ವೀಸಾ ಇಲ್ಲದೆ ಕರ್ತರ್ ಪುರ್ ಗೆ ತೆರಳಲು ಅವಕಾಶ ನೀಡಬೇಕೆಂದ ಭಾರತ
ನವದೆಹಲಿ, ಮಾರ್ಚ್ 14: ಪಾಕಿಸ್ತಾನದ ಕರ್ತರ್ ಪುರ್ ನಲ್ಲಿರುವ ಗುರ್ ದ್ವಾರಕ್ಕೆ ನಿತ್ಯವೂ ಐದು ಸಾವಿರ ಮಂದಿಗೆ ವೀಸಾ ಇಲ್ಲದಂತೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಗುರುವಾರದಂದು ಭಾರತವು ಕರ್ತರ್ ಪುರ್ ಸಭೆ ವೇಳೆ ಕೇಳಿದೆ. ಪಾಕಿಸ್ತಾನ ನಿಯೋಗದ ಜತೆಗೆ ಇದ್ದ ಸಭೆ ವೇಳೆ ಈ ವಿಚಾರವನ್ನು ತಿಳಿಸಲಾಯಿತು.
ಪಂಜಾಬ್ ನ ಗುರ್ ದಾಸ್ ಪುರ್ ಮತ್ತು ಗಡಿಯಾಚೆ ಇರುವ ಕರ್ತರ್ ಪುರ್ ಸಾಹಿಬ್ ರಸ್ತೆ ಉದ್ಘಾಟನೆಯ ಯೋಜನೆ ಬಗ್ಗೆ ಚರ್ಚಿಸಲು ಈ ಸಭೆ ನಿಗದಿ ಆಗಿತ್ತು. ಕರ್ತರ್ ಪುರ್ ಗೆ ಪಾದಯಾತ್ರೆಯಲ್ಲಿ ತೆರಳಲು ಅವಕಾಶ ನೀಡಬೇಕು ಮತ್ತು ವಾರದ ಏಳು ದಿನವೂ ಈ ಕಾರಿಡಾರ್ ತೆರೆದಿರಬೇಕು ಎಂದು ಭಾರತ ಕೇಳಿದೆ.
ಮಾಧ್ಯಮದವರ ಜತೆ ಮಾತನಾಡಿದ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್ ಸಿಎಲ್ ದಾಸ್, ಈ ರಸ್ತೆಯಲ್ಲಿ ಕರ್ತರ್ ಪುರ್ ಗುರ್ ದ್ವಾರಕ್ಕೆ ಸಾಗಲು ವೀಸಾ ಕೇಳಬಾರದು. ಅಷ್ಟೇ ಅಲ್ಲ ಯಾವುದೇ ಹೆಚ್ಚುವರಿ ದಾಖಲಾತಿ ಅಥವಾ ನಿಯಮಗಳು ಇರಬಾರದು ಎಂದಿದ್ದಾರೆ.
ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ
ಪುಲ್ವಾಮಾ ಉಗ್ರ ದಾಳಿ ಹಾಗೂ ಆ ನಂತರ ಭಾರತೀಯ ವಾಯು ಸೇನೆಯಿಂದ ನಡೆದ ದಾಳಿಯಾದ ಮೇಲೆ ಭಾರತ-ಪಾಕಿಸ್ತಾನದ ಮಧ್ಯದ ಮೊದಲ ಮಾತುಕತೆ ಇದು. ಭಾರತೀಯರು ಹಾಗೂ ಭಾರತದ ಮೂಲದವರಿಗೆ ಈ ಗುರ್ ದ್ವಾರಕ್ಕೆ ತೆರಳಲು ಅವಕಾಶ ಇರಬೇಕು ಎಂದು ದಾಸ್ ಹೇಳಿದ್ದಾರೆ.
ವಾರದ ಏಳು ದಿನವೂ ಪ್ರವೇಶ ಇರಬೇಕು ಎಂದು ಕೇಳಿದ್ದೇವೆ ಎಂದು ದಾಸ್ ತಿಳಿಸಿದ್ದಾರೆ. ಅಂದಹಾಗೆ ಭಾರತ ಹಾಗೂ ಪಾಕಿಸ್ತಾನ ನಿಯೋಗದ ಮಧ್ಯೆದ ಭೇಟಿ ಅಟ್ಟಾರಿ- ವಾಘಾ ಗಡಿಯಲ್ಲಿ ನಡೆದಿದೆ. ಸಿಖ್ ಧರ್ಮದ ಸಂಸ್ಥಾಪಕರಾದ ಗುರು ನಾನಕ್ ದೇವ್ ತಮ್ಮ ಜೀವನ ಕೊನೆ ವರ್ಷಗಳನ್ನು ಕಳೆದಿದ್ದು ಕರ್ತರ್ ಪುರ್ ಗುರ್ ದ್ವಾರದಲ್ಲಿ.