"ಕೊರೊನಾ ಅಂತ್ಯಕ್ಕಿಂದು ಆರಂಭ"; ಲಸಿಕಾ ಅಭಿಯಾನದ 10 ಪ್ರಮುಖಾಂಶಗಳು
ನವದೆಹಲಿ, ಜನವರಿ 16: ಭಾರತದಾದ್ಯಂತ ಕೊರೊನಾ ಸೋಂಕಿನ ವಿರುದ್ಧ ಬೃಹತ್ ಲಸಿಕಾ ಅಭಿಯಾನ ಇಂದು ಆರಂಭಗೊಳ್ಳಲಿದ್ದು, ಭಾರತೀಯರ ಬಹುದಿನಗಳ ನಿರೀಕ್ಷೆ ಸಾಕಾರಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳಿಗ್ಗೆ 10.30ಕ್ಕೆ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಕೊರೊನಾ ಸೋಂಕಿನಿಂದ ಮುಕ್ತವಾಗುವತ್ತ ಇಂದು ಭಾರತ ದಿಟ್ಟ ಹೆಜ್ಜೆಯನ್ನಿಡುತ್ತಿದೆ.
ಕಳೆದ ಹನ್ನೆರಡು ತಿಂಗಳುಗಳಿಂದ ಹಲವು ಜೀವಗಳನ್ನು ಬಲಿ ಪಡೆದ, ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಕೊರೊನಾ ಸೋಂಕಿನಿಂದ ಹೊರಬರಲು ಲಸಿಕಾ ಅಭಿಯಾನದ ಮೂಲಕ ಭಾರತ ದಾಪುಗಾಲಿಡುತ್ತಿದ್ದು, ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ಅನುಮತಿ ದೊರೆತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡುವ ಮೂಲಕ ಅಭಿಯಾನ ಪ್ರಾರಂಭಗೊಳ್ಳುತ್ತಿದೆ. ಲಸಿಕಾ ಅಭಿಯಾನದ ಬಗ್ಗೆ ತಿಳಿಯಲೇಬೇಕಾದ ಇನ್ನಿತರ ಹತ್ತು ಅಂಶಗಳು ಇಲ್ಲಿವೆ. ಮುಂದೆ ಓದಿ...
1. ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಮೊದಲ ಹಂತದಲ್ಲಿ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲ ದಿನ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
2."ಕೊರೊನಾ ಸೋಂಕಿನ ಅಂತ್ಯದ ಆರಂಭ"
ಲಸಿಕಾ ಅಭಿಯಾನ "ಕೊರೊನಾ ಸೋಂಕಿನ ಅಂತ್ಯದ ಆರಂಭವಾಗಲಿದೆ" ಎಂದು ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಬೆಳಿಗ್ಗೆ 10.30ಕ್ಕೆ ದೇಶಾದ್ಯಂತ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸುಮಾರು 3000 ಸ್ಥಳಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಪ್ರತಿ ಸೆಷನ್ ನಲ್ಲಿ 100 ಮಂದಿಗೆ ಲಸಿಕೆ ನೀಡಲಾಗುತ್ತದೆ.ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೇಗಿದೆ ಕೊರೊನಾ ಲಸಿಕೆ ಸಂಗ್ರಹ ವ್ಯವಸ್ಥೆ?
3. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮೊದಲ ಲಸಿಕೆ ಯಾರಿಗೆ?
ರಾಜಸ್ಥಾನದಲ್ಲಿ ಮೊದಲ ಕೊರೊನಾ ಲಸಿಕೆಯನ್ನು ಜೈಪುರದ ಸವಾಯಿ ಮನ್ ಸಿಂಗ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಧೀರ್ ಭಂಡಾರಿ ಅವರಿಗೆ ನೀಡಲಾಗುವುದು ಹಾಗೂ ಮಧ್ಯಪ್ರದೇಶದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹಾಗೂ ಅಟೆಂಡರ್ ಗೆ ಮೊದಲ ಲಸಿಕೆ ನೀಡಲಾಗುವುದು ಎಂದು ಈ ರಾಜ್ಯಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
4. ಮೋದಿ ಟ್ವೀಟ್ ಮೂಲಕ ಭರವಸೆ
ಜನವರಿ 16ರಂದು ಪ್ಯಾನ್ ಇಂಡಿಯಾ ಕೋವಿಡ್ 19 ಲಸಿಕಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶನಿವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ನಿರ್ಣಾಯಕ ಹಂತ ತಲುಪಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
5. ಲಸಿಕೆ ಬಗ್ಗೆ ಆರೋಗ್ಯ ಸಚಿವರ ದೃಢೀಕರಣ
ಲಸಿಕಾ ಅಭಿಯಾನದ ಸಲುವಾಗಿ ದೇಶದಲ್ಲಿ ಅವಶ್ಯಕ ಸಿದ್ಧತೆಗಳನ್ನು ಪರಿಶೀಲಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ/ಸೆರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯು ಸುರಕ್ಷಿತ ಎಂದು ಸಾಬೀತಾಗಿರುವುದಾಗಿ ಪುನರುಚ್ಚರಿಸಿದ್ದಾರೆ. ಈ ಮುನ್ನ ಲಸಿಕೆಯ ಕುರಿತು ಅನುಮಾನ, ಆಕ್ಷೇಪಗಳು ವ್ಯಕ್ತಗೊಂಡಿದ್ದವು.
