ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಉಡಾವಣೆ ಯಶಸ್ವಿ
ಬೆಂಗಳೂರು, ಜ. 31: ಡಿಆರ್ಡಿಓ ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಕ್ಷಿಪಣಿ ಪರೀಕ್ಷೆಯು ಶನಿವಾರ ಬೆಳಗ್ಗೆ ಯಶಸ್ವಿಯಾಗಿದೆ. ಇದು ಅಗ್ನಿ-5ರ ಮೂರನೇ ಪರೀಕ್ಷೆಯಾಗಿದ್ದು, ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ.
ಈ ಕುರಿತು ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಶನ್ (ಡಿಆರ್ಡಿಓ) ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ಖಚಿತ ಮಾಹಿತಿ ನೀಡಿವೆ. ಓಡಿಶಾದ ವ್ಹೀಲರ್ ದ್ವೀಪದಿಂದ ಬೆಳಗ್ಗೆ 8.09 ಗಂಟೆಗೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಕ್ಷಿಪಣಿಯು ಎಲ್ಲ ನಿರೀಕ್ಷೆಯನ್ನೂ ಮುಟ್ಟಿದೆ. [ಅಗ್ನಿ 5 ಮೂರನೇ ಉಡಾವಣೆಗೆ ಡಿಆರ್ ಡಿಓ ಸಜ್ಜು]
ಭಾವನಾತ್ಮಕ ಬೀಳ್ಕೊಡುಗೆ : ಒನ್ಇಂಡಿಯಾ ಕನ್ನಡ ಈ ಮೊದಲು ವರದಿ ಮಾಡಿದ್ದಂತೆ ಅಗ್ನಿ-5 ಕ್ಷಿಪಣಿಯ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಡಿಆರ್ಡಿಓದಿಂದ ಹೊರನಡೆಯುತ್ತಿರುವ ಡಾ. ಅವಿನಾಶ್ ಚಂದರ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಿದಂತಾಗಿದೆ. ಜ. 31ರ ದಿನಾಂತ್ಯಕ್ಕೆ ಅವಿನಾಶ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ.
"ಯೋಜನೆಯ ಎಲ್ಲ ನಿರೀಕ್ಷೆಗಳೂ ಈಡೇರಿವೆ. ಈ ಮೂಲಕ ಕನಸು ನನಸಾಗಿದೆ. ನಮ್ಮ ಪ್ರಕಾರ ಇದು ಶೇ. 200ರಷ್ಟು ಯಶಸ್ಸು ಗಳಿಸಿದೆ. ಇದಕ್ಕಿಂತ ಉತ್ತಮ ಪರಿಣಾಮವನ್ನು ನಾವು ನಿರೀಕ್ಷಿಸುವುದು ಸಾಧ್ಯವಿಲ್ಲ" ಎಂದು ಡಿಆರ್ಡಿಓ ಪ್ರಧಾನ ನಿರ್ದೇಶಕರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. [ಡಾ. ಅವಿನಾಶ್ ವಜಾ ಎಷ್ಟು ಸರಿ?]
