ಮಗು ಅತ್ತಿದ್ದಕ್ಕೆ ವಿಮಾನದಿಂದಲೇ ಕೆಳಕ್ಕಿಳಿಸಿದ ಬ್ರಿಟಿಷ್ ಏರ್ವೇಸ್
ನವದೆಹಲಿ, ಆಗಸ್ಟ್ 9: ಮಗು ಅತ್ತಿದ್ದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಏರ್ವೇಸ್ ಸಿಬ್ಬಂದಿ ಇಡೀ ಕುಟುಂಬವನ್ನೇ ವಿಮಾನದಿಂದ ಕೆಳಕ್ಕಿಳಿಸಿದ ಅಮಾನವೀಯ ಘಟನೆ ತಡವಾಗಿ ವರದಿಯಾಗಿದೆ.
ಈ ಬಗ್ಗೆ ಪ್ರಯಾಣಿಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ, ಲಂಡನ್ನಿಂದ ಬರ್ಲಿನ್ಗೆ ತೆರಳುತ್ತಿದ್ದ ವಿಮಾನದ ಸಿಬ್ಬಂದಿ ವಿರುದ್ಧ ಜನಾಂಗೀಯ ತಾರತಮ್ಯ ಹಾಗೂ ದುರ್ವರ್ತನೆಯ ಆರೋಪ ಮಾಡಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಆಗಸ್ಟ್ 3ರಂದು ಪತ್ರ ಬರೆದಿರುವ ಅವರು, ತಮ್ಮ ಮೂರು ವರ್ಷದ ಮಗು ಸೀಟ್ ಬೆಲ್ಟ್ ಹಾಕಿದಾಗ ಕಿರಿಕಿರಿ ಉಂಟಾಗಿ ಅಳಲಾರಂಭಿಸಿತು. ಮಗುವನ್ನು ಸಮಾಧಾನಪಡಿಸಲು ಬಿಸ್ಕೆಟ್ ನೀಡಲು ಮುಂದಾದ ತಮ್ಮ ಹಿಂದಿನ ಸೀಟಿನ ಭಾರತೀಯ ಕುಟುಂಬವನ್ನು ಸಹ ಕೆಳಕ್ಕಿಳಿಸಿದ್ದಾಗಿ ದೂರಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು
ಈ ಘಟನೆ ಜುಲೈ 23ರಂದು ನಡೆದಿದೆ. ವಿಮಾನ ಹೊರಡುವ ವೇಳೆಯಲ್ಲಿ ಮಗು ಅಳಲು ಆರಂಭಿಸಿತು. ಅದು ಸುಮ್ಮನಾಗದಿದ್ದರಿಂದ ಏರ್ವೇಸ್ ಸಿಬ್ಬಂದಿ ಅಳು ನಿಲ್ಲಿಸದಿದ್ದರೆ ಕಿಟಿಕಿಯಿಂದ ಹೊರಕ್ಕೆ ಎಸೆಯುವುದಾಗಿ ಕಿರುಚಾಡಿದರು.
ಆದರೆ ಮಗು ಅಳು ಜೋರಾಗಿದ್ದರಿಂದ ವಿಮಾನವನ್ನು ಮರಳಿ ನಿಲ್ದಾಣಕ್ಕೆ ತಂದು ಪತ್ನಿ, ಮಗು ಹಾಗೂ ನನ್ನನ್ನು ಕೆಳಕ್ಕೆ ಇಳಿಸಿದರು. ಜತೆಗೆ ನಮ್ಮ ಹಿಂದಿದ್ದ ಭಾರತೀಯ ಕುಟುಂಬವನ್ನು ಸಹ ಇಳಿಸಿದರು ಎಂದು ಆರೋಪಿಸಿದ್ದಾರೆ.
