ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಸಿದ್ಧವಾಯಿತು: ಮುಂದೇನು?
ನವದೆಹಲಿ, ಸಪ್ಟೆಂಬರ್.23: ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವಂತಾ ಲಸಿಕೆಯು 2021ಕ್ಕೂ ಮೊದಲೇ ಸಿದ್ಧವಾಗಲಿದೆ. ಆದರೆ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಲಸಿಕೆಯ ವಿತರಣೆ ಮತ್ತು ಹಂಚಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸಾಂಕ್ರಾಮಿಕ ರೋಗತಜ್ಞರೇ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಲಸಿಕೆ ಸಂಶೋಧನೆಯ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತದಲ್ಲಿ ಶಿಶುಗಳು ಮತ್ತು ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮಟ್ಟಿಗಷ್ಟೇ ಸೀಮಿತಗೊಂಡಿದ್ದು, ಅದನ್ನು ಮೀರಿದ ಮೂಲಸೌಕರ್ಯಗಳನ್ನು ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಲಸಿಕೆ ಸುರಕ್ಷತಾ ಸಲಹೆಗಾರರ ಸಮಿತಿ ಸದಸ್ಯ ಹಾಗೂ ವೆಲ್ಲೂರು ಮೂಲದ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವ ಶಾಸ್ತ್ರಜ್ಞ ಗಗನ್ ದೀಪ್ ಕಾಂಗ್ ತಿಳಿಸಿದ್ದಾರೆ.
ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!
ಕೊರೊನಾವೈರಸ್ ಸೋಂಕಿಗೆ ಮದ್ದು ಯಾವಾಗ ಸಿಗುತ್ತೆ ಎನ್ನುವುದೇ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ತಿಂಗಳಿನಲ್ಲೇ ಕೊವಿಡ್-19 ಸೋಂಕಿಗೆ ಲಸಿಕೆ ಸಂಶೋಧಿಸಲಾಗುತ್ತದೆ ಎಂದು ಹೇಳುತ್ತಾರೆ.
ಪ್ರಧಾನಿ ಮೋದಿ ಆಗಸ್ಟ್ ನಲ್ಲೇ ಲಸಿಕೆ ಸಿಗುತ್ತೆ ಎಂದಿದ್ದರು
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ನಲ್ಲಿ ಕೊವಿಡ್-19 ಸೋಂಕಿಗೆ ಲಸಿಕೆ ಸಿಗುತ್ತದೆ ಎಂದಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಇದಕ್ಕೂ ಮೊದಲೇ ಔಷಧಿ ಪತ್ತೆ ಮಾಡಲಾಗುತ್ತದೆ ಎಂದಿದ್ದರು. ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿಯೇ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ವೈದ್ಯಕೀಯ ಸಂಶೋಧಕರು ಮತ್ತು ಸಾಂಕ್ರಾಮಿಕ ರೋಗತಜ್ಞರು ಮಾತ್ರ ಈ ವಾದವನ್ನು ನಿರಾಕರಿಸಿದ್ದರು.
ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆಗೆ ಆದ್ಯತೆ
ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ರಾಷ್ಟ್ರವಾಗಿರುವ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಶರವೇಗದಲ್ಲಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಲಸಿಕೆ ಸಂಶೋಧನೆಯ ಅನಿವಾರ್ಯತೆ ಹೆಚ್ಚಾಗಿದೆ. ಕುಸಿದ ಆರೋಗ್ಯ ವ್ಯವಸ್ಥೆ ಮೇಲೆತ್ತುವ ಉದ್ದೇಶದಿಂದ ಲಸಿಕೆ ಸಂಶೋಧಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ಸರ್ಕಾರವು ಹೇಳಿತ್ತು.
