ಆಪರೇಷನ್ ಹರ್ಕೂಲಸ್: ಗಡಿಯಲ್ಲಿ ಭಾರತೀಯ ಭೂಸೇನೆ, ವಾಯುಸೇನೆ ಸಮರಾಭ್ಯಾಸ
ನವದೆಹಲಿ, ನವೆಂಬರ್ 18: ಭಾರತ ಮತ್ತು ಚೀನಾದ ಗಡಿ ಪ್ರದೇಶ ಬಿಕ್ಕಟ್ಟಿನ ನಡುವೆ ಭಾರತೀಯ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಮರಾಭ್ಯಾಸ ನಡೆಸಲಾಗುತ್ತಿದೆ. ಭಾರತೀಯ ಭೂ ಸೇನೆ ಮತ್ತು ಭಾರತೀಯ ವಾಯು ಸೇನಾ ಪಡೆಗಳು ನಡೆಸಿದ ಸಮರಾಭ್ಯಾಸಕ್ಕೆ "ಆಪರೇಷನ್ ಹರ್ಕೂಲಸ್" ಎಂದು ಕರೆಯಲಾಗಿದೆ.
ದೇಶದ ಉತ್ತರ ವಲಯದಲ್ಲಿ ಭಾರತೀಯ ಸೇನೆ ಮತ್ತು ಸೇನೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಹಾಗೂ ಸಾಮಾನು ಸರಂಜಾಮುಗಳನ್ನು ಸ್ಥಳಾಂತರಿಸುವ ಮತ್ತು ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಬುಧವಾರ ಪ್ರಮುಖ ಸಮರಾಭ್ಯಾಸ ನಡೆಸಿತು.
ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?
"ಈ ಪ್ರಯತ್ನವು ಭಾರತೀಯ ವಾಯುಪಡೆಯ ಅಂತರ್ಗತ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯದ ನೈಜ-ಸಮಯದ ಪ್ರದರ್ಶನವಾಗಿದೆ. ಇದು ಯಾವುದೇ ಅನಿಶ್ಚಿತತೆಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ," ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚಳಿಗಾಲದಲ್ಲಿ ಅಗತ್ಯ ಪಡಿತರ ಪೂರೈಕೆಯ ಅವಶ್ಯಕತೆ:
ವೆಸ್ಟರ್ನ್ ಏರ್ ಕಮಾಂಡ್ನ ಫಾರ್ವರ್ಡ್ ಬೇಸ್ಗಳಲ್ಲಿ C-17, IL-76 ಮತ್ತು An-32 ವಿಮಾನಗಳನ್ನು ಏರ್ಲಿಫ್ಟ್ಗಾಗಿ ಬಳಸಲಾಗಿದೆ. ಚಳಿಗಾಲದ ವೇಳೆಯಲ್ಲಿ ಕಾರ್ಯಾಚರಣೆ ಪ್ರದೇಶಗಳಲ್ಲಿ ಹೆಚ್ಚಿನ ಶಸ್ತ್ರಾಸ್ತ್ರ ಹಾಗೂ ಸರಕುಗಳನ್ನು ಸಂಗ್ರಹಿಸುವುದು ಅಗತ್ಯವಾಗಿದೆ. ಮುಂದಿನ ನಾಲ್ಕರಿಂದ ಐದು ತಿಂಗಳಿನಲ್ಲಿ ಸೇನಾ ಪ್ರಮಾಣವನ್ನು ಕೆಲವು ಪ್ರದೇಶಗಳಲ್ಲಿ ತಗ್ಗಿಸಲಾಗುತ್ತದೆ. ಇಂಥ ಸಮಯದಲ್ಲಿ ಕಾರ್ಯಾಚರಣೆಯಲ್ಲಿ ಮುಂದುವರಿಯುವ ಯೋಧರಿಗೆ ಪಡಿತರ ಮತ್ತು ಅಗತ್ಯ ಸಂಪನ್ಮೂಲವನ್ನು ಒದಗಿಸಬೇಕಾಗುತ್ತದೆ.
