ಇನ್ನು 12 ವರ್ಷವಷ್ಟೇ; ಆಮೇಲೆ ದೇಶದಲ್ಲಿ ನೀರೇ ಸಿಗೊಲ್ಲ!
ಮುಂಗಾರು ಅಧಿಕೃತವಾಗಿ ಕಾಲಿಡುವುದಕ್ಕೂ ಮುನ್ನ ಚಂಡಮಾರುತ ದೇಶದ ಅನೇಕ ಭಾಗಗಳಲ್ಲಿ ಭರ್ಜರಿ ಮಳೆಸುರಿಸಿದೆ. ಇನ್ನು ಮುಂಗಾರಿನ ಮಾರುತಗಳು ಹೊತ್ತು ತಂದ ಮಳೆ ಎಲ್ಲೆಡೆ ಧಾರಾಕಾರವಾಗಿ ಸುರಿದಿದೆ. ಕರಾವಳಿ, ಮಲೆನಾಡಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮುಂಗಾರು ಕಾಲಿಟ್ಟ ಹದಿನೈದು ದಿನದಲ್ಲಿಯೇ ಭೂಮಿಯ ಒಡಲಿನಿಂದ ಜಲದ ಕಣ್ಣು ತೆರೆದುಕೊಂಡಿದೆ. ಇಲ್ಲಿಯವರೆಗೂ ಚೆನ್ನಾಗಿ ಮಳೆಯಾಗಿದೆ. ಅಂತರ್ಜಲವೂ ಸ್ವಲ್ಪ ಏರಿಕೆಯಾಗಿದೆ. ಇನ್ನು ಇದೇ ರೀತಿ ಮಳೆರಾಯ ಕೃಪೆ ತೋರಿದರೆ ಬೇಸಿಗೆ ಕಳೆಯುವವರೆಗೂ ನೀರಿಗೆ ಬವಣ ಬರಲಾರದು.
ನೀರಿನ ನಿರ್ವಹಣೆ ಸೂಚ್ಯಂಕ: ಕರ್ನಾಟಕಕ್ಕೆ 4ನೇ ಶ್ರೇಯಾಂಕ
ಹಾಗಾದರೆ ಇನ್ನೇನು ಬೇಕು. ಎಲ್ಲ ಕೆರೆ ಕಟ್ಟೆಗಳೆಲ್ಲ ತುಂಬಿ ನೀರಿನ ಸಮಸ್ಯೆ ಇಲ್ಲವಾಗುತ್ತದೆಯೇ? ಸಾಧ್ಯವೇ ಇಲ್ಲ.
ಸುರಿದ ಮಳೆ ಇನ್ನೂ ಭೂಮಿಯ ಮೇಲ್ಭಾಗವನ್ನು ತಂಪಾಗಿಸಿದೆಯಷ್ಟೇ. ಅಂತರ್ಜಲ ವೃದ್ಧಿಸಬೇಕೆಂದರೆ ಮಳೆ ನೀರು ಭೂಮಿಯ ಆಳಕ್ಕೆ ಇಂಗುವವರೆಗೂ ನಿರಂತರವಾಗಿ ಮಳೆ ಸುರಿಯಬೇಕು. ಆಗಮಾತ್ರ ನಮ್ಮ ಹಳ್ಳಿ ಪಟ್ಟಣ ಮತ್ತು ನಗರಗಳು ಎದುರಿಸುತ್ತಿರುವ ನೀರಿನ ಬವಣೆ ತಗ್ಗಬಹುದು.
ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು
ಆದರೆ, ನೀತಿ ಆಯೋಗ ಬೆಚ್ಚಿಬೀಳಿಸುವ ವರದಿ ನೀಡಿದೆ. ನಾವು ನೀರಿನ ಸದ್ಬಳಕೆಯ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಮನಸೋಇಚ್ಛೆ ಪೋಲು ಮಾಡುತ್ತಿದ್ದರೆ ಮುಂದೆ ಹನಿ ನೀರೂ ದಕ್ಕುವುದು ಕಷ್ಟವಾಗುತ್ತದೆ ಎಂದು ನೀತಿ ಆಯೋಗ ಎಚ್ಚರಿಕೆ ನೀಡಿದೆ.
ಮಿಗಿಲಾಗಿ ಈ ಸಂಕಟವನ್ನು ಅನುಭವಿಸುವ ದಿನ ದೂರವಿಲ್ಲ. ಈಗಾಗಲೇ ನಾವು ಬಹುದೊಡ್ಡ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದು ನೀತಿ ಆಯೋಗದ ವರದಿ ಹೇಳಿದೆ.
