ಸೇನೆಗೆ ಸೆಲ್ಯೂಟ್ ಹೊಡೆದ ಕಾಶ್ಮೀರ ಪ್ರವಾಹ ಪೀಡಿತರು
ಎಲ್ಲಿ ನೋಡಿದರಲ್ಲಿ ನೀರು, ಪ್ರಕೃತಿಯ ಅಟ್ಟಹಾಸಕ್ಕೆ ನಾವು ಯಾರು ಹುಲು ಮಾನವ ಎಂದು ಕೈಕಟ್ಟಿ ಕುಳಿತಿದ್ದ ಪ್ರವಾಹ ಪೀಡಿತರು, ಮೊಘಲರ ಕಾಲದ ಭಗ್ನಾವಶೇಷದಂತಿತ್ತು ಸೇತುವೆಗಳು, ದೇವಾಲಯಗಳು. ಇದರ ನಡುವೆ ಸಂತ್ರಸ್ತರನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ನಮ್ಮ ಹೆಮ್ಮೆಯ ಯೋಧರು.
ಕಳೆದ ಆರು ದಿನಗಳಿಂದ ನಿದ್ರಾಹಾರವಿಲ್ಲದೇ ಕಂಗೆಟ್ಟು ಸೇನೆಯ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಜನರ ನಡುವೆ, ಮೊದಲು ನಮ್ಮನ್ನು ಸುರಕ್ಷಿಸಿ ಎಂದು ಒಮರ್ ಅಬ್ದುಲ್ಲಾ ಆಡಳಿತದ ವಿರುದ್ದ ಧಿಕ್ಕಾರ ಕೂಗುತ್ತಿರುವ ಹತಾಶ ಸ್ಥಳೀಯರು. (ಕಣಿವೆ ರಾಜ್ಯದಲ್ಲಿ ಭೂ ಕುಸಿತ, ಪ್ರವಾಹಕ್ಕೆ ಜನ ಬಲಿ)
ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್ ಎನ್ನುವ ಹತ್ತು ಹಲವಾರು ಕುಟುಂಬವನ್ನೂ ಸೇನಾಪಡೆಯವರು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ, ಸೇರಿಸುತ್ತಿದ್ದಾರೆ. ಹೆಲಿಕಾಫ್ಟರ್ ಮೂಲಕ ಆಹಾರ ವಿತರಿಸಿದ್ದಾರೆ. ಸೇನಾಪಡೆಗಳು ಇಂತಹ ಪ್ರತ್ಯೇಕವಾದಿಗಳನ್ನು 'ಪ್ರತ್ಯೇಕ'ವಾಗಿ ಪರಿಗಣಿಸದೇ ಮಾನವೀಯತೆ ಮೆರೆಯುತ್ತಿದ್ದಾರೆ.
ಇದರ ನಡುವೆ ನೆರೆಯ ಪಾಕಿಸ್ತಾನ ತನ್ನ ತಂಟೆಯನ್ನು ಮುಂದುವರಿಸಿದೆ. ಕಾಶ್ಮೀರದ ಪ್ರವಾಹ ಪೀಡಿತರ ಪರಿಹಾರದ ವಿಚಾರದಲ್ಲಿ ಭಾರತೀಯ ಯೋಧರು ತಾರತಮ್ಯ ಮಾಡುತ್ತಿದ್ದಾರೆ, ಪಾಕಿಸ್ತಾನವನ್ನು ಬೆಂಬಲಿಸುವ ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಲಾಗುತ್ತದೆ ಎಂದು ತನ್ನ ಆಕಾಶವಾಣಿಯ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ.
ಝೀಲಂ ನದಿಯ ಪ್ರವಾಹದ ರುದ್ರ ನರ್ತನದಲ್ಲಿ ಸಿಲುಕಿ, ಹಾಗೂ ಹೀಗೂ ಸುರಕ್ಷಿತವಾಗಿ ಗೂಡು ಸೇರಿದವರಲ್ಲಿ ಮಧುಚಂದ್ರಕ್ಕೆಂದು ಹೋದವರೂ ಇದ್ದಾರೆ, ವೈಷ್ಣೋದೇವಿಯ ದರ್ಶನಕ್ಕೆಂದು ಹೋದವರೂ ಇದ್ದಾರೆ, ಪಾಕಿಸ್ತಾನ ಜಿಂದಾಬಾದ್ ಎಂದವರೂ ಇದ್ದಾರೆ.
ಯೋಧರೇ ನಿಮಗೊಂದು ಸಲಾಂ., ಮುಂದೆ ಓದಿ..
