆ ಕೊವಿಡ್-19 ಸಕ್ರಿಯ ಪ್ರಕರಣಗಳ ಜೊತೆಗೆ ಮಹಾಮಾರಿಗೆ ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಲಿದೆ ಎಂದು ಸಮಿತಿಯು ಸಲಹೆ ನೀಡಿದೆ.
ಭಾರತದಲ್ಲಿ 105 ಲಕ್ಷ ಜನರಿಗೆ ಅಂಟುತ್ತೆ ಕೊವಿಡ್-19
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸವು ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ದೇಶದಲ್ಲಿ ಮಹಾಮಾರಿಯು 105 ಲಕ್ಷ ಜನರಿಗೆ ಅಂಟಿಕೊಂಡಿರುತ್ತದೆ. ದೇಶದಲ್ಲಿ ಕನಿಷ್ಠ 1 ಕೋಟಿ 5 ಲಕ್ಷ ಜನರಿಗೆ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಲಿವೆ. ಪ್ರಸ್ತುತ ದೇಶದಲಲಿ 75 ಲಕ್ಷ ಜನರಿಗೆ ಕೊರೊನಾವೈರಸ್ ಅಂಟಿಕೊಂಡಿದ್ದು, ಇನ್ನೂ 30 ಲಕ್ಷ ಜನರಿಗೆ ಮಹಾಮಾರಿ ತಗುಲುವ ಅಪಾಯವಿದೆ ಎಂದು ಸಮಿತಿ ಹೇಳಿದೆ.
ಸಾವಿನ ಪ್ರಮಾಣ ಇಳಿಕೆಗೆ ಲಾಕ್ ಡೌನ್ ಕಾರಣ ಎಂದ ಸಮಿತಿ
ಕೊರೊನಾವೈರಸ್ ಸೋಂಕಿನ ಆತಂಕದಿಂದಾಗಿ ಕಳೆದ ಮಾರ್ಚ್.25ರಂದು ಮೊದಲ ಬಾರಿಗೆ ಭಾರತ ಲಾಕ್ ಡೌನ್ ಘೋಷಿಸಲಾಯಿತು. ಅಂದು ಲಾಕ್ ಡೌನ್ ಘೋಷಿಸದಿದ್ದಲ್ಲಿ ಆಗಸ್ಟ್ ತಿಂಗಳ ಹೊತ್ತಿದೆ ದೇಶದಲ್ಲಿ ಕೊವಿಡ್-19 ನಿಂದ ಮೃತಪಟ್ಟವರ ಸಂಖ್ಯೆ 25 ಲಕ್ಷದ ಗಡಿ ದಾಟುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ತೆಗೆದುಕೊಂಡ ನಿರ್ಧಾರದಿಂದ ಇಂದು ಪರಿಸ್ಥಿತಿ ಹತೋಟಿಯಲ್ಲಿದೆ. ಇಂದು ಭಾರತದಲ್ಲಿ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 1.14 ಲಕ್ಷದಷ್ಟಿದೆ ಎಂದು ಸಮಿತಿ ಉಲ್ಲೇಖಿಸಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಚಿತ್ರಣ
ಭಾರತದಲ್ಲಿ ಒಂದೇ ದಿನ 61,871 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 74,94,552ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1033 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 1,14,031ಕ್ಕೆ ಏರಿಕೆಯಾಗಿದೆ. ಭಾರತದಾದ್ಯಂತ 65,97,210 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 7,83,311 ಸಕ್ರಿಯ ಪ್ರಕರಣಗಳಿವೆ.