ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ-ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್ಗೆ ಭಾರತ ಛೀಮಾರಿ
ನವದೆಹಲಿ, ಸೆಪ್ಟೆಂಬರ್ 25: ಜಾಗತಿಕ ಭಯೋತ್ಪಾದಕರ ಅಡಗುತಾಣವಾಗಿರುವ ಪಾಕಿಸ್ತಾನದಿಂದ ಮಾನವ ಹಕ್ಕು ಹಾಗೂ ಭಯೋತ್ಪಾದನೆಯ ಬಗ್ಗೆ ಪಾಠವನ್ನು ಕಲಿಯುವ ಅಗತ್ಯವಿಲ್ಲವೆಂದು ಭಾರತ ವಿಶ್ವಸಂಸ್ಥೆಯಲ್ಲಿ ಕಿಡಿಕಾರಿದೆ.
ಕೊರೊನಾ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವರ್ಚ್ಯುವಲ್ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರತ ತನ್ನ ವಾದವನ್ನು ಮಂಡಿಸಿದ್ದು, ಕೆಲ ದಿನಗಳ ಹಿಂದೆ ಪಾಕಿಸ್ತಾನ ಮಂಡಿಸಿದ್ದ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. 2008ರ ಪಠಾಣ್ಕೋಟ್ ಭಯೋತ್ಪಾದಕ ದಾಳಿ, ಉರಿ ಹಾಗೂ ಪುಲ್ವಾಮದಂತಹ ಭೀಕರ ಉಗ್ರಾಳಿಯನ್ನು ಮಾಡಿ ಮಾಡಿ ಇಡೀ ವಿಶ್ವಕ್ಕೆ ಪಾಕಿಸ್ತಾನದ ಮುಖವಾಡ ತಿಳಿದುಬಂದಿದೆ.
ಜಾಗತಿಕ ಉಗ್ರತಾಣವಾಗಿರುವ ಪಾಕಿಸ್ತಾನ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಹಾಗೆಯೇ ಇಡೀ ವಿಶ್ವವೇ ಕೊವಿಡ್ 19 ರೋಗದಿಂದ ನರಳುತ್ತಿರುವಾಗ ಪಾಕಿಸ್ತಾನವು ಹೊಸದೊಂದು ಥಿಯರಿಯನ್ನು ಹುಟ್ಟುಹಾಕಿ ಭಾರತದ ಮೇಲೆ ದಾಳಿ ನಡೆಸುತ್ತಿರುವುದು ಅಮಾನವೀಯ ಎಂದು ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಕಿಡಿಕಾರಿದ್ದಾರೆ.
ವಿಶ್ವ ಭಯೋತ್ಪಾದನೆಯ ನರ್ಸರಿ ಎಂದೇ ಪಾಕಿಸ್ತಾನವನ್ನು ಕರೆಯಲಾಗುತ್ತದೆ. ಅಲ್ಖೈದಾದ ಸ್ಥಾಪಕ ಲಾಡೆನ್ನನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹುತಾತ್ಮ ಎಂದು ಕರೆದಿದ್ದರು. ಇಂತಹ ಪಾಕಿಸ್ತಾನದಿಂದ ಈಗ ಭಾರತಕ್ಕೆ ಮಾನವ ಹಕ್ಕುಗಳ ಪಾಠ ಹಾಗೂ ಭಯೋತ್ಪಾದನೆಯ ಬಗ್ಗೆ ಪಾಠ ಮಾಡಲು ಬರುತ್ತಿರುವುದು ನಗು ತರಿಸುವಂಥದ್ದಾಗಿದೆ.
ಪಾಕಿಸ್ತಾನದಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಹಾಗೂ ಪಾಕಿಸ್ತಾನ ಹೇಳಿದಂತೆ ಎಂದೂ ನಡೆದುಕೊಂಡಿಲ್ಲ, ಇನ್ನು ಪಾಕಿಸ್ತಾನವೂ ಅಲ್ಖೈದಾವನ್ನು ನಿರ್ಮೂಲನೆ ಮಾಡಿದೆ ಎಂಬ ವಿಚಾರವನ್ನೂ ಕೂಡ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.