ಭಾರತದ ಸಖತ್ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ ಪಾಕ್
ನವದೆಹಲಿ, ಮೇ 5: ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಸಾರ್ಕ್) ದೇಶಗಳ ಅನುಕೂಲಕ್ಕಾಗಿ ಇಸ್ರೋ ನಿರ್ಮಿಸಿರುವ ಸೌತ್ ಏಷ್ಯಾ ಸ್ಯಾಟಿಲೈಟ್ ನ ಉಡಾವಣೆಯು ಮೇ 5ರ ಸಂಜೆ ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.
ಸಾರ್ಕ್ ಒಕ್ಕೂಟದ ಸಹ ರಾಷ್ಟ್ರಗಳಾದ ನೇಪಾಳ, ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ರಾಷ್ಟ್ರಗಳು ಇದರ ನೆರವು ಪಡೆಯಲಿವೆ. ಆದರೆ, ಸಾರ್ಕ್ ಒಕ್ಕೂಟದ ಮತ್ತೊಂದು ಸದಸ್ಯ ರಾಷ್ಟ್ರವಾದ ಪಾಕಿಸ್ತಾನ ಈ ಉಪಗ್ರಹ ನೆರವು ಬೇಡವೆಂದು ಹಿಂದೆ ಸರಿದಿದೆ.
ಸಾರ್ಕ್ ರಾಷ್ಟ್ರಗಳ ಅಭಿವೃದ್ಧಿಯ ದೃಷ್ಟಿಯಿಂದ ಈ ಉಪಗ್ರಹವನ್ನು ತಯಾರಿಸಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. ಇಂಥದ್ದೊಂದು ಸಹಾಯದಿಂದ ದೂರ ಉಳಿದಿರುವ ಪಾಕಿಸ್ತಾನ ಒಂದು ಅಮೂಲ್ಯವಾದ ಸೌಲಭ್ಯದಿಂದ ವಂಚಿತವಾಗಿದೆಯೆಂದೇ ಹೇಳಬಹುದು ಎಂದು ರಾಜಕೀಯ ತಜ್ಞರ ಅಭಿಪ್ರಾಯ.
ಹಾಗಿದ್ದರೆ, ಈ ಉಪಗ್ರಹದ ವೈಶಿಷ್ಟ್ಯತೆಗಳೇನು, ಇದರ ಉಡಾವಣೆಯಿಂದ ಭಾರತಕ್ಕಾಗುವ ಲಾಭಗಳೇನು ಎಂಬುದನ್ನು ಇಲ್ಲಿ ನೋಡೋಣ...
ಮತ್ತೊಂದು ಸಾಧನೆ
ದಕ್ಷಿಣ ಏಷ್ಯಾ ಉಪಗ್ರಹವು 2,300 ಕೆ.ಜಿ. ತೂಕವಿದ್ದು, 12 ಸಂವಹನ ಸಾಮರ್ಥ್ಯದ ಟ್ರಾನ್ಸ್ ಪಾಂಡರ್ ಗಳನ್ನು ಇದು ಹೊಂದಿದೆ. ಇದೇ ಫೆಬ್ರವರಿಯಲ್ಲಿ 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದ ಇಸ್ರೋಗೆ ಇದು ಮತ್ತೊಂದು ಹೆಗ್ಗಳಿಕೆ ತರಲಿದೆ.
ಸಂಹವಕ್ಕೆ ನಾಂದಿ
ಈ ಉಪಗ್ರಹವು, ಸಾರ್ಕ್ ರಾಷ್ಟ್ರಗಳ (ಪಾಕಿಸ್ತಾನ ಹೊರತುಪಡಿಸಿ) ನಡುವೆ ಹೊಸ ಸಂವಹನ (ಕಮ್ಯೂನಿಕೇಷನ್) ತಂತ್ರಜ್ಞಾನದ ಹೊಸ ಅಧ್ಯಾಯ ಆರಂಭಿಸಲಿದ್ದು, ಆಯಾ ದೇಶಗಳಲ್ಲಿನ ಆಂತರಿಕ ಸಂಹವನಕ್ಕೂ ಹೊಸ ನಾಂದಿ ಹಾಡಲಿದೆ.
