ಭಾರತಕ್ಕೆ ಬರುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಆಹ್ವಾನ
ನವದೆಹಲಿ, ಜನವರಿ 17: ಈ ವರ್ಷ ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಓ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಲಿದೆ.
ಎಸ್ಸಿಓದ ಈ ಹಿಂದಿನ ಸಂಪ್ರದಾಯ ಮತ್ತು ಪ್ರಕ್ರಿಯೆಯಂತೆ ಸಂಸ್ಥೆಯ ಎಲ್ಲ ಎಂಟೂ ದೇಶಗಳ ಸದಸ್ಯರು, ನಾಲ್ವರು ವೀಕ್ಷಕ ದೇಶಗಳು ಮತ್ತು ಇತರೆ ಅಂತಾರಾಷ್ಟ್ರೀಯ ಮಾತುಕತೆ ಸಹಭಾಗಿಗಳನ್ನು ಶೃಂಗಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದರು.
ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ: ವಿಶ್ವಸಂಸ್ಥೆಯಲ್ಲಿ ಚೀನಾಗೆ ಮತ್ತೆ ಮುಖಭಂಗ
2017ರಲ್ಲಿ ಎಸ್ಸಿಓದ ಪೂರ್ಣಾವಧಿ ಸದಸ್ಯರಾದ ಬಳಿಕ ಭಾರತ ಮತ್ತು ಪಾಕಿಸ್ತಾನಗಳು, ಕಾಶ್ಮೀರ ವಿವಾದದ ಉದ್ವಿಗ್ನತೆ ಹಾಗೂ ಆತಿಥ್ಯದ ಸಮಸ್ಯೆಗಳ ನಡುವೆಯೂ ಎಸ್ಸಿಓದ ಅನೇಕ ಸಭೆಗಳಲ್ಲಿ ಹಾಗೂ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಸಂರಚನೆ (ಆರ್ಎಟಿಎಸ್) ಸಭೆಗಳಲ್ಲಿ ಭಾಗವಹಿಸಿವೆ. ಈ ಬಾರಿಯ ಶೃಂಗಸಭೆಗೆ ಭಾರತ ಆತಿಥ್ಯ ವಹಿಸುತ್ತಿದೆ.
ಆರ್ಥಿಕ ವಿಚಾರದ ಚರ್ಚೆ
ಪ್ರಾದೇಶಿಕ ಒಕ್ಕೂಟದ ಆರ್ಥಿಕತೆ ಮತ್ತು ಇತರೆ ಪ್ರಮುಖ ವಿಚಾರಗಳನ್ನು ಚರ್ಚಿಸಲು ಸದಸ್ಯ ದೇಶಗಳ ಪ್ರಧಾನಮಂತ್ರಿ ಮಟ್ಟದ ನಾಯಕರು ಸರ್ಕಾರಗಳ ಮಂಡಳಿ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಎಸ್ಸಿಓದ ವಾರ್ಷಿಕ ಬಜೆಟ್ ಕೂಡ ನಿಶ್ಚಯವಾಗಲಿದೆ.
ಮೊದಲ ಬಾರಿಗೆ ಇಮ್ರಾನ್ಗೆ ಆಹ್ವಾನ
2014ರ ಮೇನಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಷರೀಫ್, ಮಿನಿ-ಸಾರ್ಕ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದರು. ಇದುವರೆಗೂ ಭಾರತವು ಇಮ್ರಾನ್ ಖಾನ್ಗೆ ಆಹ್ವಾನ ನೀಡಿರಲಿಲ್ಲ. ಪಾಕಿಸ್ತಾನದ ಪ್ರಧಾನಿಯಾದ ಬಳಿಕ ಇಮ್ರಾನ್ ಖಾನ್ ಅವರಿಗೆ ಇದೇ ಮೊದಲ ಬಾರಿಗೆ ಆಹ್ವಾನ ನೀಡಲಾಗಿದೆ.
ಆದೇಶ ಬಂದರೆ ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಸಿದ್ಧ: ಜನರಲ್ ನರವಾಣೆ
ಮತ್ತೆ ವಿಫಲವಾದ ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾದ ನೆರವಿನಿಂದ ಕೆದಕಲು ಪಾಕಿಸ್ತಾನವು ಮೂರನೇ ಬಾರಿ ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ವಿವಾದವು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆ. ಅದನ್ನು ಮಾತುಕತೆ ಮೂಲಕ ಅವರೇ ಬಗೆಹರಿಸಿಕೊಳ್ಳಬೇಕು ಎನ್ನುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತರೆ ದೇಶಗಳು ಚೀನಾದ ಪ್ರಯತ್ನಕ್ಕೆ ತಣ್ಣೀರೆರಚಿವೆ. ಅದಾದ ಕೆಲವೇ ಗಂಟೆಗಳಲ್ಲಿ ಇಮ್ರಾನ್ ಖಾನ್ ಆಹ್ವಾನದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಳೆದ ವರ್ಷ ಕಿರ್ಗಿಸ್ತಾನದಲ್ಲಿ
ಕಳೆದ ವರ್ಷ ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ನಲ್ಲಿ ಎಸ್ಸಿಓ ಶೃಂಗಸಭೆ ನಡೆದಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ್ದರು. ಚೀನಾ ನೇತೃತ್ವದಲ್ಲಿ ರೂಪುಗೊಂಡಿರುವ ಈ ಎಂಟು ದೇಶಗಳ ಒಕ್ಕೂಟದ ಶೃಂಗಸಭೆ ಈ ವರ್ಷ ನವದೆಹಲಿಯಲ್ಲಿ ನಡೆಯಲಿದೆ.