ಜೀವ ಉಳಿಸಿದ ಸೈನಿಕರಿಗೆ ಕಣ್ಣೀರಿಟ್ಟು ಧನ್ಯವಾದ ಸಲ್ಲಿಸಿದ ಮಹಿಳೆ
ನಾಥು ಲಾ ಪಾಸ್, ಜನವರಿ 5: ಇಡೀ ದೇಶ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹದಲ್ಲಿದ್ದರೆ, ಅತ್ತ ಸಾವಿರಾರು ಮಂದಿ ಸಾವಿನ ದವಡೆಯಿಂದ ಬಚಾವಾಗಲು ಪ್ರಾರ್ಥಿಸುತ್ತಿದ್ದರು. ಅವರ ಸಂಖ್ಯೆ ಒಂದಲ್ಲ, ಎರಡಲ್ಲ, ಮೂರು ಸಾವಿರಕ್ಕೂ ಹೆಚ್ಚು.
ಕಡಿದಾದ ದುರ್ಗಮ ಹಾದಿ, ಇನ್ನೊಂದೆಡೆ ವಿಪರೀತ ಹಿಮಪಾತ. ಜೀವ ಉಳಿಸಿಕೊಳ್ಳುವುದು ಎತ್ತಹೋಗುವುದು, ಏನು ಮಾಡುವುದು ಎಂದು ತಿಳಿಯದ ಪರಿಸ್ಥಿತಿ. ಹೀಗೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪರದಾಡುತ್ತಿದ್ದ ಪ್ರವಾಸಿಗರನ್ನು ತಮ್ಮ ಜೀವ ಒತ್ತೆ ಇಟ್ಟು ರಕ್ಷಿಸಿದ್ದು ಭಾರತೀಯ ಸೇನೆ.
ಸಿಕ್ಕಿಂನ ಪ್ರವಾಸಿ ತಾಣ ನಾಥು ಲಾ ಪಾಸ್ ಮತ್ತು ಅದರ ಸಮೀಪದ ಚಾಂಗು ಸರೋವರದ ಸಮೀಪ ಡಿ.28ರಂದು ವಿಪರೀತ ಹಿಮಪಾತವಾಗಿತ್ತು. ನಾಥು ಲಾ ಪಾಸ್, ಭಾರತದಿಂದ ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಸಂಪರ್ಕಿಸುವ ಜಾಗ. ಇಲ್ಲಿ ಸುಮಾರು 3 ಸಾವಿರ ಜನರು ಹಿಮಪಾತದಲ್ಲಿ ಸಿಲುಕಿ ಕಂಗಾಲಾಗಿದ್ದರು.
ಪೆಲೆಟ್ ಬುಲೆಟ್ ಬದಲು ಪ್ಲಾಸ್ಟಿಕ್ ಬುಲೆಟ್: ಡಿಆರ್ ಡಿಒ ಸಂಶೋಧನೆ
ಈ ಪ್ರವಾಸಿಗರು ಸಿಕ್ಕಿಂನ ಭಾರತ-ಚೀನಾ ಗಡಿ ಭಾಗಕ್ಕೆ ಭೇಟಿ ನೀಡಿ ಮರಳುತ್ತಿದ್ದರು. ನಾಥು ಲಾ ಪಾಸ್ ಮತ್ತು ಚಾಂಗುಗೆ ಶುಕ್ರವಾರ ಸಂಜೆ ತಲುಪಿದ್ದರು. ಆಗ ಇಡೀ ಪ್ರದೇಶದಲ್ಲಿ ಭಾರಿ ಹಿಮಪಾತ ಆರಂಭವಾಗಿ ರಸ್ತೆಗಳು ಮುಚ್ಚಿಹೋದವು. ಜವಹರಲಾಲ್ ನೆಹರೂ ರಸ್ತೆಯಲ್ಲಿ ಒಂದೊಂದು ಪ್ರದೇಶದಲ್ಲಿ 300ಕ್ಕೂ ಹೆಚ್ಚು ಪ್ರವಾಸಿಗರ ಗುಂಪುಗಳು ಸಿಲುಕಿಕೊಂಡಿದ್ದವು.
ಪರದಾಡಿದ ಮಕ್ಕಳು-ಮಹಿಳೆಯರು
ಪ್ರವಾಸಿಗರ ಜೊತೆಗೆ ಸ್ಥಳೀಯ ನಿವಾಸಿಗಳದ್ದೂ ಸೇರಿದ ಅಂದಾಜು 300-400 ವಾಹನಗಳು ಕೂಡ ಹಿಮಾವೃತ ರಸ್ತೆಯಲ್ಲಿ ಸಿಲುಕಿಕೊಂಡಿದ್ದವು. ಆ ಜನರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಪಾಡು ಹೇಳತೀರದು.
