ಭಾರತದ ಚಂದ್ರಯಾನ ಏಕೆ ಇಷ್ಟು ಮಹತ್ವದ್ದು? ಇಲ್ಲಿದೆ ವಿವರ
Recommended Video
ನವದೆಹಲಿ, ಸೆಪ್ಟೆಂಬರ್ 6: ಭಾರತದ ಎರಡನೆಯ ಚಂದ್ರಯಾನ ಯೋಜನೆಯ ಚಂದ್ರನ ಮೇಲೆ ರೋವರ್ಅನ್ನು ಇಳಿಸುವ ಪ್ರಯತ್ನ ಸೆ. 7ರ ಮಧ್ಯರಾತ್ರಿ ನಡೆಯಲಿದೆ. ಈ ನೌಕೆ ಚಂದ್ರನಲ್ಲಿಗೆ ಹೇಗೆ ತಲುಪಲಿದೆ ಮತ್ತು ಅದು ಏಕೆ ಮಹತ್ವದ್ದು? ಇಡೀ ಜಗತ್ತು ಅದರೆಡೆಗೆ ಏಕೆ ಕಾತರದಿಂದ ನೋಡುತ್ತಿದೆ? ಅಲ್ಲಿ ಹೋಗಿ ನೌಕೆ ಏನು ಮಾಡಲಿದೆ? ಎಂಬ ಪ್ರಶ್ನೆಗಳು ನಿಮ್ಮ ಮುಂದೆ ಇರಬಹುದು. ಈ ಕಾರ್ಯಾಚರಣೆಯನ್ನು ವಿವರಿಸುವ ಕುರಿತು ಬಿಬಿಸಿಯಲ್ಲಿ ಪಲ್ಲವ ಬಾಗ್ಲಾ ಬರೆದ ಬರಹ ಇಲ್ಲಿದೆ.
ಸುಮಾರು $150 ಮಿಲಿಯನ್ ವೆಚ್ಚದ ಚಂದ್ರಯಾನ-2 ನೌಕೆಯು 2008ರಲ್ಲಿ ಉಡಾವಣೆಯಾಗಿ ಚಂದ್ರನಲ್ಲಿ ಒಣಗಿದ ಮೇಲ್ಮೈನಲ್ಲಿ ನೀರಿನ ಕಣಗಳನ್ನು ಪತ್ತೆಹಚ್ಚಿದ ತನ್ನ ಪೂರ್ವಾಧಿಕಾರಿ ಚಂದ್ರಯಾನ-1ರ ಸಾಧನೆಗಳನ್ನು ಮುಂದುವರಿಸಲಿದೆ.
ಚಂದ್ರಯಾನ-2 ನೌಕೆಯು ಆರ್ಬಿಟರ್, ವಿಕ್ರಂ ಎಂಬ ಲ್ಯಾಂಡರ್ ಮತ್ತು ಆರು ಚಕ್ರದ ಪ್ರಜ್ಞಾನ್ ಹೆಸರಿನ ರೋವರ್ನ್ನು ಒಳಗೊಂಡ ಥ್ರೀ ಇನ್ ಒನ್ ಮಿಷನ್.
ಚಂದ್ರಯಾನ2 : ಬೇರ್ಪಟ್ಟ ಲ್ಯಾಂಡರ್ -ಆರ್ಬಿಟರ್, ಇಸ್ರೋ ಮೈಲಿಗಲ್ಲು
ಜುಲೈ 22ರಂದು ಚಂದ್ರಯಾನ-2 ನೌಕೆಯನ್ನು ಉಡಾವಣೆ ಮಾಡಲಾಯಿತು. ಅದಕ್ಕೂ ಒಂದು ವಾರ ಮುಂಚೆಯೇ ಉಡಾವಣೆ ನಿಗದಯಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳು ಎದುರಾದ ಕಾರಣ ಯೋಜನೆಯನ್ನು ಮುಂದೂಡಲಾಗಿತ್ತು.
ಅತ್ಯಂತ ಕ್ಲಿಷ್ಟಕರವಾದ ಕಾರ್ಯಾಚರಣೆಯ ಮೂಲಕ ನೌಕೆಯನ್ನು ಒಂದು ತಿಂಗಳ ಬಳಿಕ ಚಂದ್ರನ ಕಕ್ಷೆಗೆ ಸೇರ್ಪಡೆಗೊಳಿಸಲಾಯಿತು. ಸೆಪ್ಟೆಂಬರ್ 2ರಂದು ನೌಕೆಯೊಳಗಿನಿಂದ ಲ್ಯಾಂಡರ್ಅನ್ನು ಪ್ರತ್ಯೇಕಿಸುವ ಸರಣಿ ಕಾರ್ಯಾಚರಣೆಗಳು ಯಶಸ್ವಿಯಾಗಿವೆ.
ಕೊನೆಯ 15 ನಿಮಿಷಗಳಲ್ಲಿ ನೆಲದ ಯಾವುದೇ ಬೆಂಬಲವಿಲ್ಲದೆ ಸ್ವತಃ ತಾನೇ ಮಾರ್ಗವನ್ನು ಕಂಡುಕೊಂಡು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಯತ್ನ ನಡೆಸಲಿದೆ. ಇದನ್ನು ಇಸ್ರೋದ ಅಧ್ಯಕ್ಷ ಕೆ. ಶಿವನ್ ಅವರು 'ಭಯಾನಕ 15 ನಿಮಿಷ' ಎಂದು ಕರೆದಿದ್ದಾರೆ.
ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ: ನಾಸಾ ಮೆಚ್ಚುಗೆ
ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವಲ್ಲಿ ಭಾರತ ಯಶಸ್ವಿಯಾದರೆ ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೆಯ ದೇಶ ಎಂಬ ಕೀರ್ತಿಗೆ ಪಾತ್ರವಾಗಲಿದೆ.
ಮುಖ್ಯವಾಗಿ ಭಾರತೀಯರಿಗೆ, ದೇಶದ ಹೆಮ್ಮೆಯ ಧ್ವಜವು ಚಂದ್ರನ ಅಂಗಳಕ್ಕೆ ತಲುಪಿದ ಸಂಭ್ರಮ ಮೂಡಿಸಲಿದೆ.
ಚಂದ್ರನ ಮೇಲೆ ಇಳಿಯುವುದು ಹೇಗೆ?
ಚಂದ್ರ, ಭೂಮಿಯ ಅತ್ಯಂತ ಸಮೀಪದ ನೆರೆಹೊರೆಯ. ಹಾಗೆಂದು ಆತನಲ್ಲಿ ನೌಕೆಯನ್ನು ಇಳಿಸುವುದು ಸುಲಭವದ ಮಾತಲ್ಲ. ಚಂದ್ರನ ಬಗ್ಗೆ ನಾನಾ ರೀತಿಯ ವರ್ಣನೆಗಳಿದ್ದರೂ, ಅಲ್ಲಿನ ವಾತಾವರಣ ನಾವು ಅಂದುಕೊಂಡಷ್ಟು ಹಿತವಲ್ಲ. ನೌಕೆಯ ಲ್ಯಾಂಡರ್ಅನ್ನು ನಿಧಾನವಾಗಿ ಮತ್ತು ಸುಗಮವಾಗಿ ಇಳಿಸಲು ಅಲ್ಲಿ ಪ್ಯಾರಾಚೂಟ್ ಬಳಸಲು ಸಾಧ್ಯವಿಲ್ಲ. ಅದಕ್ಕಾಗಿಯೇ 'ಪವರಡ್ ಡೀಸೆಂಟ್' ಎಂಬ ಏಕೈಕ ಆಯ್ಕೆಯನ್ನು ಇರಿಸಲಾಗಿದೆ.
