ಚೀನಾಕ್ಕೆ ಕಠಿಣ ಸಂದೇಶ ರವಾನಿಸಲು 4 ದೇಶಗಳ ಮಹತ್ವದ ಸಭೆ
ವಾಷಿಂಗ್ಟನ್, ಸೆಪ್ಟೆಂಬರ್ 2: ಭಾರತ-ಚೀನಾ ಗಡಿ ಸಮಸ್ಯೆ ಮತ್ತಷ್ಟು ಉದ್ವಿಗ್ನವಾಗುತ್ತಿರುವ ಸಂದರ್ಭದಲ್ಲಿಯೇ ನಾಲ್ಕು ದೇಶಗಳ ವಿದೇಶಾಂಗ ಸಚಿವರು ಶೀಘ್ರದಲ್ಲಿಯೇ ನವದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಪದೇ ಪದೇ ತಗಾದೆ ತೆಗೆಯುತ್ತಿರುವ ಚೀನಾಕ್ಕೆ ಕಠಿಣ ಸಂದೇಶ ರವಾನಿಸಲು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡ ನಾಲ್ಕು ದೇಶಗಳ ಗುಂಪು ಭದ್ರತೆಯ ವಿಚಾರವಾಗಿ ಮಹತ್ವದ ಚರ್ಚೆ ನಡೆಸಲಿವೆ. ಜತೆಗೆ ಪೂರೈಕೆ ವ್ಯವಸ್ಥೆ ಹಾಗೂ ಮುಕ್ತ ಮತ್ತು ಸ್ವತಂತ್ರ ಇಂಡೋ ಪೆಸಿಫಿಕ್ ವ್ಯವಹಾರಗಳ ಬಗ್ಗೆಯೂ ಮಾತುಕತೆ ನಡೆಸಲಿವೆ.
ಅಣ್ವಸ್ತ್ರದೊಂದಿಗೆ ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯಲಿದೆ ಚೀನಾ ಸೇನೆ: ಅಮೆರಿಕ ಎಚ್ಚರಿಕೆ
ನಾಲ್ಕು ದೇಶಗಳ 'ಕ್ವಾಡ್' ಸಮೂಹವು ಒಂದೇ ವೇಗದಲ್ಲಿ ಎಚ್ಚರಿಕೆಯಿಂದ ಸಾಗುವುದರ ಕುರಿತು ಒತ್ತು ನೀಡಲಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ನಾಲ್ಕೂ ದೇಶಗಳ ಸಚಿವರು ಖುದ್ದಾಗಿ ನವದೆಹಲಿಯಲ್ಲಿ ಸೇರಿ ಸಭೆ ನಡೆಸಲಿದ್ದಾರೆ. ಈ ಮೂಲಕ ಭಾರತಕ್ಕೆ ಬೆಂಬಲ ನೀಡುವುದು ಹಾಗೂ ಚೀನಾಕ್ಕೆ ಕಠಿಣ ಸಂದೇಶ ರವಾನಿಸುವುದು ಇದರ ಉದ್ದೇಶಗಳಲ್ಲಿ ಒಂದಾಗಿದೆ.
ಈ ನಾಲ್ಕೂ ದೇಶಗಳೊಂದಿಗೆ ಚೀನಾ ವಿವಿಧ ವಿಚಾರಗಳಲ್ಲಿ ಕಿರಿಕ್ ಮಾಡಿಕೊಳ್ಳುತ್ತಿದೆ. ಭಾರತದ ಗಡಿ ಭಾಗದಲ್ಲಿ ಅಕ್ರಮವಾಗಿ ತನ್ನ ಹಕ್ಕು ಸ್ಥಾಪಿಸಲು ಸಂಚು ನಡೆಸುತ್ತಿದ್ದರೆ, ಕೊರೊನಾ ವೈರಸ್ ಉಗಮದ ಬಗ್ಗೆ ತನಿಖೆ ನಡೆಸುವ ಆಸ್ಟ್ರೇಲಿಯಾದ ಪ್ರಯತ್ನಕ್ಕೆ ಪ್ರತಿಯಾಗಿ ಆರ್ಥಿಕ ನಿರ್ಬಂಧ ವಿಧಿಸುವ ಬೆದರಿಕೆ ಹಾಕುತ್ತಿದೆ. ಜತೆಗೆ ಆಸ್ಟ್ರೇಲಿಯಾ ಮೂಲದ ಮಹಿಳಾ ಟಿವಿ ಆಂಕರ್ರನ್ನು ಬಂಧಿಸಿದೆ.
ಕಂಡು ಕೇಳರಿಯದ ಹಾನಿ ಮಾಡುತ್ತೇವೆ: ಭಾರತಕ್ಕೆ ಚೀನಾ ಖಡಕ್ ಎಚ್ಚರಿಕೆ
ಜಪಾನ್ ನಿಯಂತ್ರಣದಲ್ಲಿರುವ ಸೆಂಕಾಕು ದ್ವೀಪಗಳ ಸುತ್ತಲಿನ ಸಮುದ್ರವನ್ನು ಒತ್ತುವರಿ ಮಾಡಲು ಚೀನಾ ನಿರಂತರ ಪ್ರಯತ್ನ ನಡೆಸುತ್ತಿದೆ. ಜತೆಗೆ ಅಮೆರಿಕದೊಂದಿಗಿನ ಕಿತ್ತಾಟ ಕೂಡ ಮಿತಿಮೀರಿದೆ. ಹೀಗಾಗಿ ಈ ನಾಲ್ಕು ಪ್ರಮುಖ ದೇಶಗಳು ಚೀನಾ ವಿರುದ್ಧ ಜಂಟಿ ಹೋರಾಟಕ್ಕೆ ಮುಂದಾಗಿವೆ.