6. ಹಂತಹಂತಗಳಲ್ಲಿ ಲಸಿಕಾ ಅಭಿಯಾನ
ಹಂತಹಂತಗಳಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಯೋಜಿಸಿದ್ದು, ಲಸಿಕೆ ಪಡೆಯಲಿರುವ ಆದ್ಯತೆಯ ಗುಂಪಿಗೆ ಈಗಾಗಲೇ ಸೂಕ್ತ ಮಾಹಿತಿ ನೀಡಲಾಗಿದೆ. ಮೊದಲ ಹಂತದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆಯಲಿದ್ದಾರೆ.
ಯಾರು ಯಾರಿಗೆ ಮೊದಲು ಲಸಿಕೆ ನೀಡಬೇಕು?; ಕೇಂದ್ರದಿಂದ ಬಂತು ಮಾರ್ಗಸೂಚಿ
7. ಯಾರು ಯಾರು ಲಸಿಕೆ ಪಡೆಯುತ್ತಾರೆ?
ಸರ್ಕಾರದ ಪ್ರಕಾರ, ಮೊದಲು ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ, ನಂತರ ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎರಡು ಕೋಟಿ ಕಾರ್ಯಕರ್ತರಿಗೆ, ಐವತ್ತು ವರ್ಷ ಮೇಲ್ಪಟ್ಟವರಿಗೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿರುವ ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಂತಹಂತಗಳಲ್ಲಿ ಲಸಿಕೆ ನೀಡಲಿರುವುದಾಗಿ ತಿಳಿದುಬಂದಿದೆ.
8. ದೇಶಾದ್ಯಂತ ಎರಡು ಸುತ್ತಿನ ಡ್ರೈ ರನ್
ದೇಶದ 700 ಜಿಲ್ಲೆಗಳ ಒಂದೂವರೆ ಲಕ್ಷ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲು ವಿಶೇಷ ತರಬೇತಿ ನೀಡಲಾಗಿದೆ. ಈ ಮುನ್ನ ದೇಶಾದ್ಯಂತ ಎರಡು ಸುತ್ತಿನ ಲಸಿಕಾ ತರಬೇತಿ (ಡ್ರೈ ರನ್) ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಲಸಿಕೆ ನೀಡುವ ಪ್ರಕ್ರಿಯೆಯ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಹಾಗೂ ಅಭಿಯಾನದಲ್ಲಿನ ಲೋಪದೋಷಗಳ ಪತ್ತೆಗೆ ಈ ಡ್ರೈ ರನ್ ಗಳನ್ನು ನಡೆಸಲಾಗಿದೆ.
9. ಭಾರತೀಯರಿಗೆ ಎರಡು ಲಸಿಕೆಗಳ ಆಯ್ಕೆ
ಭಾರತದಲ್ಲಿ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಕುರಿತು ಕೆಲವು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮೂರನೇ ಹಂತದ ಪ್ರಯೋಗದಲ್ಲಿದ್ದ ಕೋವ್ಯಾಕ್ಸಿನ್ ಲಸಿಕೆಯ ಬಳಕೆಗೆ ಅನುಮತಿ ದೊರೆತದ್ದು, ಲಸಿಕೆ ಕುರಿತು ಅನುಮಾನ, ವಿರೋಧಗಳನ್ನು ಸೃಷ್ಟಿಸಿತ್ತು. ಸರ್ಕಾರ ಈ ಲಸಿಕೆಯ ಸುರಕ್ಷತೆ ಬಗ್ಗೆ ದೃಢೀಕರಣ ನೀಡಿದ್ದು, ಎರಡು ಲಸಿಕೆಗಳ ಆಯ್ಕೆಯನ್ನು ಭಾರತೀಯರಿಗೆ ನೀಡಲಾಗಿದೆ.ಉತ್ತರ ಭಾರತದ ರಾಜ್ಯಗಳಲ್ಲಿ ಕೊವಿಡ್-19 ಲಸಿಕೆ ಕೇಂದ್ರಗಳ ಮಾಹಿತಿ
10. 2020 ವರ್ಷವನ್ನು ಮರೆಯಲು ಸಾಧ್ಯವೇ?
ಕೊರೊನಾ ವೈರಸ್ ಭೀತಿ, ಆತಂಕದ ನಡುವೆಯೇ ಆರಂಭವಾದ 2020 ಅನ್ನು ಮರೆಯಲು ಸಾಧ್ಯವೇ? ಕಳೆದ ಮಾರ್ಚ್ ನಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಲಾಕ್ ಡೌನ್ ಆರ್ಥಿಕತೆಗೆ ಕೊಟ್ಟ ಪೆಟ್ಟನ್ನೂ ಮರೆಯಲು ಸಾಧ್ಯವಿಲ್ಲ. ದೇಶದಲ್ಲಿ ಈವರೆಗೂ ಸುಮಾರು ಒಂದೂವರೆ ಲಕ್ಷ ಜನರ ಸಾವಿಗೆ ಕಾರಣವಾದ ಈ ಸೋಂಕಿನ ನಿವಾರಣೆಗೆ ಒಂದು ವರ್ಷದ ನಂತರ ಲಸಿಕೆ ಅಭಿವೃದ್ಧಿಗೊಂಡಿದೆ. ಲಸಿಕೆಯಿಂದ ಕೊರೊನಾ ಸೋಂಕು ನಿವಾರಣೆಯಾಗುವ ಭರವಸೆ ಜನರ ಮುಂದಿದೆ.