ಡಿಆರ್ ಡಿಒದಿಂದ ಸಾಧನೆ, ಪ್ರತಿಬಂಧಕ ಕ್ಷಿಪಣಿ ಪರೀಕ್ಷೆಯಲ್ಲಿ ಪಾಸ್
ಭಾರತ ಮತ್ತೊಂದು ಕ್ಷಿಪಣಿ ಪರೀಕ್ಷೆಯನ್ನು ಬುಧವಾರದಂದು ಯಶಸ್ವಿಯಾಗಿ ನೆರವೇರಿಸಿದೆ. ಆಕಾಶದಲ್ಲೇ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಆತ್ಯಾಧುನಿಕ ತಂತ್ರಜ್ಞಾನದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಡಿಆರ್ಡಿಒ ಕೈಗೊಂಡಿತ್ತು.
ಬಾಲಸೋರ್(ಒಡಿಶಾ), ಮಾರ್ಚ್ 01: ಭಾರತ ಮತ್ತೊಂದು ಕ್ಷಿಪಣಿ ಪರೀಕ್ಷೆಯನ್ನು ಬುಧವಾರದಂದು ಯಶಸ್ವಿಯಾಗಿ ನೆರವೇರಿಸಿದೆ. ಆಕಾಶದಲ್ಲೇ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಆತ್ಯಾಧುನಿಕ ತಂತ್ರಜ್ಞಾನದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಡಿಆರ್ಡಿಒ ಕೈಗೊಂಡಿತ್ತು. ಸುಮಾರು 20ದಿನಗಳ ಅವಧಿಯಲ್ಲಿ ಎರಡು ಬಾರಿ ಪರೀಕ್ಷೆಯಲ್ಲೂ ಕ್ಷಿಪಣಿ ಪಾಸಾಗಿದೆ.
ಒಡಿಶಾದ ಬಾಲಸೋರ್ ಬಳಿ ಇರುವ ಅಬ್ದುಲ್ ಕಲಾಂ ದ್ವೀಪದಲ್ಲಿ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಬುಧವಾರ ಬೆಳಗ್ಗೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಮೊದಲು ಫೆಬ್ರವರಿ 11 ರಂದು ಪ್ರತಿಬಂಧಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.
ಚಾಂಡಿಪುರ್ ಉಡಾವಣಾ ಕೇಂದ್ರದಿಂದ ಉಡಾಯಿಸಲಾಗಿದ್ದ ಪೃಥ್ವಿ ಕ್ಷಿಪಣಿಯನ್ನು 4 ನಿಮಿಷಗಳ ನಂತರ ಆಕಾಶದಲ್ಲೇ ಪ್ರತಿಬಂಧಕ ಕ್ಷಿಪಣಿ ಹೊಡೆದುರುಳಿಸಿತು.
ಪ್ರತಿಬಂಧಕ ಕ್ಷಿಪಣಿಯಲ್ಲಿ ಅತ್ಯಾಧುನಿಕ ಕಂಪ್ಯೂಟರ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಆಕ್ಟಿವೇಟರ್, ಜಿಪಿಎಸ್ ಉಪಕರಣ ಒಳಗೊಂಡಿರುತ್ತದೆ. ಇದು 7.5 ಮೀಟರ್ ಉದ್ದ ಇದ್ದು, 30 ಕಿ.ಮೀ. ಎತ್ತರದಲ್ಲೇ ಎದುರಾಳಿಗೆ ಸೇರಿದ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಭಾರತದ ಬಳಿ ಖಂಡಾಂತರ ಕ್ಷಿಪಣಿಯ ದಾಳಿಯನ್ನು ಗುರುತಿಸಲು 2 ಹಂತದ ರಕ್ಷಣಾ ವ್ಯವಸ್ಥೆ ಇದೆ. ಇದು ಭೂಮಿಯ ವಾತಾವರಣದ ಹೊರಭಾಗ ಮತ್ತು ಭೂಮಿಯ ವಾತಾವರಣದ ಒಳಭಾಗದಲ್ಲಿ ಆಗಮಿಸುವ ಕ್ಷಿಪಣಿಯನ್ನು ಗುರುತಿಸುತ್ತದೆ. ಸುಧಾರಿತ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆಯ ನಂತರ ಈ ವ್ಯವಸ್ಥೆ ಹೊಂದಿದ ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ರಾಷ್ಟ್ರಗಳೊಂದಿಗೆ ಭಾರತ ಗುರುತಿಸಲಿಕೊಳ್ಳಲಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ.