ಕೊರೊನಾವೈರಸ್ ಆರ್-ಮೌಲ್ಯದ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಅಪಾಯ: ಏಮ್ಸ್ ಮುಖ್ಯಸ್ಥ
ನವದೆಹಲಿ, ಆಗಸ್ಟ್ 1: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಶುರುವಾಗಿದೆ ಎನ್ನುವ ಆತಂಕಕಾರಿ ಬೆಳವಣಿಗೆ ಮಧ್ಯೆ ಆರ್-ಮೌಲ್ಯ ಹೆಚ್ಚಾಗುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.
ದೇಶದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ. ಆರ್-ಮೌಲ್ಯವು 0.96 ನಿಂದ ಆರಂಭಗೊಂಡು 1ಕ್ಕಿಂತ ಹೆಚ್ಚಾಗುತ್ತಿದ್ದು ಕಾಳಜಿ ವಹಿಸುವಂತಾ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಅರ್ಥ ಒಬ್ಬ ಕೊರೊನಾವೈರಸ್ ಸೋಂಕಿತ ವ್ಯಕ್ತಿಯಿಂದ ಬೇರೆಯವರಿಗೆ ಸೋಂಕು ಹರಡುವ ಪ್ರಮಾಣವು ಹೆಚ್ಚಾಗಿದೆ ಎಂದು ಅರ್ಥೈಸಲಾಗಿದೆ. "ಭಾರತದ ಯಾವ ಪ್ರದೇಶಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆಯೋ ಅಲ್ಲಿ ಕಡ್ಡಾಯವಾಗಿ ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್ ಎಂಬ ತಂತ್ರವನ್ನು ಅನುಸರಿಸಬೇಕಿದೆ. ಆ ಮೂಲಕ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವುದಕ್ಕೆ ಸಾಧ್ಯವಾಗುತ್ತದೆ," ಎಂದು ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಉತ್ತರಿಸಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಏರಿಕೆ ಸೂಚನೆ ನೀಡುತ್ತಿದೆಯಾ ಆರ್-ಮೌಲ್ಯ!?
ಭಾರತದಲ್ಲಿ ಆರ್-ಮೌಲ್ಯವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ವೇಗದ ಸೂಚ್ಯಂಕವಾಗಿದೆ. ಆರ್-ಮೌಲ್ಯದ ಮೇಲೆ ಸೋಂಕು ಹರಡುವಿಕೆ ಪ್ರಮಾಣವನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಹಾಗಿದ್ದಲ್ಲಿ ಈ ಆರ್ ಮೌಲ್ಯ ಮತ್ತು ಅದರಿಂದ ಸೋಂಕಿತ ಪ್ರಕರಣಗಳ ಏರಿಳಿತ ಹೇಗೆ ಸಂಭವಿಸುತ್ತದೆ ಎನ್ನುವುದರ ಕುರಿತು ಒಂದು ವರದಿ.
ದೇಶದಲ್ಲಿ ಮೂರು ವಾರಗಳ ನಂತರ ಹೊಸ ದಾಖಲೆ
ಕಳೆದ ಶುಕ್ರವಾರ ಮೂರು ವಾರಗಳಲ್ಲೇ ಮೊದಲ ಬಾರಿಗೆ ಒಂದೇ ದಿನ 44,230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು ಹೊಸ ದಾಖಲೆಯಾಗಿತ್ತು. ದೇಶದ ಆರ್-ಮೌಲ್ಯವು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆ ವೇಗ ಎಷ್ಟರ ಮಟ್ಟಿಗೆ ಸ್ಥಿರವಾಗಿ ಹೆಚ್ಚಳವಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳ ಏರಿಕೆಗೆ ಇದೇ ಆರ್-ಮೌಲ್ಯವು ಕೈಗನ್ನಡಿಯಂತೆ ಗೋಚರಿಸುತ್ತಿದೆ. ಚೆನ್ನೈನಲ್ಲಿರುವ ಗಣಿತ ವಿಜ್ಞಾನ ಸಂಸ್ಥೆಯ ವಿಶ್ಲೇಷಕರು ಚೆನ್ನೈ, ಮುಂಬೈ ಮತ್ತು ದೆಹಲಿ ಸೇರಿದಂತೆ ಮೆಟ್ರೋ ಸಿಟಿಗಳಲ್ಲಿನ ಆರ್-ಮೌಲ್ಯದ ಬಗ್ಗೆ ವಿಶ್ಲೇಷಿಸಲಾಗುತ್ತಿದೆ.