ಚೀನಾದೊಂದಿಗೆ ಬಿಕ್ಕಟ್ಟು:
ಭಾರತ ಮತ್ತು ಚೀನಾದ ಕಡೆಯಿಂದ ಸುಮಾರು 60,000 ಯೋಧರನ್ನು ನಿಯೋಜಿಸುವುದರೊಂದಿಗೆ ಮೇ 2020 ರಿಂದ ಪೂರ್ವ ಲಡಾಖ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಚೀನಾದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಭಾರತೀಯ ಸೇನೆ ಮತ್ತು ವಾಯು ಸೇನೆಗಳು ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಇದೇ ಪ್ರದೇಶದಲ್ಲಿ ಟ್ಯಾಂಕ್ಗಳು, ಫಿರಂಗಿಗಳು, ಕ್ಷಿಪಣಿಗಳು ಮತ್ತು ಭಾರೀ ಉಪಕರಣಗಳನ್ನು ಸಂಗ್ರಹಿಸಿ ಇರಿಸಲಾಗಿದೆ.13ನೇ ಸುತ್ತಿನ ಕಾರ್ಪ್ ಕಮಾಂಡರ್ ಸಭೆ:
ಕಳೆದ ಅಕ್ಟೋಬರ್ನಲ್ಲಿ ಎರಡು ಮಿಲಿಟರಿಗಳ ಕಾರ್ಪ್ಸ್ ಕಮಾಂಡರ್ಗಳು ತಮ್ಮ 13 ನೇ ಸುತ್ತಿನ ಮಾತುಕತೆಗಳನ್ನು ನಡೆಸಿದರು. ಆದರೆ ಎರಡು ದೇಶಗಳ ಸೇನಾ ಕಮಾಂಡರ್ ಸಭೆಯು ಅನಿರ್ದಿಷ್ಟವಾಗಿ ಅಂತ್ಯಗೊಂಡಿತು. ಹೀಗಾಗಿ ನಿಯೋಜನೆಗಳು ಮುಂದುವರಿಯುತ್ತದೆ ಎಂಬುದು ಸ್ಪಷ್ಟವಾಯಿತು.
ಚೀನಾದೊಂದಿಗೆ ಮತ್ತೆ ಕಾರ್ಪ್ಸ್ ಕಮಾಂಡರ್ ಸಭೆ:
ಇದರ ಮಧ್ಯ ಮತ್ತೊಂದು ಬೆಳವಣಿಗೆಯಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೆಂಗುಪ್ತಾ ಈ ತಿಂಗಳ ಅಂತ್ಯದ ವೇಳೆಗೆ ಲೇಹ್ ಮೂಲದ ಹೊಸ ಕಾರ್ಪ್ಸ್ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದ ಉಳಿದ ಸಮಸ್ಯೆಗಳನ್ನು ಚರ್ಚಿಸಲು ಲೆಫ್ಟಿನೆಂಟ್ ಜನರಲ್ ಸೆಂಗುಪ್ತಾ ಶೀಘ್ರದಲ್ಲೇ ಚೀನಾದೊಂದಿಗೆ ಕಾರ್ಪ್ಸ್ ಕಮಾಂಡರ್ಸ್ ಮಾತುಕತೆಗಳನ್ನು ನಡೆಸಲಿದ್ದಾರೆ.
ಭಾರತೀಯ ಸೇನೆಗಾಗಿ ಗಡಿಯಲ್ಲಿ ರಸ್ತೆ ನಿರ್ಮಾಣ:
ಭಾರತ-ಚೀನಾದ ಟಿಬೆಟ್ ಗಡಿಯಲ್ಲಿ ಒಂದು ಕಡೆ ಚೀನಾ ತನ್ನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ. ಇದರ ಮಧ್ಯೆ ಚೀನಾವನ್ನು ಎದುರಿಸಲು ಅಗತ್ಯವಿರುವ ವ್ಯವಸ್ಥೆಯನ್ನು ಭಾರತೀಯ ಸೇನೆಗೆ ಒದಗಿಸಬೇಕಿದೆ. ಭಾರತೀಯ ಸೇನೆಯು ಟ್ಯಾಂಕರ್, ಭಾರಿ ಫಿರಂಗಿ, ಸೇನೆ ಮತ್ತು ಯಂತ್ರೋಪಕರಣಗಳನ್ನು ಗಡಿ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. 1962ರಲ್ಲಿ ಚೀನಾದ ಗಡಿಯವರೆಗೂ ಕಾಲ್ನಡಿಗೆಯಲ್ಲೇ ಸಾಗಿ ಪಡಿತರವನ್ನು ಸರಬರಾಜು ಮಾಡುವಂತಾ ಪರಿಸ್ಥಿತಿಯನ್ನು ಎದುರಿಸಲಾಗಿತ್ತು. ಇಂದು ರಸ್ತೆಯು ದ್ವಿಪಥವಾಗದಿದ್ದರೆ ಅಲ್ಲಿ ರಸ್ತೆಯನ್ನು ಹೊಂದಿರುವ ಉದ್ದೇಶವೇ ವ್ಯರ್ಥವಾಗುತ್ತದೆ. ಆದ್ದರಿಂದ ಡಬಲ್ ಲೇನಿಂಗ್ ಅನ್ನು 7 ಮೀಟರ್ ಅಗಲದ ರಸ್ತೆಗೆ ಅನುಮತಿ ನೀಡಬೇಕು," ಎಂದು ಕೇಂದ್ರ ಸರ್ಕಾರದ ಪರವಾಗಿ ಈಗಾಗಲೇ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿದ್ದಾರೆ.