SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?
ಇಡೀ ವಿಶ್ವಕ್ಕೆ ವಿಶ್ವವೇ ಇದೀಗ ನೊವಲ್ ಕೊರೊನಾ ವೈರಸ್ ನಿಂದ ಬೆಚ್ಚಿ ಬಿದ್ದಿದೆ. ನೆಮ್ಮದಿಯಾಗಿ ಉಸಿರಾಡುವುದಕ್ಕೂ ಜನ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಇದೀಗ ದಕ್ಷಿಣ ಕೊರಿಯಾ, ಇಟಲಿ, ಇರಾನ್, ಜರ್ಮನಿ, ಫ್ರಾನ್ಸ್, ಜಪಾನ್, ಅಮೇರಿಕಾ, ಯುಕೆ, ಸಿಂಗಾಪುರ, ಮಲೇಶಿಯಾ, ಆಸ್ಟ್ರೇಲಿಯಾ, ಕುವೈತ್, ನಾರ್ವೆ ಸೇರಿದಂತೆ ಹಲವು ದೇಶಗಳಿಗೆ ಹಬ್ಬಿದೆ.
ಚೀನಾ ಒಂದರಲ್ಲೇ 3000ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ 3400ಕ್ಕೂ ಹೆಚ್ಚು ಜನ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಹಲವು ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನೊವಲ್ ಕೊರೊನಾ ವೈರಸ್ ಭಾರತಕ್ಕೂ ವಕ್ಕರಿಸಿದೆ. ಇಟಲಿಯಿಂದ ಭಾರತಕ್ಕೆ ಬಂದಿಳಿದ ಪ್ರವಾಸಿಗರನ್ನೂ ಸೇರಿಸಿ ಇಲ್ಲಿಯವರೆಗೂ 33 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಡೆಡ್ಲಿ ಕೊರೊನಾದಿಂದ ಭಾರತದಲ್ಲಿ ಈವರೆಗೆ ಯಾರೂ ಮೃತಪಟ್ಟಿಲ್ಲ. ಹಾಗ್ನೋಡಿದ್ರೆ, ಕೇರಳದಲ್ಲಿ ಕೊರೊನಾ ಸೋಂಕು ತಗುಲಿದ್ದ ಮೂರು ಮಂದಿ ಗುಣಮುಖರಾಗಿದ್ದಾರೆ.
'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!
ಚೀನಾ ಸೇರಿದಂತೆ ವಿದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ತನ್ನ ಪ್ರತಾಪವನ್ನ ಭಾರತದಲ್ಲಿ ಮೆರೆಯುತ್ತಿಲ್ಲ. ಈ ಹಿಂದೆಯೂ SARS ಮತ್ತು MERS ಮಹಾಮಾರಿಗಳಿಗೂ ಭಾರತ ಬಗ್ಗಿರಲಿಲ್ಲ. ಈಗಲೂ ಅಷ್ಟೇ ಕೊರೊನಾ ಎಂಬ ಗುಮ್ಮ ಭಾರತವನ್ನು ಅಲುಗಾಡಿಸುವುದು ಅಷ್ಟು ಸುಲಭವೇನಲ್ಲ.!
ರಕ್ಷೆ ನೀಡುತ್ತಿದೆ ಭಾರತದ ವಾತಾವರಣ
ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿ ಇದೆ. ಜೊತೆಗೆ ಹೆಚ್ಚು ಜನಸಾಂದ್ರತೆಯುಳ್ಳ ದೇಶ ಕೂಡ ನಮ್ಮದೇ. ಮಲೇಶಿಯಾ, ಸಿಂಗಾಪುರದಂತಹ ದೇಶಗಳಿಗೆ ಹೋಲಿಸಿದರೆ ಭಾರತ ಅಷ್ಟು ಸ್ವಚ್ಛವಾಗಿಲ್ಲ. ಹಾಗೇ, ಆರೋಗ್ಯಕರ ಅಭ್ಯಾಸಗಳನ್ನು ಇಲ್ಲಿನ ಹೆಚ್ಚು ಮಂದಿ ಪಾಲಿಸುವುದಿಲ್ಲ. ಹೀಗಿದ್ದರೂ, ಕೊರೊನಾ ವೈರಸ್ ಭಾರತದಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಇದಕ್ಕೆ ಕಾರಣ 'ಭಾರತದ ವಾತಾವರಣ' ಎನ್ನುತ್ತಾರೆ ತಜ್ಞರು.