ಇದರ ಅರ್ಥ ಲ್ಯಾಂಡರ್ನ ವೇಗವು ತನ್ನದೇ ರಾಕೆಟ್ ಎಂಜಿನ್ಗಳ ಮೂಲಕವೇ ಸ್ಥಿರವಾಗಿ ಕಡಿಮೆಯಾಗುತ್ತದೆ. ಲ್ಯಾಂಡರ್ ಚಂದ್ರನ ಮೇಲ್ಮೈ ಉದ್ದಕ್ಕೂ ಅಡ್ಡಲಾಗಿ ಚಲಿಸುತ್ತದೆ. ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಗಳಿಗೆಗೂ ಮುನ್ನ ಈ ಸಮತಲದ ಚಲನೆಯನ್ನು ರಾಕೆಟ್ ಎಂಜಿನ್ಗಳು ತಹಬದಿಗೆ ತರಬೇಕಾಗುತ್ತದೆ. ಜತೆಗೆ ಅದರ ವೇಗವನ್ನು ಶೂನ್ಯದ ಸಮೀಪಕ್ಕೆ ನಿಯಂತ್ರಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನೇ 'ಸಾಫ್ಟ್ ಲ್ಯಾಂಡಿಂಗ್' ಎಂದು ಕರೆಯಲಾಗುತ್ತದೆ.
ಚಂದ್ರಯಾನ-2 ಚಂದ್ರನನ್ನು ತಲುಪುವುದು ಹೇಗೆ?
ಕೊನೆಯ ಹಂತಕ್ಕೆ ತಲುಪುವ ಮುನ್ನ ಆರ್ಬಿಟರ್ ಮತ್ತು ಲ್ಯಾಂಡರ್ ಚಂದ್ರನ ಮೇಲೆ ಸರ್ವೆ ನಡೆಸಲಿದೆ. ಅಲ್ಲಿ ತಗ್ಗುದಿಣ್ಣೆಗಳಿಲ್ಲದ ಮತ್ತು ಬಂಡೆಗಳಿಲ್ಲದ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಲಿದೆ.
ಒಂದು ವೇಳೆ ಲ್ಯಾಂಡರ್ ಸರಿಯಾಗಿ ಕಾರ್ಯಾಚರಣೆ ನಡೆಸದೆ ಹೋದರೆ ಅದು ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸುವ ಅಪಾಯವಿದೆ. 2008ರಲ್ಲಿ ಚಂದ್ರಯಾನ-1 ನೌಕೆ ಕೂಡ 'ಹಿತವಾಗಿ ದಡಸೇರುವ' ಪ್ರಕ್ರಿಯೆಗೆ ವ್ಯವಸ್ಥೆ ಮಾಡದಿದ್ದ ಇಸ್ರೋ ಉದ್ದೇಶಪೂರ್ವಕವಾಗಿಯೇ ಅದನ್ನು ಅಪ್ಪಳಿಸುವಂತೆ ಮಾಡಿತ್ತು.
ಒಮ್ಮೆ ನೌಕೆ ಲ್ಯಾಂಡ್ ಆದ ಬಳಿಕ ಚಂದ್ರನ ದೂಳುಗಳು ಹಾರಾಡಬಹುದು. ಬಳಿಕ ಅದರ ಬಾಗಿಲು ತೆರೆದು ರೋವರ್ ನಿಧಾನವಾಗಿ ಹೊರಬರುತ್ತದೆ. ಈ ಪ್ರಜ್ಞಾನ್ ರೋವರ್ ನಿಮಿಷಕ್ಕೆ ಒಂದು ಸೆಂಟಿಮೀಟರ್ನಂತೆ 'ಚಂದ್ರನ ಮೇಲೆ ನಡಿಗೆ' ಕೈಗೊಳ್ಳಲಿದೆ. ಹೀಗೆ ಅದು ಲ್ಯಾಂಡರ್ನಿಂದ ಗರಿಷ್ಠ 500 ಮೀಟರ್ (1,640 ಅಡಿ) ದೂರ ಸಾಗಬಲ್ಲದು.