ನೆರವಿಗೆ ಧಾವಿಸಿದ ಸೇನಾಪಡೆ
ಅಲ್ಲಿಂದ ಹೊರಕ್ಕೆ ಬರಲಾಗದೆ, ಅಲ್ಲಿಯೂ ಇರಲು ಸಾಧ್ಯವಾಗದೆ ಪರದಾಡುತ್ತಿದ್ದ ಅವರಿಗೆ ದೇವರ ರೂಪದಲ್ಲಿ ಸಹಾಯಕ್ಕೆ ಧಾವಿಸಿದ್ದು ಭಾರತೀಯ ಸೇನೆ. ಆ ದುರ್ಗಮ ಪ್ರದೇಶದಿಂದ, ಕಠಿಣ ಪರಿಸ್ಥಿತಿಯಲ್ಲಿಯೂ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆದುಕೊಂಡು ಬಂದ ಸೇನೆಯ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಧೈರ್ಯಶಾಲಿ ಸೈನಿಕರ ಸಾಹಸಗಾಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲಾಗುತ್ತಿದೆ.
ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ
Array |
ವೈರಲ್ ಆಯ್ತು ವಿಡಿಯೋ
ಮಹಿಳಾ ಪ್ರವಾಸಿಗರೊಬ್ಬರು ಕಣ್ಣಾಲಿಗಳನ್ನು ತುಂಬಿಕೊಂಡು ಸೈನಿಕರಿಗೆ ಕೃತಜ್ಞತೆ ಹೇಳುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇಂದು ತಾವು ಮತ್ತು ಇತರೆ ಪ್ರವಾಸಿಗರು ಜೀವಂತ ಇರುವುದಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಹೇಳುವಾಗ ಆ ಮಹಿಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
'ಸೇನೆ ಏನು ಮಾಡುತ್ತದೆ ಎಂದು ನಾವು ಹಲವು ಬಾರಿ ಪ್ರಶ್ನಿಸುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದನ್ನು ನಾನು ಇಂದು ನೋಡಿದೆ' ಎನ್ನುತ್ತಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ವಿಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ. ಜೀವ ಉಳಿಸಲು ಸಾಹಸ ಮೆರೆದ ಸೇನಾ ಸಿಬ್ಬಂದಿಗೆ ಟ್ವಿಟ್ಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ
|
ಎಲ್ಲರನ್ನೂ ರಕ್ಷಿಸಿದ ಸೇನೆ
ಮೈನಡುಗಿಸುವ ಚಳಿಯಿಂದ ಪ್ರವಾಸಿಗರನ್ನು ರಕ್ಷಿಸಿದ ಬಳಿಕ ಸೈನಿಕರು ಎಲ್ಲರಿಗೂ ಬೆಚ್ಚನೆಯ ಉಡುಪನ್ನು ನೀಡಿದ್ದಲ್ಲದೆ, 17 ಮೈಲು ದೂರದ ಸೇನಾ ಶಿಬಿರಗಳಲ್ಲಿ ಆಶ್ರಯ ಕೊಟ್ಟಿದ್ದಾರೆ. ರಸ್ತೆಯಲ್ಲಿ ತುಂಬಿಕೊಂಡಿದ್ದ ಹಿಮವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅವರೆಲ್ಲರಿಗೂ ಊಟ, ಔಷಧ ನೀಡಲಾಗಿದೆ. ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಸೇನೆ ಟ್ವೀಟ್ ಮಾಡಿದೆ.
|
ದೇವರ ಬಳಿಕ ನೀವೇ!
ಸೇನಾ ಶಿಬಿರದಲ್ಲಿ ಆಸರೆ ಪಡೆದು ಚೇತರಿಸಿಕೊಂಡ ಪ್ರವಾಸಿಗರು, ಜೀವ ಉಳಿಸಿದ ಸೈನಿಕರ ಸಾಹಸಕ್ಕೆ ತಲೆಬಾಗಿದ್ದಾರೆ. ಸೇನಾ ಶಿಬಿರದ ಗೋಡೆಯ ಮೇಲೆ ತಮ್ಮ ಕೃತಜ್ಞತೆಗಳನ್ನು ಬರೆದಿದ್ದಾರೆ. 'ದೇವರ ಬಳಿಕ ಇರುವುದು ನೀವು ಮಾತ್ರ! ಭಾರತೀಯ ಸೇನೆ' ಎಂಬಂತಹ ಬರಹಗಳು ಮನಕಲಕುವಂತಿವೆ.