ಭಾರತಕ್ಕೆ ಆರ್ಥಿಕ ಹೊಡೆತ ಕೊಟ್ಟ ಮಾರ್ಚ್ ಲಾಕ್ ಡೌನ್
ಕೊರೊನಾವೈರಸ್ ಸೋಂಕು ನಿವಾರಣೆ ಉದ್ದೇಶದಿಂದಾಗಿ ಮಾರ್ಚ್ ತಿಂಗಳಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಯಿತು. ಈ ವೇಳೆ ದೇಶದ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ದೇಶೀಯ ಉತ್ಪನ್ನಗಳ ಪ್ರಮಾಣವು ಕುಗ್ಗಿದೆ. ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಶೇ.23.90ರಷ್ಟು ಒಟ್ಟಾರೆ ದೇಶೀಯ ಉತ್ಪನ್ನವು ಕುಗ್ಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ಲಸಿಕೆ ಉತ್ತಮ ಎಂದು ವರ್ಷಾಂತ್ಯಕ್ಕೆ ತಿಳಿಯುತ್ತೆ
ಭಾರತದಲ್ಲಿರುವ ಸ್ಥಳೀಯ ನಿರೀಕ್ಷಿತ ಲಸಿಕೆಯ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ವರ್ಷಾಂತ್ಯದ ವೇಳೆಗೆ ಯಾವ ಲಸಿಕೆಗಳು ಕೊವಿಡ್-19 ಚಿಕಿತ್ಸೆ ಉತ್ತಮ ಮತ್ತು ಯಾವ ಲಸಿಕೆಗಳು ಉತ್ತಮವಲ್ಲ ಎನ್ನುವುದನ್ನು ತಿಳಿಸುವ ಅಂಕಿ-ಅಂಶಗಳು ನಮ್ಮ ಬಳಿ ಇರಲಿವೆ" ಎಂದು ಸೂಕ್ಷ್ಮ ಜೀವ ಶಾಸ್ತ್ರಜ್ಞ ಗಗನ್ ದೀಪ್ ಕಾಂಗ್ ತಿಳಿಸಿದ್ದಾರೆ. ಅಲ್ಲದೇ, ಸಂಶೋಧನೆ ಸಂದರ್ಭದಲ್ಲಿ ಉತ್ತಮ ಫಲಿತಾಂಶಗಳು ಸಿಕ್ಕಲ್ಲಿ 2021ರ ಮೊದಲಾರ್ಧದಲ್ಲೇ ಲಸಿಕೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಪ್ರಸ್ತುತ ಲಸಿಕೆಯ ಮಾದರಿಗಳು ಮೂರು ಹಂತದ ಪ್ರಯೋಗಗಳಲ್ಲಿ ಉತ್ತಮವಾಗಿದ್ದು, ಮುಂದಿನ ಹಂತವು ಹೆಚ್ಚು ಮಹತ್ವ ಪಡೆದುಕೊಂಡಿರುತ್ತದೆ. ಈ ಹಂತದಲ್ಲಿ ಶೇ.50ರಷ್ಟು ಲಸಿಕೆಗಳು ಮಾತ್ರ ಯಶಸ್ವಿಯಾಗುವ ಸಾಧ್ಯತೆಗಳಿರುವತ್ತವೆ ಎಂದು ಸೂಕ್ಷ್ಮ ಜೀವ ಶಾಸ್ತ್ರಜ್ಞ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.
ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸಂಶೋಧನೆ
ವಿಶ್ವದ ಬೃಹತ್ ಲಸಿಕೆ ಉತ್ಪಾದನಾ ಸಂಸ್ಥೆಯಾಗಿರುವ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಪೂರಕವಾದ ಲಸಿಕೆ ಸಂಶೋಧನೆಯನ್ನು ತೊಡಗಿದೆ. ಅಮೆರಿಕಾದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆಯ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ.
ಭಾರತದಲ್ಲಿ ರಷ್ಯಾ ಅಭಿವೃದ್ಧಿಪಡಿಸಿದ ಕೊವಿಡ್-19 ಲಸಿಕೆ ವಿತರಣೆ
ರಷ್ಯಾದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಹಾಗೂ ಸೋಂಕು ತಗುಲದಂತೆ ತಡೆಯುವ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಲಸಿಕೆಯನ್ನು ಭಾರತದಲ್ಲಿ ವಿತರಣೆ ಮಾಡುವುದಾಗಿ ಸ್ಥಳೀ ಔಷಧಿ ತಯಾರಕ ಸಂಸ್ಥೆಯಾಗಿರುವ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಕಳೆದ ವಾರವೇ ತಿಳಿಸಿದೆ. ರಷ್ಯಾದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆ ಪ್ರಯೋಗವು ಅಂತಿಮ ಹಂತದಲ್ಲಿದ್ದು, ಮನುಷ್ಯರ ಮೇಲೆ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗುತ್ತಿದೆ. ಅನಂತರದಲ್ಲಿ ಈ ಲಸಿಕೆಯ ವಿತರಣೆಗೆ ಸರ್ಕಾರದಿಂದ ಅಂತಿಮವಾಗಿ ಅನುಮತಿ ಸಿಗಲಿದೆ.
