ಭಾರತ-ಚೀನಾ ಗಡಿ ಬಿಕ್ಕಟ್ಟು: ಪ್ರತಿಬಾರಿಯೂ ಅನುಕೂಲಕರ ಫಲಿತಾಂಶ ಸಿಗದು ಎಂದ ಸೇನಾ ಮುಖ್ಯಸ್ಥರು!
ನವದೆಹಲಿ, ಅಕ್ಟೋಬರ್ 19: "ಭಾರತ ಮತ್ತು ಚೀನಾ ನಡುವಿನ ಗಡಿ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಸೇನಾ ಮಾತುಕತೆಗಳಲ್ಲಿ ಭಾರತವು ಎಂದಿಗೂ ಅನುಕೂಲಕರ ಫಲಿತಾಂಶವನ್ನು ನಿರೀಕ್ಷಿಸಬಾರದು," ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವನೆ ಹೇಳಿದ್ದಾರೆ. ಆದರೆ ಉಭಯ ರಾಷ್ಟ್ರಗಳ ನಡುವಿನ ಸಂಧಾನ ಮಾತುಕತೆಗಳು ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
"ಭಾರತ-ಚೀನಾ ಗಡಿ ವಿಚಾರದಲ್ಲಿ 3 ರಿಂದ 4 ಪ್ರದೇಶಗಳಲ್ಲಿ ಘರ್ಷಣೆ ನಡೆಯುತ್ತಿದ್ದು ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. ಇನ್ನೊಂದು ಸುತ್ತಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವ ಖಚಿತತೆಯಿದೆ. ಆದರೆ ಸ್ಪಷ್ಟವಾಗಿ ಒಂದು ಅಥವಾ ಎರಡು ಸುತ್ತಿನ ಮಾತುಕತೆಗಳಲ್ಲಿ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ನಾನು ಸ್ಪಷ್ಟವಾಗಿ ಅಂಕಿ-ಅಂಶವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ನಾವು ಈ ವಿಷಯದಲ್ಲಿ ಮುಂದುವರಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ," ಎಂದು ನಾರವನೆ ತಿಳಿಸಿದ್ದಾರೆ.
ಲಡಾಖ್ ಗಡಿ ವಿವಾದ: ಚೀನಾಗೆ ಸೇನಾ ಮುಖ್ಯಸ್ಥರ ಖಡಕ್ ಸಂದೇಶ
ಪೂರ್ವ ಲಡಾಖ್ನ ಚುಶುಲ್-ಮೊಲ್ಡೊ ಗಡಿ ಕೇಂದ್ರದ ಚೀನಾದ ಭಾಗದಲ್ಲಿ ಕಳೆದ ಅಕ್ಟೋಬರ್ 10ರಂದು ಬೆಳಿಗ್ಗೆ 10:30ಕ್ಕೆ ಆರಂಭವಾಗಿ ಸಭೆಯು ಸಂಜೆ 7 ಗಂಟೆವರೆಗೂ ನಡೆಯಿತು. ಭಾರತೀಯ ನಿಯೋಗವನ್ನು ಲೆಹ್ ಮೂಲದ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ನೇತೃತ್ವದಲ್ಲಿ 13ನೇ ಕಾರ್ಪ್ ಕಮಾಂಡರ್ ಸಭೆ ನಡೆಸಲಾಯಿತು. ಈ ವೇಳೆ ವಿವಾದಿತ ಘರ್ಷಣೀಯ ಕೇಂದ್ರಗಳಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವ ಭಾರತದ ಪ್ರಸ್ತಾಪವನ್ನು ಚೀನಾ ತಳ್ಳಿಹಾಕಿತ್ತು.
"ಒಂದು ವರ್ಷದ ಹಿಂದಿದ್ದ ಪರಿಸ್ಥಿತಿ ಈಗಿಲ್ಲ"
ನವದೆಹಲಿಯಲ್ಲಿ ನಡೆದ ರಕ್ಷಣಾ ಸಮಾವೇಶದ ಸಂವಾದದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವನೆ ಮಾತನಾಡಿದರು. "ಪೂರ್ವ ಲಡಾಖ್ ಪ್ರದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಕಳೆದ ಒಂದು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ, ಇಂದಿನ ಸ್ಥಿತಿಯು ಸ್ಥಿರವಾಗಿದೆ," ಎಂದರು. ಭಾರತ ಮತ್ತು ಚೀನಾ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿವೆ ಮತ್ತು ಆ ಮಾತುಕತೆಯ ಪರಿಣಾಮವಾಗಿ ನಾವು ನ್ಯಾಯಯುತವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
"ಪ್ರತಿ ಬಾರಿ ಅನುಕೂಲಕರ ಫಲಿತಾಂಶ ನಿರೀಕ್ಷಿಸಬಾರದು"
"ಚೀನಾ ಸೇನೆಯ ಜೊತೆಗೆ ನಡೆಸುವ ಪ್ರತಿಯೊಂದು ಹಂತದ ಮಾತುಕತೆಯಲ್ಲೂ ಅನುಕೂಲಕರ ಫಲಿತಾಂಶವನ್ನು ನಿರೀಕ್ಷಿಸಬಾರದು. ಏಕೆಂದರೆ ಯಾವಾಗಲೂ ಒಮ್ಮತದ ಅಭಿಪ್ರಾಯ ಮೂಡಲು ಸಾಧ್ಯವಾಗುವುದಿಲ್ಲ, ಇಲ್ಲಿ ಕೆಲವು ವ್ಯತ್ಯಾಸಗಳು ಇದ್ದೇ ಇರುತ್ತವೆ ಎಂದು ಹೇಳುವುದಕ್ಕೆ ನಾನು ಬಯಸುತ್ತೇನೆ. ನಾವು ಮಾತನಾಡುತ್ತಿರುವವರೆಗೂ, ನಾವು ಆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮತ್ತು ಅಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಹತ್ತಿರವಾಗಲು ಸಾಧ್ಯವಾಗುತ್ತದೆ" ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಗಡಿ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿರುವ ಅಂಶವೇನು?
