'ಮಿಡ್ಲ್ ಇನ್ ಕಮ್ ಟ್ರ್ಯಾಪ್' ನಲ್ಲಿ ಭಾರತ: ಪ್ರಧಾನಿ ಆರ್ಥಿಕ ಸಲಹೆ ಸಮಿತಿ ಸದಸ್ಯರ ಎಚ್ಚರಿಕೆ
ಭಾರತದ ಆರ್ಥಿಕತೆಯು ರಚನಾತ್ಮಕ ಬಿಕ್ಕಟ್ಟಿನ ಅಪಾಯದಲ್ಲಿದೆ. ಅದು ಶೀಘ್ರದಲ್ಲಿ 'ಮಿಡ್ಲ್ ಇನ್ ಕಮ್ ಟ್ರ್ಯಾಪ್'ಗೆ ಸಿಲುಕಬಹುದು. ಬ್ರೆಜಿಲ್ ಅಥವಾ ದಕ್ಷಿಣ ಆಅಫ್ರಿಕಾದಂತೆ ಭಾರತ ಕೂಡ ಆಗಬಹುದು ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆ ಸಮಿತಿ ಸದಸ್ಯ ಹಾಗೂ ಸಾರ್ವಜನಿಕ ಹಣಕಾಸು ಮತ್ತು ನೀತಿ ರಾಷ್ಟ್ರೀಯ ಸಂಸ್ಥೆ ನಿರ್ದೇಶಕ ರಥಿನ್ ರಾಯ್ ಎಚ್ಚರಿಸಿದ್ದಾರೆ.
ಭಾರತದ ಆರ್ಥಿಕತೆ ಹಿಂಜರಿತ ಹಾದಿಗೆ ಹೊರಳುತ್ತಿದೆ ಎಂಬ ಆತಂಕದ ಮಧ್ಯೆಯೇ ರಾಯ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಸ್ವಲ್ಪ ಮಟ್ಟಿಗೆ ಹಿಂಜರಿತವಾಗಿತ್ತು ಎಂದು ಮಾರ್ಚ್ ತಿಂಗಳ ವರದಿಯಲ್ಲಿ ಆರ್ಥಿಕ ಸಚಿವಾಲಯವು ತಿಳಿಸಿತ್ತು.
ಭಾರತದ ಆರ್ಥಿಕತೆ ವೇಗ ನಿಧಾನವಾಗಿದೆ ಎಂದ ಆರ್ಥಿಕ ಸಚಿವಾಲಯ
ಆ ಸಮಸ್ಯೆ ಇನ್ನಷ್ಟು ಆಳಕ್ಕೆ ಇಳಿಯುತ್ತಿದೆ ಎಂದು ರಾಯ್ ಹೇಳಿದ್ದಾರೆ. "ನಾವು ರಚನಾತ್ಮಕ ಹಿಂಜರಿತದ ಕಡೆ ಸಾಗುತ್ತಿದ್ದೇವೆ. ಇದು ಆರಂಭದ ಎಚ್ಚರಿಕೆ. 1991ರಿಂದ ಆರ್ಥಿಕತೆಯು ಬೆಳೆಯುತ್ತಾ ಇರುವುದು ರಫ್ತಿನ ಆಧಾರದಲ್ಲಿ ಅಲ್ಲ. ನಮ್ಮಲ್ಲಿನ 100 ಮಿಲಿಯನ್ ಭಾರತದ ಜನಸಂಖ್ಯೆಯ ಬಳಕೆ ಪ್ರಮಾಣದ ಕಾರಣಕ್ಕೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
100 ಮಿಲಿಯನ್ ಅಥವಾ 10 ಕೋಟಿ ಭಾರತದ ಗ್ರಾಹಕರು ಈ ದೇಶದ ಅಭಿವೃದ್ಧಿಯ ಯಶೋಗಾಥೆಗೆ ಕಾರಣರು. ಇದನ್ನು ಸರಳವಾಗಿ ವಿವರಿಸುವುದಾದರೆ, ನಾವು ದಕ್ಷಿಣ ಕೊರಿಯಾ ಆಗಲು ಸಾಧ್ಯವಿಲ್ಲ. ಚೀನಾ ಆಗಲು ಸಾಧ್ಯವಿಲ್ಲ. ನಾವು ಬ್ರೆಜಿಲ್ ಆಗಬಹುದು. ದಕ್ಷಿಣ ಆಫ್ರಿಕಾ ಆಗಬಹುದು.
ನಾವು ಮಧ್ಯಮ ತರಗತಿ ದೇಶವಾಗಿ, ದೊಡ್ಡ ಸಂಖ್ಯೆಯಲ್ಲಿ ಜನರು ಬಡತನದಲ್ಲಿ ಸಿಲುಕಿ ಅಪರಾಧ ಹೆಚ್ಚಾಗುವುದು ನೋಡಬಹುದು. ಈ ಮಿಡ್ಲ್ ಇನ್ ಕಮ್ ಟ್ರ್ಯಾಪ್ ಗೆ ಬೀಳಬಾರದು ಎಂದು ದೇಶಗಳು ಯತ್ನಿಸುತ್ತವೆ. ಆದರೆ ಒಂದಲ್ಲ ಒಂದು ಬಾರಿ ಸಿಲುಕಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಭಾರತವು ಜಾಗತಿಕವಾಗಿ ವೇಗದಿಂದ ಬೆಳೆಯುತ್ತಿರುವುದು ನಿಜ. ಆದರೆ ಭಾರತದ ಇತಿಹಾಸದಲ್ಲೇ ಈಗ ದೇಶವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದು ನಿಜವಲ್ಲ. ಈಗ ಏಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಅಂದರೆ, ಚೀನಾವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಅಲ್ಲ, ಆ ಕಾರಣಕ್ಕಾಗಿ ಅಷ್ಟೇ ಎಂದಿದ್ದಾರೆ.
ಆರ್ಥಿಕ ಸ್ಥಿತಿ ನಿಧಾನವಾಗಲಿದೆ : ಅರವಿಂದ್ ಸುಬ್ರಮಣಿಯನ್ ಎಚ್ಚರಿಕೆ
ನಾವು 6.1ರಿಂದ 6.6 ಪರ್ಸೆಂಟ್ ವರೆಗೆ ಬೆಳೆಯುತ್ತಿದ್ದೇವೆ. ಇದು ಒಳ್ಳೆ ಬೆಳವಣಿಗೆಯೇ. ಆದರೆ ಈ ಬಳಕೆ ಕಡಿಮೆಯಾದರೆ ಆತಂಕ ಎದುರಾಗುತ್ತದೆ. ಖಂಡಿತವಾಗಿಯೂ ಭಾರತ 5ರಿಂದ 6 ಪರ್ಸೆಂಟ್ ಪ್ರಗತಿ ಕಾಣುತ್ತದೆ. ವರ್ಷದಿಂದ ವರ್ಷಕ್ಕೆ, ಮುಂದಿನ 5-6 ವರ್ಷ, ಆದರೆ ಅದು ನಿಂತುಹೋಗುವ ಸಮಯ ಬರುತ್ತದೆ.
ಈ ಅಂಶವನ್ನೆಲ್ಲ ಸರಕಾರದ ಗಮನಕ್ಕೆ ತಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸಾರ್ವಜನಿಕವಾಗಿಯೇ ಇತರ ವೇದಿಕೆಗಳಲ್ಲಿ ಇದನ್ನು ಹಂಚಿಕೊಂಡಿದ್ದೇನೆ. ಸರಕಾರಕ್ಕೂ ಲಿಖಿವಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.