ಭಾರತದಲ್ಲಿ ಉಷ್ಣಾಂಶ ಆರ್ದತೆ ಹೆಚ್ಚು
ಕೊರೊನಾ ಎಂಬ ಮಾರಕ ವೈರಸ್ ನಿಂದ ಭಾರತ ಹೆಚ್ಚು ಸುರಕ್ಷಿತವಾಗಿದೆ ಅಂದ್ರೆ, ಅದಕ್ಕೆ ಬಹುಮುಖ್ಯ ಕಾರಣ ಇಲ್ಲಿನ ವಾತಾವರಣ ಎಂದು ಭಾರತದ ಹಾರ್ಟ್ ಕೇರ್ ಫೌಂಡೇಶನ್ ನ ಅಧ್ಯಕ್ಷ ಕೆ.ಕೆ.ಅಗರ್ವಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಕೊರೊನಾ ಹಬ್ಬಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉಷ್ಣಾಂಶ ಮತ್ತು ಆರ್ದತೆ ಹೆಚ್ಚಿದೆ. ಉಷ್ಣಾಂಶ ಮತ್ತು ಆರ್ದತೆ ಜಾಸ್ತಿ ಇರುವುದರಿಂದ ಕೊರೊನಾ ವೈರಸ್ ಹೆಚ್ಚು ಹರಡುತ್ತಿಲ್ಲ. ಕಡಿಮೆ ತಾಪಮಾನ ಇರುವ ಕಡೆ ವೈರಸ್ ಪ್ರಭಾಸ ಜಾಸ್ತಿ ಎಂಬುದು ಕೆ.ಕೆ.ಅಗರ್ವಾಲ್ ರವರ ವಾದ.
ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್
ವೈರಾಣು ಹಬ್ಬಲು ಪರಿಸರ ಸಹಕಾರಿ ಆಗಿಲ್ಲ!
ಯಾವುದೇ ವೈರಸ್ ಹರಡಲು ಮೂರು ಅಂಶಗಳು ಕಾರಣವಾಗುತ್ತದೆ. ಅವುಗಳಲ್ಲಿ ಮೊದಲನೇಯದ್ದು ವೈರಸ್, ಎರಡನೇಯದ್ದು ಸೋಂಕು ತಗುಲಿರುವ ವ್ಯಕ್ತಿ ಮತ್ತು ಮೂರನೇಯದ್ದು ಪರಿಸರ. ವೈರಸ್ ಮತ್ತು ಸೋಂಕು ತಗುಲಿರುವ ವ್ಯಕ್ತಿ ಭಾರತದಲ್ಲಿ ಇದ್ದರೂ, ವೈರಸ್ ಹಬ್ಬಲು ಇಲ್ಲಿನ ಪರಿಸರ ಸಹಕಾರಿ ಆಗಿಲ್ಲ ಎಂದು ಆಂತರಿಕ ಔಷಧಿ ಸಲಹೆಗಾರ ಅರಿಂದಮ್ ಬಿಸ್ವಾಸ್ ಹೇಳಿದ್ದಾರೆ.
ಬೇಸಿಗೆ ಶುರು ಆಯ್ತಲ್ಲ
ಹೇಗಿದ್ದರೂ, ಭಾರತದಲ್ಲೀಗ ಬೇಸಿಗೆ ಶುರುವಾಗಿದೆ. ಬಿಸಿಲಿನಿಂದಾಗಿ ನೆತ್ತಿ ಆಗಲೇ ಸುಡುತ್ತಿದೆ. ಹೀಗಾಗಿ, ವಿದೇಶಗಳಲ್ಲಿ ಕೊರೊನಾ ಭೂತ ಕಾಡಿದಂತೆ, ಭಾರತದಲ್ಲಿ ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಮಹಾಮಾರಿಗಳಿಗೆ ಭಾರತ ಬಗ್ಗಲಿಲ್ಲ
2003 ರಲ್ಲಿ ಕೊರೊನಾ ವೈರಸ್ ನಿಂದ ಸಾರ್ಸ್ (SARS) ಎಂಬ ಮಹಾಮಾರಿ ಇದೇ ಬೀಜಿಂಗ್ (ಚೀನಾ), ಹಾಂಗ್ ಕಾಂಗ್, ಟೊರೊಂಟೋ, ಸಿಂಗಾಪುರದಲ್ಲಿ ಸಾವಿರಾರು ಮಂದಿಯನ್ನು ಬಲಿಪಡೆದಿತ್ತು. ಇನ್ನೂ ವಿಶ್ವದ ಹಲವೆಡೆ ಎಬೋಲಾ, ಎಲ್ಲೋ ಫೀವರ್, ಮೆರ್ಸ್ (MERS) ನಿಂದಾಗಿ ಹಲವು ಜನ ಸಾವನ್ನಪ್ಪಿದ್ದರು. ಆದ್ರೆ, ಈ ಯಾವ ಮಾರಕ ರೋಗಗಳೂ ಭಾರತದಲ್ಲಿ ಆಪತ್ತು ತರಲಿಲ್ಲ. ಭಾರತದ ನಿಸರ್ಗವೇ ಭಾರತೀಯರನ್ನು ರಕ್ಷಿಸುತ್ತಿದೆ ಎನ್ನಲಾಗಿದೆ.
