ಎಲ್ಎಸಿಯಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದೆ: ಜೈಶಂಕರ್
ನವದೆಹಲಿ, ಡಿಸೆಂಬರ್ 12: ಪೂರ್ವ ಲಡಾಖ್ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ವೇಳೆ ಏಳು ತಿಂಗಳಿನಿಂದ ಭಾರತವನ್ನು ಪರೀಕ್ಷಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ಭಾರತ ಎದ್ದುನಿಂತು ರಾಷ್ಟ್ರೀಯ ಭದ್ರತೆಯ ಸವಾಲನ್ನು ಎದುರಿಸಲಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಫ್ಐಸಿಸಿಐ ವಾರ್ಷಿಕ ಸಭೆಯಲ್ಲಿ ಶನಿವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಭಾರತದ ಸಾರ್ವಜನಿಕ ಭಾವನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿರುವ ಪೂರ್ವ ಲಡಾಖ್ನಲ್ಲಿನ ಘಟನೆ ವಾಸ್ತವವಾಗಿ ಚೀನಾದ ಆಸಕ್ತಿಯಾಗಿಲ್ಲ ಎಂದಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಚೀನಾ ವಿರೋಧಿ ನೀತಿಗೆ ಭಾರತವೇ ದಾಳ: ರಷ್ಯಾ ಆರೋಪ
ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ನಡೆದ ಘಟನೆಗಳು ಬಹಳ ಕಳವಳ ಮೂಡಿಸಿವೆ. ಇವು ಅನೇಕ ಸಾಮಾನ್ಯ ಆತಂಕಗಳನ್ನು ಹುಟ್ಟುಹಾಕಿವೆ ಎಂದು ತಿಳಿಸಿದ್ದಾರೆ.
ಈ ತಿಕ್ಕಾಟಕ್ಕೆ ತಾತ್ಕಾಲಿಕ ಅಥವಾ ಪೂರ್ಣ ವಿರಾಮ ಬೀಳುವ ನಿರೀಕ್ಷೆಗಳು ಇವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಅಲ್ಲಿ ಸುಲಭವಾಗಿ ಎಲ್ಲವೂ ಮುಗಿಯಲಿದೆಯೇ ಅಥವಾ ಇಲ್ಲವೇ ಎಂದು ಭವಿಷ್ಯ ನುಡಿಯುವ ಸ್ಥಾನದಲ್ಲಿ ನಾನಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಲಿದೆ' ಎಂದು ಹೇಳಿದ್ದಾರೆ.
ಈ ಒಂದು ವಿಷಯ ಇಡೀ ದೇಶದ ಭಾವನೆಯನ್ನೇ ಬದಲಾಯಿಸಿದೆ; ಜೈಶಂಕರ್
'ಗಡಿಯಲ್ಲಿ ನಡೆದಿರುವುದು ವಾಸ್ತವವಾಗಿ ಚೀನಾದ ಆಸಕ್ತಿಯೂ ಆಗಿಲ್ಲ. ಆದರೆ ಅದು ಅಲ್ಲಿ ಮಾಡಿರುವುದು ಭಾರತದ ಸಾರ್ವಜನಿಕರ ಭಾವನೆಗಳ ಮೇಲೆ ಪ್ರಭಾವ ಬೀರಿದೆ. ಕಳೆದ ಅನೇಕ ದಶಕಗಳಲ್ಲಿ ಭಾರತದ ಜನರು ಚೀನಾ ಬಗ್ಗೆ ಯಾವ ರೀತಿ ಭಾವನೆಯನ್ನು ಬದಲಿಸಿಕೊಂಡಿದ್ದಾರೆ ಎಂದು ನಾನು ನೋಡಿದ್ದೇನೆ. ಬಹು ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುವಷ್ಟು ನನಗೆ ವಯಸ್ಸಾಗಿದೆ. ಅದರಲ್ಲಿಯೂ ನನ್ನ ಬಾಲ್ಯ ಮತ್ತು ತಾರುಣ್ಯದ ದಿನಗಳ ನೆನಪಿನಲ್ಲಿವೆ' ಎಂದಿದ್ದಾರೆ.