ಭಾರತೀಯರ ಮೇಲಿನ ಪ್ರಯಾಣ ನಿರ್ಬಂಧ ತೆರವುಗೊಳಿಸಲು ವಿದೇಶಿ ಸರ್ಕಾರಗಳಿಗೆ ಮನವಿ
ನವದೆಹಲಿ, ಜುಲೈ 23: ದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಭಾರತೀಯರಿಗೆ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುವ ವಿಷಯವಾಗಿ ವಿದೇಶಿ ಸರ್ಕಾರಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರ ಗುರುವಾರ ತಿಳಿಸಿದೆ.
ಪ್ರಯಾಣ ನಿರ್ಬಂಧ ಕಾರಣವಾಗಿ ಚೀನಾ, ಇಟಲಿ ಮತ್ತು ಹಲವಾರು ದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಭಾರತದಲ್ಲೇ ಉಳಿದುಕೊಳ್ಳಬೇಕಾಗಿದೆ.
"ಸದ್ಯಕ್ಕೆ ಭಾರತದ ಕೊರೊನಾ ಪರಿಸ್ಥಿತಿ ಸುಧಾರಣೆಯಾಗಿದ್ದು, ಭಾರತೀಯರಿಗೆ ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸುವ ಸಂಬಂಧ ವಿದೇಶಿ ಸರ್ಕಾರಗಳೊಂದಿಗೆ ಚರ್ಚಿಸುತ್ತೇವೆ. ಇದು ಆರ್ಥಿಕ ಚೇತರಿಕೆಗೆ ಬಹುಮುಖ್ಯ ಅಂಶವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.
"ಈ ದಿಕ್ಕಿನಲ್ಲಿ ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಭಾರತದಿಂದ ಜನರ ಪ್ರಯಾಣವನ್ನು ಸಹಜಗೊಳಿಸಲು ಹೆಚ್ಚಿನ ದೇಶಗಳು ಕ್ರಮ ವಹಿಸುವ ನಿರೀಕ್ಷೆಯಿದೆ" ಎಂದು ಹೇಳಿದರು.
ಈಚೆಗೆ, ವಿದೇಶದ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಪ್ರಯಾಣ ನಿರ್ಬಂಧ ಸಡಿಲಿಸುವ ಸಂಬಂಧ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಪ್ರಯಾಣ ನಿರ್ಬಂಧ ವಿಷಯವನ್ನು ಸಚಿವಾಲಯ ಮಟ್ಟದಲ್ಲಿ ಹಲವಾರು ದೇಶಗಳೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. ಇದರ ಪರಿಣಾಮ, ಅಮೆರಿಕ, ಕೆನಡಾ, ಬ್ರಿಟನ್, ಐರ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಲಕ್ಸಂಬರ್ಗ್, ಜಾರ್ಜಿಯಾ ಸೇರಿದಂತೆ ಹಲವು ದೇಶಗಳಲ್ಲಿ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳು ಭಾರತೀಯರಿಗೆ ನಿರ್ಬಂಧಗಳನ್ನು ಸಡಿಲಗೊಳಿಸಲಿವೆ ಎಂದು ತಿಳಿಸಿದರು.
Explained: ಯಾವ ದೇಶಕ್ಕೆ ಭಾರತೀಯರು ಈಗ ಪ್ರಯಾಣಿಸಬಹುದು, ನಿರ್ಬಂಧವೇನು?
ಭಾರತವು ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನಗಳ ಮೇಲಿನ ನಿಷೇಧವನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಸಮಯದಲ್ಲಿ, ಭಾರತವು ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದಗಳನ್ನು ಹೊಂದಿರುವ ದೇಶಗಳಿಗೆ ಹೋಗಲು ಹಾಗೂ ಅಲ್ಲಿಂದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸಲು ಅನುಮತಿಸಿದೆ. ಭಾರತವು ಪ್ರಸ್ತುತ 28 ದೇಶಗಳೊಂದಿಗೆ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದ ಹೊಂದಿದೆ. ಇದರಲ್ಲಿ ಅಫ್ಘಾನಿಸ್ತಾನ, ಬಹ್ರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ನೇಪಾಳ, ನೆದರ್ಲ್ಯಾಡ್ಸ್, ನೈಜೀರಿಯಾ, ಓಮನ್, ಕತಾರ್, ರಷ್ಯಾ, ರುವಾಂಡಾ, ಸೀಶೆಲ್ಸ್, ಶ್ರೀಲಂಕಾ, ಟಾಂಜಾನಿಯಾ, ಉಕ್ರೇನ್, ಯುಎಇ, ಯುಕೆ, ಉಜ್ಬೇಕಿಸ್ತಾನ್ ಮತ್ತು ಯುಎಸ್ ಸೇರಿದೆ. ಆದರೆ ಈ ಕೆಲವು ದೇಶಗಳು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಅಡಿಯಲ್ಲಿ ಭಾರತಕ್ಕೆ ಮತ್ತು ಹೊರಗಿನ ವಿಮಾನ ಪ್ರಯಾಣವನ್ನು ನಿಷೇಧಿಸಿವೆ.
ಗುರುವಾರ ಭಾರತದಲ್ಲಿ 41,383 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದ ಅವಧಿಯಲ್ಲಿ 507 ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ವರದಿಯಾಗಿದೆ. ಗುರುವಾರದ ಅಂಕಿಸಂಖ್ಯೆಯೊಂದಿಗೆ, ಇದುವರೆಗೂ ದೇಶದಲ್ಲಿ ಒಟ್ಟು 3,12,57,720 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3,04,29,339 ಮಂದಿ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,09,394 ಆಗಿದೆ. ಇದುವರೆಗೂ ಸೋಂಕಿನಿಂದ 4,18,987 ಮಂದಿ ಸಾವನ್ನಪ್ಪಿದ್ದಾರೆ.