ಚೀನಾದಲ್ಲಿ ಏಕರೂಪ ಜನಾಂಗ
ಇನ್ನೂ ಅಂದಿನ ಸಾರ್ಸ್ ಮತ್ತು ಇಂದಿನ ಕೋವಿಡ್19 (ಕೊರೊನಾ ವೈರಸ್) ಚೀನಿಯರನ್ನು ಹೈರಾಣುಗೊಳಿಸುತ್ತಿರುವುದರ ಹಿಂದೆ ಒಂದು ಕಟು ಸತ್ಯ ಅಡಗಿದೆ. ಚೀನಾದಲ್ಲಿ ಜನಾಂಗೀಯ ವೈವಿಧ್ಯ ಇಲ್ಲವೇ ಇಲ್ಲ. ಏಕರೂಪ ಜನಾಂಗ ಹೊಂದಿರುವ ಚೀನಿಯರಲ್ಲಿ ವೈರಾಣು ಮತ್ತು ರೋಗ ಬಹುಬೇಗ ವ್ಯಾಪಿಸುತ್ತದೆ.
ಜನಾಂಗ ವ್ಯವಸ್ಥೆಯಲ್ಲಿ ಭಾರತ ಲಕ್ಕಿ
ಜನಾಂಗೀಯ ವ್ಯವಸ್ಥೆ ಲೆಕ್ಕಾಚಾರದಲ್ಲೂ ಭಾರತ ತುಂಬಾನೇ ಲಕ್ಕಿ. ಭಾರತದ ಉದ್ದಗಲಕ್ಕೂ ತರಹೇವಾರಿ ಜನ ಇದ್ದಾರೆ. ಹೀಗಾಗಿ, ಕೊರೊನಾ ವೈರಸ್ ಅಷ್ಟು ಸುಲಭವಾಗಿ ಭಾರತದಲ್ಲಿ ಹರಡುತ್ತಿಲ್ಲ.
ನಿರ್ಲಕ್ಷ್ಯ ಮಾಡಬೇಡಿ
ವೈರಾಣು ಹಬ್ಬದೇ ಇರುವಂತೆ ಭಾರತದ ವಾತಾವರಣ ನಮ್ಮನ್ನ ಕಾಪಾಡಬಹುದು. ಹಾಗಂದ ಮಾತ್ರಕ್ಕೆ ಕೊರೊನಾ ವೈರಸ್ ಬಗ್ಗೆ ಭಾರತೀಯರು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದು ವೇಳೆ ಕೊರೊನಾ ವೈರಸ್ ಭಾರತದಲ್ಲಿ ಹರಡಿದರೆ, ಮಿಕ್ಕೆಲ್ಲಾ ದೇಶಗಳಿಗಿಂತ ಹೆಚ್ಚು ಆಪತ್ತು ಭಾರತಕ್ಕೆ ಕಾದಿದೆ. ಯಾಕಂದ್ರೆ, ಭಾರತದಲ್ಲಿ ಜನಸಾಂದ್ರತೆ ಮತ್ತು ಆಂತರಿಕ ವಲಸೆ ಹೆಚ್ಚಿದೆ. ಹೀಗಾಗಿ ಶುಚಿತ್ವಕ್ಕೆ ಆದ್ಯತೆ ಕೊಡದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮಗೂ ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅದನ್ನ ನಿರ್ಲಕ್ಷ್ಯ ಮಾಡದೆ ಕೂಡಲೆ ಚಿಕಿತ್ಸೆ ಪಡೆಯಿರಿ. ಮಾರಕ ವೈರಾಣು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಎಚ್ಚರ ವಹಿಸಿ.