"ಶನಿವಾರ ನಡೆದದ್ದು ಅಗ್ನಿ-5ರ ಮೂರನೇ ಉಡಾವಣೆ (ಅಗ್ನಿ5-03 ಮಿಶನ್)ಯಾಗಿದ್ದು, ಇದನ್ನು ರಸ್ತೆಯ ಮೊಬೈಲ್ ಉಡಾವಣಾ ವಾಹನದ ಮೂಲಕ ಪರೀಕ್ಷಿಸಲಾಗಿದೆ. ಇನ್ನೂ ಎರಡು ಉಡಾವಣೆ ಮಾಡುವ ನಿರೀಕ್ಷೆ ಹೊಂದಿದ್ದೇವೆ" ಎಂದು ಡಿಆರ್ಡಿಓ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದರ ವ್ಯಾಪ್ತಿ 5,000 ಕಿ.ಮೀ.ಗಿಂತ ಹೆಚ್ಚು : 'ಅಗ್ನಿ-5' ಇದೊಂದು ಮೂರು ಹಂತಗಳ, ದೃಢವಾಗಿ ಮುನ್ನುಗ್ಗುವ, ರೋಡ್ ಮೊಬೈಲ್ ವಾಹನದಿಂದ ಉಡಾವಣೆಗೊಳ್ಳಬಲ್ಲಂತಹ ಪರಮಾಣು ಸಾಮರ್ಥ್ಯದ ಅತ್ಯಂತ 'ದೂರ ಪ್ರದೇಶದ ವ್ಯಾಪ್ತಿ ಹೊಂದಿರುವ ಖಂಡಾಂತರ ಕ್ಷಿಪಣಿ (ಎಲ್ಆರ್ಬಿಎಂ)'ಯಾಗಿದೆ. 5,000 ಕಿ.ಮೀ. ವ್ಯಾಪ್ತಿಗಿಂತ ಹೆಚ್ಚು ದೂರದವರೆಗೆ ಒನ್ ಟನ್ ಭಾರದ ವಸ್ತುಗಳನ್ನು ಒಯ್ಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ. [ಮೋದಿ ಸಲಹೆಗೆ ಏನೆನ್ನುತ್ತೆ ಡಿಆರ್ ಡಿಓ]
ಈ ಕ್ಷಿಪಣಿಯ ಎಲ್ಲ ಮೂರು ಹಂತಗಳನ್ನು ಫ್ಲೆಕ್ಸ್ ನೋಜಲ್ ಪದ್ಧತಿ ಮೂಲಕ ನಿಯಂತ್ರಿಸಲಾಗಿದೆ. 'ಇನ್ನೋವೇಟಿವ್ ಇನರ್ಶಿಯಲ್ ಎನರ್ಜಿ ಮ್ಯಾನೇಜ್ಮೆಂಟ್ ಎಕ್ಸ್ಪ್ಲಿಸಿಟ್ ಗೈಡೆನ್ಸ್'ನಿಂದ ಮಾರ್ಗದರ್ಶನ ಸಿಕ್ಕಿದೆ.
ಅಗ್ನಿ-5ರ ಮೊದಲ ಎರಡು ಪ್ರಯೋಗಗಳನ್ನು 'ಹಾಟ್ ಲಾಂಚ್ ಕಾನ್ಫಿಗರೇಶನ್'ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಪ್ರಯೋಗ (ಎ5-01) 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಪ್ರಯೋಗ (ಎ5-02) 2013ರ ಸೆಪ್ಟೆಂಬರ್ 15ರಂದು ನಡೆದಿದೆ. [ಅಗ್ನಿ 5 ವ್ಯಾಪ್ತಿಯಲ್ಲಿ ಇಡೀ ಚೀನಾ]
ಮಾಧ್ಯಮಕ್ಕೆ ಪ್ರವೇಶವಿರಲಿಲ್ಲ : ಕ್ಷಿಪಣಿ ಉಡಾವಣೆ ಮಾಡುವ ಸ್ಥಳಕ್ಕೆ ಪತ್ರಿಕಾ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ. "ಡಾ. ಅವಿನಾಶ್ ಅವರು ಯಾವುದೇ ವ್ಯಾಕುಲತೆ ಎದುರಿಸಲು ಸಿದ್ಧರಿರಲಿಲ್ಲ. ಕೇವಲ ಕ್ಷಿಪಣಿ ಉಡಾವಣೆ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದರು. ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಹೇಳಿಕೆಯನ್ನು ಕ್ಷಿಪಣಿ ಉಡಾವಣೆ ಮಾಡಿದ ನಂತರ ಅಥವಾ ಡಿಆರ್ಡಿಓದಿಂದ ನಿವೃತ್ತಿ ಪಡೆದ ನಂತರವೇ ನೀಡಲು ನಿರ್ಧರಿಸಿದ್ದರು" ಎಂದು ಡಾ. ಅವಿನಾಶ್ ಅವರ ಹತ್ತಿರದ ವ್ಯಕ್ತಿಯೋರ್ವರು ತಿಳಿಸಿದ್ದಾರೆ.
(ಲೇಖಕರು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಪತ್ರಕರ್ತರು. ಅವರು ಒನ್ಇಂಡಿಯಾದ ಸಲಹಾ ಸಂಪಾದಕ (ರಕ್ಷಣೆ)ರಾಗಿದ್ದಾರೆ. ಅವರು ಟ್ವೀಟ್ಟರ್ ಐಡಿ @writetake)