ಕೊರೊನಾವೈರಸ್ ಲಸಿಕೆ ವಿತರಣೆ ಮತ್ತ ಸಂಗ್ರಹಣೆ ಸವಾಲು
ಭಾರತದಲ್ಲಿ ಕೊರೊನಾವೈರಸ್ ಸೋಂಕಿಗೆ ಲಸಿಕೆ ಸಂಶೋಧನೆ ಬಳಿಕವೂ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಲಸಿಕೆಯ ಸಂಗ್ರಹಣೆ ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವುದು ಹೇಗೆ ಎನ್ನುವುದೇ ಭಾರತದ ಮಟ್ಟಿಗೆ ದೊಡ್ಡ ಸವಾಲು ಎನಿಸಲಿದೆ. ಏಕೆಂದರೆ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಎರಡನೇ ರಾಷ್ಟ್ರವೇ ಭಾರತವಾಗಿದ್ದು, 130 ಕೋಟಿ ಜನರಿಗೆ ಲಸಿಕೆಯನ್ನು ತಲುಪಿಸುವುದು ಅಷ್ಟು ಸುಲಭ ಸಾಧ್ಯವಲ್ಲ.
"ನಮಗೆ ದೈನಂದಿನ ಬದುಕಿನಲ್ಲಿ ರೋಗ ನಿರೋಧಕಗಳನ್ನು ಸ್ವೀಕರಿಸುವ ಅನಿವಾರ್ಯತೆಗಳಿಲ್ಲ. ಕೊವಿಡ್-19 ಸೋಂಕಿನಿಂದ ಹೆಚ್ಚು ಅಪಾಯದ ಎದುರಿಸುತ್ತಿರುವ ವೃದ್ಧರಿಗೆ, ಮಕ್ಕಳಿಗೆ, ಗರ್ಭಿಣಿಯರನ್ನು ನಿರ್ದಿಷ್ಟವಾಗಿ ಗುರುತಿಸಿ ಲಸಿಕೆ ಹಾಕಲು ಯಾವುದೇ ಮಾರ್ಗಗಳಿಲ್ಲ. ಹೀಗಾಗಿ ಎಲ್ಲಾ ವಯಸ್ಸಿನವರಿಗೆ ರೋಗ ನಿರೋಧಕ ಲಸಿಕೆ ನೀಡಲು ವ್ಯವಸ್ಥೆ ನಿರ್ಮಿಸುವುದು ಒಂದು ಸವಾಲಿನ ಕೆಲಸವಾಗಿದೆ" ಎಂದು ಕಾಂಗ್ ಹೇಳಿದರು.
ಕೊವಿಡ್-19 ತಪಾಸಣೆ ವೇಗದ ಮೇಲೆ ತೀರ್ಮಾನ
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅತಿಹೆಚ್ಚು ದೇಶಗಳು ಕೊವಿಡ್-19 ಸೋಂಕು ನಿಯಂತ್ರಣಕ್ಕೆ ತಪಾಸಣೆ ವೇಗವನ್ನು ಹೆಚ್ಚಿಸಿಕೊಳ್ಳುವುದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾರತ ಕೂಡಾ ಕೊರೊನಾವೈರಸ್ ಸೋಂಕಿತರ ತ್ವರಿತ ಆಂಟಿಜೆನ್ ಪರೀಕ್ಷೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ದೇಶದಲ್ಲಿ ಶೇ.50% ರಷ್ಟು ಸಮಯದಲ್ಲಿ ಸುಳ್ಳು ವರದಿಗಳನ್ನು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಎಷ್ಟು ಜನರನ್ನು ಕೊವಿಡ್-19 ಪರೀಕ್ಷೆಗೊಳಪಡಿಸಲಾಗುತ್ತೆ ಹಾಗೂ ಯಾವ ರೀತಿ ಪರೀಕ್ಷೆಗಳನ್ನು ನಿರ್ದಿಷ್ಟಪಡಿಸಲಾಗುತ್ತದೆ ಎನ್ನುವುದು ಮುಖ್ಯ ಎನಿಸುತ್ತದೆ.
Recommended Video
ಕೊವಿಡ್-19 ಸೋಂಕಿತರ ಅಂಕಿ-ಅಂಶಗಳು
ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 56 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 83347 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕಳೆದ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಬುಧವಾರ ಬೆಳಗ್ಗೆ 10 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 1085 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 88935ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 56,46,011ಕ್ಕೆ ಏರಿಕೆಯಾಗಿದೆ. ಈ ಪೈಕಿ 45,87,614 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 9,68,377 ಸಕ್ರಿಯ ಪ್ರಕರಣಗಳಿವೆ.