ಚಂದ್ರಯಾನ 2: ಕ್ಯಾಮರಾ ಕ್ಲಿಕ್ಕಿಸಿದ ಚಂದ್ರನ ಹೊಸ ಚಿತ್ರ
ಲ್ಯಾಂಡರ್ ಅಲ್ಲೇನು ಮಾಡಲಿದೆ?
ಚಂದ್ರನ ಮೇಲೆ ಇಳಿಯುವ ವಿಕ್ರಂ ಲ್ಯಾಂಡರ್, ಚಂದ್ರನ ಅಂಗಳದಲ್ಲಿನ ಕಂಪನಗಳನ್ನು ಮಾಪನ ಮಾಡಲಿದೆ ಮತ್ತು ಚಂದ್ರನ 'ಮಣ್ಣಿನ' ಉಷ್ಣತೆಯ ಕುರಿತು ಮಾಹಿತಿ ಕಲೆಹಾಕಲಿದೆ. ಈ ನಡುವೆ ಅಲ್ಲಿ ಅಡ್ಡಾಡುವ ರೋವರ್, ಚಂದ್ರನ ಮಣ್ಣನ್ನು ಹೆಚ್ಚು ವಿಶ್ಲೇಷಣೆಗೆ ಒಳಪಡಿಸಲಿದೆ.
ರೋವರ್ನ ಹಿಂಬದಿಯ ಚಕ್ರಗಳಲ್ಲಿ ರಾಷ್ಟ್ರೀಯ ಚಿಹ್ನೆ ಅಶೋಕ ಚಕ್ರವನ್ನು ಮುದ್ರಿಸಲಾಗಿದೆ. ಜತೆಗೆ ಇಸ್ರೋದ ಲೋಗೋ ಕೂಡ ಇದೆ. ಈ ಮೂಲಕ ಚಂದ್ರನ ಮೇಲೆ ಭಾರತದ ಗುರುತು ಶಾಶ್ವತವಾಗಿ ಉಳಿದುಕೊಳ್ಳಲಿದೆ.
ಆದರೆ ಚಂದ್ರನ ಮೇಲ್ಮೈನಲ್ಲಿರುವ ಅತಿಯಾದ ಉಷ್ಣತೆಯು ಈ ಯೋಜನೆಗೆ ಇರುವ ಬಹುದೊಡ್ಡ ಸವಾಲಾಗಿದೆ. ಸೂರ್ಯ ಬೆಳಗಿದ ಸಂದರ್ಭದಲ್ಲಿ ಚಂದ್ರನ ಉಷ್ಣಾಂಶವು 100 ಸೆ.ಗೆ ದಾಟಬಹುದು ಸೂರ್ಯ ಮುಳುಗಿದಾಗ ಅದು -170 ಸೆ. ಗೂ ಕುಸಿಯಬಹುದು.
ನೌಕೆಯ ಬ್ಯಾಟರಿಗಳು ಸೂರ್ಯನ ಬೆಳಕಿನ ಮೂಲಕವೇ ರಿಚಾರ್ಜ್ ಆಗಬೇಕು. ರೋವರ್ ಮತ್ತು ಲ್ಯಾಂಡರ್ ಎರಡೂ ಸಾಧನಗಳ ಸಾಮಾನ್ಯ ಜೀವಿತಾವಧಿ ಒಂದು ಪಾಕ್ಷಿಕ ಮಾತ್ರ. ಚಂದ್ರನ ಅತ್ಯಂತ ಶೀತದ ಸುದೀರ್ಘ ರಾತ್ರಿಗಳಲ್ಲಿ ವಿಪರೀತ ತಣ್ಣದ ವಾತಾವರಣದಲ್ಲಿ ಇವು ಉಳಿಯುವುದರ ಬಗ್ಗೆ ಖಾತರಿ ಇಲ್ಲದ ಕಾರಣ ಇಸ್ರೋ 14 ದಿನಗಳಿಗೇ ಇವುಗಳ ಚಟುವಟಿಕೆ ಅಂತ್ಯಗೊಳ್ಳುವಂತೆ ಮಾಡಿದೆ.
