ಬಾಲಕೋಟ್ ದಾಳಿಯ 'ರಹಸ್ಯ' ಬಹಿರಂಗಪಡಿಸಿದ ವಾಯುಪಡೆ
ನವದೆಹಲಿ, ಜೂನ್ 21: ಪುಲ್ವಾಮಾ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಶ್ ಎ ಮೊಹಮ್ಮದ್ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಯನ್ನು ಗೋಪ್ಯವಾಗಿರಿಸಲು ಭಾರತೀಯ ವಾಯುಪಡೆ (ಐಎಎಫ್) ಕೋಡ್ ವರ್ಡ್ಅನ್ನು ಬಳಸಿಕೊಂಡಿತ್ತು.
ಫೆಬ್ರವರಿ 26ರಂದು ಬಾಲಕೋಟ್ನ ಉಗ್ರರ ನೆಲೆ ಮೇಲೆ 12 ಮಿರಾಜ್ 2000 ಯುದ್ಧವಿಮಾನಗಳು ದಾಳಿ ನಡೆಸುವ ಸಂದರ್ಭದಲ್ಲಿ 'ಆಪರೇಷನ್ ಬಂದರ್ (ಕೋತಿ)' ಎಂಬ ರಹಸ್ಯ ಕೋಡ್ ಅನ್ನು ಬಳಸಲಾಗಿತ್ತು.
ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ
'ಗೋಪ್ಯತೆಯನ್ನು ಕಾಪಾಡುವ ಸಲುವಾಗಿ ಮತ್ತು ನಮ್ಮ ಯೋಜನೆ ಸೋರಿಕೆಯಾಗದಂತೆ ಖಚಿತಪಡಿಸಿಕೊಳ್ಳಲು ಬಾಲಕೋಟ್ ಕಾರ್ಯಾಚರಣೆಗೆ 'ಆಪರೇಷನ್ ಬಂದರ್' ಎಂಬ ಕೋಡ್ ನೇಮ್ ನೀಡಲಾಗಿತ್ತು' ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ವಾನರದ ಹೆಸರು ಇಡಲು ನಿರ್ದಿಷ್ಟ ಕಾರಣವೂ ಇತ್ತು. ಭಾರತದ ಯುದ್ಧ ಸಂಸ್ಕೃತಿಯಲ್ಲಿ ಕಪಿ ಸೈನ್ಯ ವಿಶೇಷ ಸ್ಥಾನ ಹೊಂದಿದೆ. ಇದನ್ನು ಮಹಾಕಾವ್ಯ ರಾಮಾಯಣದಲ್ಲಿ ಕಂಡಿದ್ದೇವೆ. ರಾಮನ ಬಂಟ ಹನುಮ ಲಂಕೆಗೆ ಜಿಗಿದು ಅಸುರನ ಕೋಟೆಯನ್ನು ನಾಶಪಡಿಸಿದ್ದ. ಅದೇ ರೀತಿ ಈ ಕಾರ್ಯಾಚರಣೆಯನ್ನು ನಡೆಸುವುದು ವಾಯುಸೇನೆಯ ಉದ್ದೇಶವಾಗಿತ್ತು.