ಕ್ರಮ ಕೈಗೊಳ್ಳದ ಸಿಬ್ಬಂದಿ
ಭದ್ರತಾ ಸಿಬ್ಬಂದಿ ನಮ್ಮ ಬೋರ್ಡಿಂಗ್ ಪಾಸ್ ಕಿತ್ತುಕೊಂಡರು. ತಮ್ಮನ್ನು ಇಳಿಸಿದ್ದಕ್ಕೆ ಗ್ರಾಹಕರ ಸೇವೆಯ ವಿಭಾಗದವರು ಕಾರಣಗಳನ್ನು ನೀಡಲಿಲ್ಲ. ದೂರು ನೀಡಿದ್ದರೂ ಅವರ ವಿರುದ್ಧ ಆಡಳಿತ ವರ್ಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
ಸುರೇಶ್ ಪ್ರಭು ಅವರಿಗೆ ಎರಡು ಪುಟಗಳ ಸುದೀರ್ಘ ಪತ್ರ ಬರೆದಿರುವ ಅಧಿಕಾರಿ, ಬ್ರಿಟಿಷ್ ಏರ್ವೇಸ್ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಧಿಕಾರಿಯು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕ್ರಮ ಕೈಗೊಳ್ಳುವ ಭರವಸೆ
ಇಂತಹ ಆರೋಪಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಯಾವುದೇ ರೀತಿಯ ತಾರತಮ್ಯವನ್ನು ಸಹಿಸುವುದಿಲ್ಲ. ಪೂರ್ಣ ಪ್ರಮಾಣದ ತನಿಖೆಯನ್ನು ಆರಂಭಿಸಿದ್ದು, ಗ್ರಾಹಕರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಬ್ರಿಟಿಷ್ ಏರ್ವೇಸ್ ವಕ್ತಾರರು ತಿಳಿಸಿದ್ದಾರೆ.
|
ನಾವು ಪ್ರಯಾಣಿಸಬೇಕೇ?
ಬ್ರಿಟಿಷ್ ಏರ್ವೇಸ್ನ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವಿಮಾನ ಸಂಸ್ಥೆಯನ್ನು ಭಾರತದಿಂದ ಹೊರಕ್ಕೆ ಹಾಕುವಂತೆ ಒತ್ತಾಯಿಸಿದ್ದಾರೆ. 'ನಾನು ಬೇಸಲ್ನಿಂದ ಲಂಡನ್ಗೆ ಇಂದು ರಾತ್ರಿ ಹೋಗಬೇಕಿದೆ. ಆದರೆ, ಭಾರತೀಯನಾಗಿರುವ ಕಾರಣಕ್ಕೆ ನನಗೆ ನೀಡಲಾಗುವ ಆತಿಥ್ಯದ ಬಗ್ಗೆ ಚಿಂತಿಸಬೇಕೇ? ಎಂದು ವಿಕ್ರಮ್ ರವೀಂದ್ರನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಸಚಿನ್ ಪೂರ್ಣ ಹೆಸರು ಕೇಳಿದ್ದ ಸಂಸ್ಥೆ!
ಬ್ರಿಟಿಷ್ ಏರ್ವೇಸ್ ಇಂತಹ ಯಡವಟ್ಟುಗಳನ್ನು ಮಾಡಿರುವುದು ಇದೇ ಮೊದಲೇನಲ್ಲ.
ಸೀಟು ಖಾಲಿ ಇದ್ದರೂ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ಬ್ರಿಟಿಷ್ ಏರ್ವೇಸ್ ನಿರಾಕರಿಸಿತ್ತು. ಅಲ್ಲದೆ, ತಮ್ಮ ಲಗೇಜ್ಅನ್ನು ಬೇರೆ ಸ್ಥಳಕ್ಕೆ ತಲುಪಿಸಿದ್ದರು. ಇನ್ನೆಂದೂ ಆ ವಿಮಾನ ಹತ್ತುವುದಿಲ್ಲ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ಟ್ವೀಟ್ ಮಾಡಿದ್ದರು.ಲಗೇಜ್ ಮರಳಿಸಲು ತಮ್ಮ ಪೂರ್ಣ ಹೆಸರು, ವಿಳಾಸದ ಮಾಹಿತಿ ನಿಡುವಂತೆ ಬ್ರಿಟಿಷ್ ಏರ್ವೇಸ್ ಮರು ಟ್ವೀಟ್ ಮಾಡಿದ್ದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
|
ಕುಂಬ್ಳೆಗೂ ಅದೇ ಅನುಭವ
ಎರಡು ವರ್ಷದ ಹಿಂದೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರ ಕಿಟ್ಅನ್ನು ಬ್ರಿಟಿಷ್ ಏರ್ವೇಸ್ ಲಂಡನ್ನಿಂದ ಭಾರತಕ್ಕೆ ತಲುಪಿಸದೆಯೇ ಪ್ರಮಾದ ಎಸಗಿತ್ತು.
ಇದಕ್ಕೆ ಕುಂಬ್ಳೆ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಏರ್ವೇಸ್, ಕ್ರಿಕೆಟ್ ಭಾಷೆಯಲ್ಲಿಯೇ ಉತ್ತರ ನೀಡಿತ್ತು. ನಿಮ್ಮ ಕಿಟ್ ಅನ್ನು ಯಶಸ್ವಿಯಾಗಿ 'ಡೆಲಿವರಿ' ಮಾಡಲಾಗಿದೆ ಎಂದು ಅದು ತಮಾಷೆಯಾಗಿ ಟ್ವೀಟ್ ಮಾಡಿತ್ತು.