ಪ್ರಾಣವನ್ನು ಮುಡಿಪಾಗಿಟ್ಟು ಕಾಪಾಡಿದ ಯೋಧರು
ಆದರೂ ಕೆಲವು ಅಪವಾದದ ನಡುವೆ ಭಾರತೀಯ ಸೇನೆಯ ಜವಾನರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು, ನೆರೆ ಪೀಡಿತರನ್ನು ರಕ್ಷಿಸಿದ ಪರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದವರು ಜಾತ್ಯಾತೀತವಾಗಿ 'ಯೋಧರೇ ನಿಮಗೊಂದು ಸಲಾಂ, ವಿ ಆರ್ ಪ್ರೌಡ್ ಆಫ್ ಯು' ಎಂದು ಆನಂದಭಾಸ್ಪ ಹರಿಸಿದ್ದಾರೆ. (ಚಿತ್ರ:ಪಿಟಿಐ)
ಇಪ್ಪತ್ತು ಜನರ ತಂಡದ ಅನಿಸಿಕೆ
ಗೆಳೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ಬಂದಿದ್ದ ಇಪ್ಪತ್ತು ಜನರ ತಂಡ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ತಾವು ಉಳಿದುಕೊಂಡಿದ್ದ ಲಾಡ್ಜಿನ ಕೆಳಗೆ ಸುಮಾರು ಒಂಬತ್ತು ಅಡಿ ನೀರು ತುಂಬಿತ್ತು. ಸೇನೆಯ ಯೋಧರು ದೋಣಿಯ ಮೂಲಕ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಬಹಳಷ್ಟು ಯೋಧರಿಗೂ ಆಹಾರವಿಲ್ಲದೇ ಅವರೂ ನಿತ್ರಾಣವಾಗಿದ್ದರು. ಆದರೂ ಅವರು ತಮ್ಮನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತದೆ. (ಚಿತ್ರ:ಪಿಟಿಐ)
ಸಿಎಂ ಕಚೇರಿಗೆ ಮುತ್ತಿಗೆ ಹಾಕಿದ್ದ ಸ್ಥಳೀಯರು
ಪರಿಹಾರ ಕಾರ್ಯದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸ್ಥಳೀಯರು ಸಿಎಂ ಕಚೇರಿ ಮುತ್ತಿಗೆ ಹಾಕಿದ್ದರು. ಆ ಸಮಯದಲ್ಲಿ ಹಾದು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದರು. ಹೇಗೂ ಅವರಿಂದ ಪಾರಾಗಿ ವಾಯುನೆಲೆಗೆ ಬಂದೆವು. ರಾಜ್ಯ ಮೂಲದ ಕಮಾಂಡರ್ ಸಹಾಯದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದೆವು. ಸೇನೆಯ ಈ ನೆರವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಮತ್ತೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. (ಚಿತ್ರ:ಪಿಟಿಐ)
ಪಾಕಿಸ್ತಾನದ ಗಾಲ್ಫ್ ಆಟಗಾರರು
ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಪಾಕಿಸ್ತಾನದ ಗಾಲ್ಫ್ ಆಟಗಾರರನ್ನೂ ಭಾರತೀಯ ಸೇನೆ ಸುರಕ್ಷಿತವಾಗಿ ದಡ ಸೇರಿಸಿದೆ. ತಮ್ಮ ಅನಿಸಿಕೆಗಳನ್ನು ಮತ್ತು ಭಾರತೀಯ ಸೇನೆಯ ಕಮಿಟ್ಮೆಂಟುಗಳನ್ನು ಪಾಕ್ ಮಾಧ್ಯಮದ ಮುಂದೆ ಈ ಆಟಗಾರರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. (ಚಿತ್ರ:ಪಿಟಿಐ)
ಪ್ರತ್ಯೇಕವಾದಿಗಳು ಮತ್ತು ಭಾರತೀಯ ಯೋಧರು
ಭಾರತೀಯ ಯೋಧರ ರಕ್ಷಣೆ ಮತ್ತು ಪರಿಹಾರ ಕೆಲಸಗಳು ಪ್ರತ್ಯೇಕವಾದಿಗಳ ಮನಸ್ಸು ಬದಲಿಸಿದಂತೆ ಕಾಣುತ್ತಿದೆ. ಯೋಧರು ಕಾಶ್ಮೀರಿಗಳ ರಕ್ಷಕರು ಎನ್ನುವ ಭಾವನೆ ಮೂಡಲಾರಂಭಿಸಿದೆ. ತಮ್ಮನ್ನು ರಕ್ಷಿಸುವಂತೆ ಯೋಧರನ್ನು ಬೇಡಿಕೊಳ್ಳುತ್ತಿದ್ದಾರೆ. (ಚಿತ್ರ:ಪಿಟಿಐ)
ಯೋಧರಿಂದಾಗಿ ಸುರಕ್ಷಿತವಾಗಿ ಗೂಡು ಸೇರಿದ್ದೇವೆ
ಶ್ರೀನಗರದ ಜವಹರ್ ರಸ್ತೆಯಲ್ಲಿ ತಂಗಿದ್ದ ಬೆಂಗಳೂರಿನ ಎರಡು ಕುಟುಂಬದ ಸದಸ್ಯರೂ ಸುರಕ್ಷಿತವಾಗಿ ನಗರಕ್ಕೆ ಬಂದ ನಂತರ, ಸೇನೆಯ ರಕ್ಷಣಾ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. (ಚಿತ್ರ:ಪಿಟಿಐ)