2030ಕ್ಕೆ ನೀರೇ ಸಿಗೊಲ್ಲ
ಭಾರತವು ತನ್ನ ಇತಿಹಾಸದಲ್ಲಿಯೇ ಪ್ರಸ್ತುತ ನೀರಿನ ಅಭಾವದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂಬ ಆಘಾತಕಾರಿ ಸಂಗತಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಮಾತ್ರವಲ್ಲ ನಾವು ಈಗಿನಿಂದಲೇ ನೀರನ್ನು ರಕ್ಷಿಸುವ ಮತ್ತು ಅದನ್ನು ಹಿತಮಿತವಾದ ಬಳಕೆಗೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 2030ರ ವೇಳೆಗೆ ನೀರಿನ ಲಭ್ಯತೆ ಇಲ್ಲದೆ ಪರದಾಡಬೇಕಾಗುತ್ತದೆ ಎಂದು ಅದು ತಿಳಿಸಿದೆ.
ಶುದ್ಧ ನೀರಿಲ್ಲದೆ 2 ಲಕ್ಷ ಸಾವು
ದೇಶದ ಸುಮಾರು 600 ಮಿಲಿಯನ್ ಜನರು ಅತಿಯಾದ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಇನ್ನು ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಸಿಗದೆ ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಬಲಿಯಾಗುತ್ತಿದ್ದಾರೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ದೇಶದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಹೆಚ್ಚೂ ಕಡಿಮೆ ಬರಿದಾಗಲಿದೆ. ಇದರಿಂದ 100 ಮಿಲಿಯನ್ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಜಿಡಿಪಿಯು 2050ರ ವೇಳೆಗೆ 6%ರಷ್ಟು ನಷ್ಟ ಹೊಂದುತ್ತದೆ ಎಂದು ವರದಿ ಹೇಳಿದೆ.
70%ರಷ್ಟು ನೀರು ಕಲುಷಿತ
ಭಾರತದ ನೀರು ಪೂರೈಕೆಯಲ್ಲಿ ಶೇ 40ರಷ್ಟು ಪಾಲು ಅಂತರ್ಜಲದ್ದಾಗಿದೆ. ಆದರೆ, ಭಾರತದ ಅಂತರ್ಜಲ ಪರಿಸ್ಥಿತಿ ಆತಂಕಕಾರಿಯಾಗಿದೆ. ಅಂತರ್ಜಲದ ಮಟ್ಟದ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ, ಭಾರತದಲ್ಲಿ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 70ರಷ್ಟು ನೀರು ಕಲುಷಿತವಾಗಿದೆ.
ನೀರಿನ ಶುದ್ಧತೆ, ಲಭ್ಯತೆಯ ನಿರ್ವಹಣೆಯಲ್ಲಿ ದೇಶದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.
ರಾಜ್ಯಗಳಿಗೆ ಎಚ್ಚರಿಕೆ ಗಂಟೆ
ಉತ್ತರ ಪ್ರದೇಶ, ಒಡಿಶಾ, ಛತ್ತೀಸಗಡ ರಾಜ್ಯಗಳು ದೇಶದ ಶೇ 20-30ರಷ್ಟು ಕೃಷಿ ಉತ್ಪಾದನೆಗೆ ಕೊಡುಗೆ ನೀಡುತ್ತಿವೆ. ಆದರೆ ಇಲ್ಲಿ ನೀರಿನ ನಿರ್ವಹಣೆ ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂದು ವರದಿ ವಿವರಿಸಿದೆ.
ಶೇ 60ರಷ್ಟು ರಾಜ್ಯಗಳು ನೀರಿನ ನಿರ್ವಹಣೆ ವಿಚಾರದಲ್ಲಿ ಕಳಪೆ ಸಾಧನೆ ಮಾಡಿವೆ. ಇದು ಅಪಾಯದ ಪರಿಸ್ಥಿತಿಗೆ ಕಾರಣವಾಗಿದೆ. ವೇಗವಾಗಿ ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಸೀಮಿತ ನೀತಿ ಕಾರ್ಯಯೋಜನೆಗಳ ಪರಿಣಾಮ ಮುಂದೆ ದೇಶವು ಆಹಾರ ಭದ್ರತೆಯ ಅಪಾಯವನ್ನು ಎದುರಿಸಲು ಕಾರಣವಾಗಲಿವೆ.
ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಹಲವು ವರ್ಷಗಳಿಂದ ಬರ ಎದುರಿಸುತ್ತಿವೆ. ಆದರೆ, ಈ ರಾಜ್ಯಗಳು ಜಲಾಶಯಗಳು, ವಾಟರ್ಶೆಡ್ಗಳ ಅಭಿವೃದ್ಧಿ ಮುಂತಾದ ಚಟುವಟಿಕೆಗಳ ಮೂಲಕ ನೀರನ್ನು ಬಳಸಿಕೊಂಡಿವೆ ಎಂದು ವರದಿ ಹೇಳಿದೆ.