ಕಳೆದ 2020ರ ಮೇ ತಿಂಗಳಿನಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಗಡಿ ಪ್ರದೇಶದ ವಿಚಾರಕ್ಕೆ ಭಾರತ-ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದಿತ್ತು. ತದನಂತರ ಈ ವಿಷಯ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಯಿತು. ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಅಧಿಕ ಸಂಖ್ಯೆಯಲ್ಲಿ ಯೋಧರು ಎರಡೂ ಕಡೆಯ ಗಡಿಗೆ ಬಂದು ನಿಂತರು, ಉಭಯ ಗಡಿಗಳಲ್ಲಿ ಸೇನಾ ನಿಯೋಜನೆ ಕ್ರಮೇಣ ಹೆಚ್ಚಿತು. ಈ ಹಂತದಲ್ಲಿ ರಾಜಕೀಯ, ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದಲ್ಲಿ ಚೀನಾದೊಂದಿಗೆ ಸಂಧಾನ ಮಾತುಕತೆಗಳನ್ನು ನಡೆಸಲಾಗುತ್ತಿದೆ.
ತೃಪ್ತಿದಾಯಕ ಫಲಿತಾಂಶದ ನಿರೀಕ್ಷೆ ಹುಸಿಯಾಗುವುದಿಲ್ಲ
"ರಾಜಕೀಯ, ರಾಜತಾಂತ್ರಿಕ ಹಾಗೂ ಮಿಲಿಟರಿ ಹಂತದ ಸಂಧಾನ ಮಾತುಕತೆಗಳನ್ನು ಒಗ್ಗೂಡಿಸಿದ ಸಂದರ್ಭದಲ್ಲಿ ನಾವು ತೃಪ್ತಿದಾಯಕ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ತೃಪ್ತಿಕರ ಎಂದು ಹೇಳಿದಾಗ, ಅದು ಎರಡೂ ಕಡೆಗಳಿಗೆ ತೃಪ್ತಿಕರವಾಗಿರಬೇಕು. ಆದಷ್ಟು ಶೀಘ್ರದಲ್ಲಿ ಅಂಥದೊಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ದೃಢವಾದ ನಂಬಿಕೆಯಿದೆ," ಎಂದು ನಾರವನೆ ಹೇಳಿದ್ದಾರೆ. ಭಾರತೀಯ ಸೇನೆಯು ಒಂದು ಕ್ಷಣವೂ ತನ್ನ ಕಾವಲನ್ನು ಬಿಡುವುದಿಲ್ಲ ಅಥವಾ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತದ ಗಡಿ ರಕ್ಷಣೆಗೆ ನಾವು ಸದಾ ಸಿದ್ಧರು
"ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸಂಧಾನ ಮಾತುಕತೆ ಮತ್ತು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬುದು ನಮ್ಮ ಆಶಯ. ಆದರೆ ಅದು ಸಾಧ್ಯವಾಗದಿದ್ದರೆ ಮತ್ತು ಪರಿಸ್ಥಿತಿ ಬಲವಂತವಾದರೆ, ನಮ್ಮ ಗಡಿಗಳನ್ನು ರಕ್ಷಿಸಿಕೊಳ್ಳಲು ಮತ್ತು ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಯಾವಾಗಲೂ ಸಿದ್ಧರಿದ್ದೇವೆ," ಎಂದು ನಾರವನೆ ಹೇಳಿದ್ದಾರೆ. ಅದು ಕೇವಲ ಬೇಸಿಗೆ ತಿಂಗಳುಗಳಿಗೆ ಮಾತ್ರ ಸೀಮಿತವಾಗಿಲ್ಲ, 24*7 ನಮ್ಮ ಮೇಲಿನ ಗುರಿಗಳನ್ನು ನಾವು ಎದುರಿಸಲು ಸಿದ್ಧರಿರುತ್ತೇವೆ.
"ಪೂರ್ವ ಲಡಾಖ್ನಲ್ಲಿ ಎಲ್ಲ ರೀತಿ ಸವಾಲುಗಳಿಂದಾಗಿ ನಾವು ಬಹಳ ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪಡೆಗಳನ್ನು ಸಜ್ಜುಗೊಳಿಸಬೇಕಾಗಿತ್ತು. ಆದರೆ ಉತ್ತಮ ಸೇವೆಗಳು ಮತ್ತು ಸಹಕಾರದಿಂದ ನಾವು ಅದನ್ನು ಸಾಧಿಸಲು ಸಾಧ್ಯವಾಗಿದೆ," ಎಂದು ನಾರವನೆ ಹೇಳಿದ್ದಾರೆ.