ಈ ಎರಡೂ ಸಾಧನಗಳು ಪರಸ್ಪರರ ಚಿತ್ರಗಳನ್ನು ತೆಗೆದು ರವಾನಿಸಲಿವೆ. ಈ ಮೂಲಕ ಚಂದ್ರನ ಮೇಲೆ ಇಳಿದ ಆದಷ್ಟು ಬೇಗನೆ 'ಭಾರತದ ಮೊದಲ ಸೆಲ್ಫಿ'ಗಳು ರವಾನೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಧ್ರುವದ ಭಾಗ ಏಕೆ ಪ್ರಾಮುಖ್ಯ?
ಚಂದ್ರಯಾನ-2 ನೌಕೆ ಇಳಿಯಲಿರುವ ಚಂದ್ರನ ದಕ್ಷಿಣ ಧ್ರುವದ ಭಾಗ ಇದುವರೆಗೂ ಯಾರೂ ಅಧ್ಯಯನ ನಡೆಸುವ ಸಾಹಸಕ್ಕೆ ಮುಂದಾಗಿರದ ಜಾಗ. ಭಾರತವು ಇದುವರೆಗೂ ಯಾವ ನೌಕೆ ಕೂಡ ಇಳಿಯದ ಜಾಗದಲ್ಲಿ ತನ್ನ ನೌಕೆಯನ್ನು ಇಳಿಸುವ ಗುರಿ ಹೊಂದಿತ್ತು. ದಕ್ಷಿಣದಿಂದ 70 ಡಿಗ್ರಿ ಅಕ್ಷಾಂಕ್ಷದಲ್ಲಿ ಮ್ಯಾನ್ಸಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ಎಂಬ ಎರಡು ಬೃಹತ್ ಕುಳಿಗಳ ನಡುವಿನ ಜಾಗದಲ್ಲಿ ಈ ನೌಕೆ ಇಳಿಯಲಿದೆ.
ಅಪೋಲೋ ಮಾನವ ಸಹಿತ ಯೋಜನೆ ಸೇರಿದಂತೆ ಈ ಹಿಂದಿನ ಬಹುತೇಕ ಯೋಜನೆಗಳ ನೌಕೆಗಳು ಚಂದ್ರನ ಸಮಭಾಜಕ ಪ್ರದೇಶವನ್ನೇ ಗುರಿಯಾಗಿರಿಸಿಕೊಂಡಿದ್ದವು.
ಚಂದ್ರನ ಉತ್ತರ ಧ್ರುವಕ್ಕಿಂತಲೂ ದಕ್ಷಿಣ ಧ್ರುವದಲ್ಲಿನ ಮೇಲ್ಮೈ ಬೆಳಕಿಗೆ ಬಂದಿಲ್ಲ. ಹೀಗಾಗಿ ಅದು ಹೆಚ್ಚು ಆಸಕ್ತಿಕರವಾಗಿದೆ. ಇದರ ಅರ್ಥ ಈ ಭಾಗದಲ್ಲಿ ಇದ್ದಿರಬಹುದಾದ ನೀರಿನ ಅಂಶಗಳು ಶಾಶ್ವತವಾಗಿ ಮುಚ್ಚಿಹೋಗಿರಬಹುದು ಎನ್ನುವುದು ಇಸ್ರೋದ ಚಿಂತನೆ.