ಮುನ್ನೆಚ್ಚರಿಕೆ ಸಂದೇಶ ನೀಡುವ ಉಪಗ್ರಹ
ಈ ನೂತನ ಉಪಗ್ರಹವು, ಸಾರ್ಕ್ ರಾಷ್ಟ್ರಗಳ ದೇಶಗಳಲ್ಲಿನ ನೈಸರ್ಗಿಕ ಪ್ರಕೋಪಗಳ ಮೇಲೆ ಹದ್ದಿನ ಕಣ್ಣಿಡಲಿದ್ದು, ಮುಂಬರುವ ಅಗಾಧ ಮಳೆ, ಬಿರುಗಾಳಿ, ಭೂಕಂಪ, ಚಂಡಮಾರುತ, ಉಷ್ಣ ಹವೆ, ಸುನಾಮಿ, ಭೂ ಕುಸಿತ, ಪ್ರವಾಹಗಳ ಬಗ್ಗೆ ಕೆಲ ದಿನಗಳ ಅಥವಾ ಕೆಲ ಗಂಟೆಗಳ ಮುನ್ನವೇ ಮಾಹಿತಿ ರವಾನಿಸುತ್ತದೆ. ಹಲವಾರು ಪ್ರಾಕೃತಿಕ ವಿಕೋಪಗಳಿಗೆ ಪದೇ ಪದೇ ತುತ್ತಾಗುವ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ ಗೆ ಈ ಉಪಗ್ರಹ ವರದಾನವಾಗಿ ಪರಿಣಮಿಸಲಿದೆ.
ಸಾರ್ಕ್ ದೇಶಗಳು ಭಾರತಕ್ಕೆ ಚಿರಋಣಿ
ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ, ಸದ್ಯಕ್ಕೆ ಭಾರತ ಹಾಗೂ ಚೀನಾ ನಡುವೆ ತುರುಸಿನ ಸ್ಪರ್ಧೆಯಿದೆ. 2011ರಲ್ಲಿ ಚೀನಾ ಸರ್ಕಾರ, ಪಾಕಿಸ್ತಾನದೊಂದಿಗೆ ತನ್ನದೇ ಆದ ಸ್ವಂತ ಉಪಗ್ರಹವನ್ನು ಉಡಾವಣೆ ಮಾಡಿತ್ತು. 2012ರಲ್ಲಿ ಶ್ರೀಲಂಕಾ ಜತೆಗೂಡಿ ಮತ್ತೊಂದು ಉಪಗ್ರಹವನ್ನು ಅದು ಹಾರಿಬಿಟ್ಟಿತ್ತು. ಆದರೆ, ಈಗ ಭಾರತವು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶಗಳಿಗೂ ನೆರವಾಗುವಂತೆ ಉಪಗ್ರಹವನ್ನು ತಯಾರಿಸಿದೆ. ಇದು ಭಾರತದ ಘನತೆಯನ್ನು ಎತ್ತಿ ಹಿಡಿಯಲಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮತ್ತೊಂದು ಸಾಧನೆಗೂ ಕಾರಣವಾಗಲಿದೆ.
ಅದು ಭೀತಿಯೋ, ಒಣ ಜಂಭವೋ ಗೊತ್ತಿಲ್ಲ!
ಇಷ್ಟೆಲ್ಲಾ ವೈಶಿಷ್ಟ್ಯಗಳಿದ್ದೂ ಈ ಉಪಗ್ರಹದ ಪ್ರಯೋಜನವನ್ನು ಪಡೆಯಲು ಪಾಕಿಸ್ತಾನ ಹಿಂದೇಟು ಹಾಕಿದ್ದೇಕೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ಭಾರತವು ಉಪಗ್ರಹದ ನೆರವು ನೀಡುವ ನೆಪದಲ್ಲಿ ತನ್ನ ಮೇಲೆ ಎಲ್ಲಿ ಗೂಢಾಚಾರಿಕೆ ಮಾಡುತ್ತದೋ ಎಂಬ ಆತಂಕ ಪಾಕಿಸ್ತಾನದ್ದಾಗಿರಬೇಕು. ಅಥವಾ ಭಾರತದ ಈ ಸೌಲಭ್ಯವನ್ನು ಉಪಯೋಗಿಸಿಕೊಂಡಲ್ಲಿ ತಾನು ಮುಂದೆ ಭಾರತದ ಮುಲಾಜಿಗೆ ಬೀಳಬೇಕಾಗುತ್ತದೆ ಎಂಬ ಒಣ ಜಂಭವೂ ಪಾಕಿಸ್ತಾನಕ್ಕೆ ಇರಬಹುದು. ಹಾಗಾಗಿಯೇ ಅದು ಭಾರತದ ಈ ನೆರವನ್ನು ಪಡೆಯಲು ನಿರಾಕರಿಸಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.