ಆರ್-ಮೌಲ್ಯದ ಕುರಿತು ಮಾಹಿತಿ
ಒಂದು ವೇಳೆ ಆರ್-ಮೌಲ್ಯವು 0.95 ಎಂಬುದರ ಅರ್ಥವು ಹೀಗಿದೆ. ಸರಾಸರಿ 100 ಮಂದಿ ಕೊರೊನಾವೈರಸ್ ಸೋಂಕಿತರಲ್ಲಿ 95 ಮಂದಿ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುತ್ತಾರೆ. ಆರ್-ಮೌಲ್ಯವು 1ಕ್ಕಿಂತ ಕಡಿಮೆಯಾಗಿದ್ದರೆ, ಹೊಸದಾಗಿ ಸೋಂಕಿತರ ಸಂಖ್ಯೆಯು ಈ ಹಿಂದಿನ ಹೊಸ ಸೋಂಕಿತರ ಸಂಖ್ಯೆಗಿಂತ ಇಳಿಮುಖವಾಗಿರುತ್ತದೆ. ಆರ್-ಮೌಲ್ಯ ಕಡಿಮೆಯಾಗಿದೆ ಹಾಗೂ ಸೋಂಕಿನ ಹರಡುವಿಕೆ ಪ್ರಮಾಣ ಕ್ಷೀಣಿಸುತ್ತಿದೆ ಎಂದರ್ಥ. ಅದೇ ರೀತಿ ಆರ್-ಮೌಲ್ಯವು 1ಕ್ಕಿಂತ ಹೆಚ್ಚಾಗಿದ್ದರೆ, ನಂತರದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನೇ ಸಾಂಕ್ರಾಮಿಕ ಹಂತ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಪ್ರತಿನಿತ್ಯ ವರದಿಯಾಗುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೇ ಆಗಿರುತ್ತದೆ. ಯಾವಾಗ ಸಕ್ರಿಯ ಪ್ರಕರಣಗಳ ಸಂಖ್ಯೆಯು ನೂರರ ಅಂತರದಲ್ಲಿದ್ದು, ಆರ್-ಮೌಲ್ಯ 1ರ ಸಮೀಪದಲ್ಲಿದ್ದರೆ ಸುಲಭವಾಗಿ ಸೋಂಕನ್ನು ನಿಯಂತ್ರಿಸಬಹುದು," ಪಿಟಿಐ ತಂಡದ ಗಣಿತ ವಿಜ್ಞಾನ ಸಂಸ್ಥೆಯ ಸೀತಾಭ್ರಾ ಸಿನ್ಹಾ ಹೇಳಿದ್ದಾರೆ.
ಆರ್-ಮೌಲ್ಯದ ಬಗ್ಗೆ ವಿವರಣೆ ನೀಡಿದ ಡಾ. ಗುಲೇರಿಯಾ
"ಸಿಡುಬು ಮತ್ತು ದಡಾರದ ಕಾಲದಲ್ಲಿ ಈ ಆರ್-ಮೌಲ್ಯವನ್ನು ಬಳಸಲಾಗುತ್ತಿದ್ದು, ಅಂದಿನ ಮೌಲ್ಯ 8 ಅಥವಾ ಅದಕ್ಕಿಂತ ಹೆಚ್ಚಾಗಿತ್ತು. ಅದರ ಅರ್ಥ ಅಂದು ಒಬ್ಬ ಸೋಂಕಿತ ವ್ಯಕ್ತಿಯಿಂದ ಕನಿಷ್ಠ 8 ಜನರಿಗೆ ಸೋಂಕು ಹರಡುತ್ತಿತ್ತು. ಆದರೆ ಕೊರೊನಾವೈರಸ್ ಸೋಂಕು ತೀವ್ರವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ನಾವು ಅದನ್ನು ಎದುರಿಸಿದ್ದೇವೆ. ಏಕೆಂದರೆ ಇಡೀ ಕುಟುಂಬದ ಸದಸ್ಯರು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿತ್ತು. ಸಿಡುಬಿನ ಕಾಲದಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಅದೇ ರೀತಿಯ ಒಬ್ಬ ವ್ಯಕ್ತಿಗೆ ಡೆಲ್ಟಾ ರೂಪಾಂತರ ವೈರಸ್ ಸೋಂಕು ಅಂಟಿಕೊಂಡರೆ ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ಹರಡುವ ಸ್ಥಿತಿಯಿದೆ," ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
ದೇಶದಲ್ಲಿ ಆರ್-ಮೌಲ್ಯದ ಪ್ರಮಾಣ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ಹೆಚ್ಚಾಗಿದ್ದ ಮಾರ್ಚ್ 9, ಏಪ್ರಿಲ್ 21ರ ಅವಧಿಯಲ್ಲಿ ದೇಶದ ಆರ್-ಮೌಲ್ಯವು 1.37ರಷ್ಟಿದೆ. ಏಪ್ರಿಲ್ 24ರಿಂದ ಮೇ 1ರ ಅವಧಿಯಲ್ಲಿ ಈ ಪ್ರಮಾಣವು 1.18ಕ್ಕೆ ಇಳಿಕೆಯಾಯಿತು. ಏಪ್ರಿಲ್ 29 ರಿಂದ ಮೇ 7ರ ಅವಧಿಯಲ್ಲಿ ಆರ್-ಮೌಲ್ಯವು 1.1ರ ಅಂತರದಲ್ಲಿದ್ದು ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಮೇ 9 ಮತ್ತು 11ರ ಮಧ್ಯದಲ್ಲಿ ಆರ್-ಮೌಲ್ಯ 0.98ರಷ್ಟಿತ್ತು. ಮೇ 14ರಿಂದ ಮೇ 30ರ ಸಮಯದಲ್ಲಿ ಅದು 0.88ಕ್ಕೆ ಇಳಿಕೆಯಾಯಿತು. ಮೇ 15 ರಿಂದ ಜೂನ್ 26ರ ಅವಧಿಯಲ್ಲಿ ಆರ್- ಮೌಲ್ಯವು 0.78ರಷ್ಟಿದೆ. ಜೂನ್ 20 ರಿಂದ ಜುಲೈ 7ರ ಅವಧಿಯಲ್ಲಿ 0.88ರಷ್ಟಿದ್ದು, ಜುಲೈ 3ರಿಂದ ಜುಲೈ 22ರ ಅವಧಿಯಲ್ಲಿ 0.95ರಷ್ಟಿದೆ.
ಕೇರಳದಲ್ಲಿ ಹೆಚ್ಚುತ್ತಿರುವ ಕೊವಿಡ್-19 ಹಾವಳಿ
"ಭಾರತದಲ್ಲೇ ಅತಿಹೆಚ್ಚು ಕೊರೊನಾವೈರಸ್ ಹೊಸ ಸೋಂಕಿತ ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಸೋಂಕಿನ ಹೆಚ್ಚಳಕ್ಕೆ ಕಾರಣವೇನು ಎಂಬುದರ ಬಗ್ಗೆ ಮೌಲ್ಯಮಾಪನ ಮಾಡುವ ಅಗತ್ಯವಿದೆ. ಆರಂಭದಿಂದಲೂ ಕೊವಿಡ್-19 ಸೋಂಕಿನ ನಿರ್ವಹಣೆ ಮತ್ತು ನಿಯಂತ್ರಿಸುವಲ್ಲಿ ಕೇರಳ ಇತರರಿಗೆ ಮಾದರಿ ಎನಿಸಿದೆ. ಸಮರೋಪಾದಿಯಲ್ಲಿ ಲಸಿಕೆ ವಿತರಣೆಯನ್ನೂ ಮಾಡಲಾಗಿದೆ. ಅದಾಗ್ಯೂ, ಇತರೆ ಭಾಗಗಳಿಗೆ ಹೋಲಿಸಿದರೆ ಕೇರಳದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಮೌಲ್ಯಮಾಪನ ಮಾಡಬೇಕಾಗಿದೆ. ಕೊರೊನಾವೈರಸ್ ಸಂಖ್ಯೆ ಏರಿಕೆ ಹಿಂದೆ ರೂಪಾಂತರ ತಳಿಗಳು ಕಾರಣವಾಗಿದೆಯೇ ಅಥವಾ ಕೊವಿಡ್-19 ನಿಯಮ ಮತ್ತು ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಪಾಲಿಸಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ," ಎಂದು ಡಾ. ಗುಲೇರಿಯಾ ತಿಳಿಸಿದ್ದಾರೆ.
ಮೆಟ್ರೋ ಸಿಟಿಗಳಲ್ಲಿ ಆರ್-ಮೌಲ್ಯದ ಪ್ರಮಾಣ?
ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯು ಸ್ಥಿರವಾಗಿದ್ದು, ಆರ್-ಮೌಲ್ಯವು 1ರಷ್ಟಿದ್ದ ಸಂದರ್ಭದಲ್ಲಿ ನವದೆಹಲಿಯಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಸಿನ್ಹಾ ಉದಾಹರಣೆ ಸಮೇತ ವಿವರಿಸುಿದ್ದಾರೆ. ಆರ್-ಮೌಲ್ಯವು 1ರ ಆಸುಪಾಸಿನಲ್ಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯು 100ರ ಹಂತದಲ್ಲಿದ್ದರೆ ಪರಿಸ್ಥಿತಿಯು ಕೈತಪ್ಪಿ ಹೋಗುವುದುಕ್ಕೂ ಮೊದಲೇ ಹಿಡಿತ ಸಾಧಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ಒಂದು ಬಾರಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 5 ಸಾವಿರಕ್ಕಿಂತ ಹೆಚ್ಚಾಗಿ ಆರ್-ಮೌಲ್ಯವು 1ಕ್ಕಿಂತ ಅಧಿಕವಾದರೆ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
* ಪುಣೆಯಲ್ಲಿ ಜುಲೈ 11 ರಿಂದ 13ರ ಅವಧಿಯಲ್ಲಿ ಆರ್-ಮೌಲ್ಯವು 0.85ರಷ್ಟಿದ್ದು, ಜುಲೈ 15 ರಿಂದ 20ರ ಅವಧಿಯಲ್ಲಿ 0.89ರಷ್ಟಿತ್ತು.
* ಬೆಂಗಳೂರಿನಲ್ಲಿ ಜುಲೈ 7 ರಿಂದ 13ರ ಅವಧಿಯಲ್ಲಿ ಆರ್-ಮೌಲ್ಯವು 0.92ರಷ್ಟಿದ್ದು, ಜುಲೈ 13ರಿಂದ 17ರ ಅವಧಿಯಲ್ಲಿ ಆರ್-ಮೌಲ್ಯವು 0.95ರಷ್ಟಿದೆ. ಅದೇ ಜುಲೈ 17 ರಿಂದ 23ರ ಅವಧಿಯಲ್ಲಿ ಅದು 0.72ರಷ್ಟಿತ್ತು.
* ಮುಂಬೈನಲ್ಲಿ ಜುಲೈ 2ರಿಂದ 4ರ ಅವಧಿಯಲ್ಲಿ ಆರ್-ಮೌಲ್ಯವು 0.96ರಷ್ಟಿದ್ದು, ಜುಲೈ 6 ರಿಂದ 9ರ ಅವಧಿಯಲ್ಲಿ 0.89ಕ್ಕೆ ಕುಸಿಯಿತು. ಜುಲೈ 22 ರಿಂದ 24ರ ಅವಧಿಯಲ್ಲಿ ಅದೇ ಆರ್-ಮೌಲ್ಯವು 0.74ರಷ್ಟಾಯಿತು.
* ಚೆನ್ನೈನಲ್ಲಿ ಜೂನ್ 29 ರಿಂದ ಜುಲೈ 7ರ ಅವಧಿಯಲ್ಲಿ ಆರ್-ಮೌಲ್ಯವು 0.63ರಷ್ಟಿದ್ದು, ಜುಲೈ 16 ರಿಂದ 19ರ ಅವಧಿಯಲ್ಲಿ ಅದು 1.05ಕ್ಕೆ ಏರಿಕೆಯಾಯಿತು. ಜುಲೈ 21 ರಿಂದ 24ರ ಅವಧಿಯಲ್ಲಿ ಅದೇ ಮೌಲ್ಯವು 0.94ಕ್ಕೆ ಕುಸಿಯಿತು.
* ಕೋಲ್ಕತ್ತಾದಲ್ಲಿ ಜುಲೈ 1 ರಿಂದ 13ರ ಅವಧಿಯಲ್ಲಿ 0.80ರಷ್ಟಿದ್ದ ಆರ್ ಮೌಲ್ಯವು ಜುಲೈ 1 ರಿಂದ 13ರ ಅವಧಿಯಲ್ಲಿ 0.91ಕ್ಕೆ ಏರಿಕೆಯಾಯಿತು. ಅದೇ ಮೌಲ್ಯವು ಜುಲೈ 12 ರಿಂದ 17ರ ಅವಧಿಯಲ್ಲಿ 0.86ಕ್ಕೆ ಇಳಿಕೆಯಾಯಿತು.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ
ಕೊರೊನಾವೈರಸ್ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿರುವ ಭಾರತದಲ್ಲಿ ಒಂದೇ ದಿನ 41,831 ಮಂದಿಗೆ ಸೋಂಕು ತಗುಲಿದ್ದು, ಇದೇ ಅವಧಿಯಲ್ಲಿ 39,258 ಸೋಂಕಿತರು ಗುಣಮುಖರಾಗಿದ್ದರೆ, 541 ಜನರು ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 97.36ರಷ್ಟಿದ್ದು ಈವರೆಗೂ 3,08,20,521 ಸೋಂಕಿತರು ಗುಣಮುಖರಾಗಿದ್ದಾರೆ. 4,24,351 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,10,952 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.