ಇದಕ್ಕೆ ಪೂರಕವಾಗಿ ದಕ್ಷಿಣ ಧ್ರುವದಲ್ಲಿ ಇರುವ ಕುಳಿಗಳು ತಣ್ಣನೆಯ ಜಾಲಗಳನ್ನು ಹೊಂದಿವೆ. ಜತೆಗೆ ಆರಂಭದ ಸೌರ ವ್ಯವಸ್ಥೆಯ ಕುರುಹುಗಳನ್ನು ಒಳಗೊಂಡಿವೆ. ಈ ಅನನ್ವೇಶಿತ ಪ್ರದೇಶವು ಭವಿಷ್ಯದ ಅಧ್ಯಯನಗಳ ದೃಷ್ಟಿಯಿಂದ ಬಹು ಮುಖ್ಯವಾಗಿವೆ. 2024ರ ಸುಮಾರಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಆರ್ಟೆಮಿಸ್ ಮಿಷನ್ ಮೂಲಕ ದಕ್ಷಿಣ ಧ್ರುವದ ಮೇಲೆ ತನ್ನ ಹೆಜ್ಜೆ ಗುರುತುಗಳನ್ನಯ ಮೂಡಿಸಲು ಬಯಸಿದೆ. ಈ ಅಪರಿಚಿತ ಪ್ರದೇಶದಲ್ಲಿನ ಪರಿಸ್ಥಿತಿಯ ಕುರಿತು ಅಮೆರಿಕಕ್ಕೆ ತೀರಾ ಅಗತ್ಯವಾದ ಮಾಹಿತಿಗಳನ್ನು ಭಾರತದ ಯೋಜನೆ ಒದಗಿಸಲಿದೆ.
ವರ್ಷದವರೆಗೂ ಚಂದ್ರನ ಮೇಲೆ ಸುತ್ತುವುದೇಕೆ?
ಲ್ಯಾಂಡರ್ ಮತ್ತು ರೋವರ್ ತಮ್ಮ ಕಾರ್ಯಾಚರಣೆಯನ್ನು 14 ದಿನಗಳಿಗೇ ಮುಗಿಸಿದರೂ ನೌಕೆಯ ಆರ್ಬಿಟರ್ ಒಂದು ವರ್ಷದವರೆಗೂ ಚಂದ್ರನಿಗೆ ಸುತ್ತುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಅವಧಿಯಲ್ಲಿ ಅದು ಚಂದ್ರನ ಖನಿಜಗಳನ್ನು ಹುಡುಕಲಿದೆ. ಅವುಗಳ ಹೈ ರೆಸೊಲ್ಯೂಷನ್ ಚಿತ್ರಗಳನ್ನು ತೆಗೆಯಲಿದೆ. ಜತೆಗೆ ಚಂದ್ರನ ಮೇಲ್ಮೈನಲ್ಲಿ ನೀರಿಗಾಗಿ ಹುಡುಕಾಟ ನಡೆಸಲಿದೆ. ಇದಕ್ಕೆ ಇದುವರೆಗೂ ಯಾವ ಚಂದ್ರ ನೌಕೆಯೂ ನಡೆಸದ ರೀತಿಯಲ್ಲಿ ಇನ್ಫ್ರಾ ರೆಡ್ ಇಮೇಜರ್ ಮತ್ತು ರೇಡಾರ್ಗಳನ್ನು ಬಳಸಲಿದೆ.
ಚಂದ್ರನ ಡಿಜಿಟಲ್ ಪ್ರಾದೇಶಿಕ ನಕಾಶೆಯನ್ನು ಸಿದ್ಧಪಡಿಸಲು ಹೈ ರೆಸೊಲ್ಯೂಷನ್ ಕ್ಯಾಮೆರಾ ನೆರವಾಗಲಿದೆ. ಅದರ ಜತೆಗೆ ಚಂದ್ರನದ ತೆಳ್ಳನೆಯ ವಾತಾವರಣವನ್ನೂ ವಿಶ್ಲೇಷಣೆ ಮಾಡಲಿದೆ. ಆರ್ಬಿಟರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಬದುಕುಳಿಯುವ ಸಾಧ್ಯತೆ ಇದೆ. ಅದು ತನ್ನ ಇಂಧನವನ್ನು ಉಳಿಸಿಕೊಂಡು ಕಾರ್ಯಾಚರಣೆ ನಡೆಸುವಂತೆ ಮಾಡಲಾಗಿದೆ. ಆದರೆ ಒಮ್ಮೆ ಅದರ ಇಂಧನ ಮುಗಿದುