ಎಲ್ ಒಸಿ ಆಚೆಗಿನ ಎಲ್ಲ ವ್ಯಾಪಾರ ಭಾರತದಿಂದ ಅಮಾನತು; ಪಾಕ್ ಗೆ ಗುದ್ದು
ನವದೆಹಲಿ, ಏಪ್ರಿಲ್ 18 : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಾರ- ವಹಿವಾಟನ್ನು ಭಾರತ ಅಮಾನತುಗೊಳಿಸಿದೆ. ಇದು ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗಡಿ ನಿಯಂತ್ರಣ ರೇಖೆ ಆಚೆಯಿಂದ ನಡೆಸುವ ವ್ಯಾಪಾರ-ವ್ಯವಹಾರದ ಮಾರ್ಗವನ್ನು ದುರ್ಬಳಕೆ ಮಾಡಿಕೊಂಡು, ಪಾಕಿಸ್ತಾನ ಮೂಲದ ಕೆಲ ದುಷ್ಕರ್ಮಿಗಳು ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳು, ನಕಲಿ ನೋಟುಗಳು ಇತ್ಯಾದಿಗಳನ್ನು ಸಾಗಣೆ ಮಾಡುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಭಾರತ ಸರಕಾರ ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಷ್ಟ್ರೀಯ ಭದ್ರತಾ ದಳದ ಗಮನಕ್ಕೆ ಬಂದಿರುವ ಪ್ರಕಾರ, ಎಲ್ ಒಸಿ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಭಾರತದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತೆ ಉತ್ತೇಜಿಸುತ್ತಿರುವ ನಿಷೇಧಿತ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿರುವುದು ಕಂಡುಬಂದಿದೆ.
ಗಡಿನಿಯಂತ್ರಣ ರೇಖೆ ಆಚೆಯ ವ್ಯಾಪಾರವು ಜಮ್ಮು ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಧ್ಯೆ ಎರಡು ವಾರಗಳ ನಂತರ ಮಂಗಳವಾರವಷ್ಟೇ ಶುರು ಆಗಿತ್ತು. ಏಪ್ರಿಲ್ ಒಂದನೇ ತಾರೀಕು ಗಡಿ ನಿಯಂತ್ರಣ ರೇಖೆ ಬಳಿ ವ್ಯಾಪಾರ, ಪ್ರಯಾಣ ಎಲ್ಲವನ್ನು ಅಮಾನತು ಮಾಡಲಾಗಿತ್ತು. ಆ ವೇಳೆ ಪಾಕಿಸ್ತಾನದಿಂದ ಭಾರೀ ಪ್ರಮಾಣದಲ್ಲಿ ಶೆಲ್ಲಿಂಗ್ ನಡೆಯುತ್ತಿತ್ತು.
ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ
ಬಿಎಸ್ ಎಫ್ ಅಧಿಕಾರಿ, ಮಹಿಳೆ ಹಾಗೂ ಐದು ವರ್ಷದ ಬಾಲಕಿ ಹೀಗೆ ಮೂವರು ಪೂಂಛ್ ನಲ್ಲಿ ಸಾವನ್ನಪ್ಪಿದ್ದರು. ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯದ ಸಂಬಂಧ ಹದಗೆಟ್ಟಿದೆ.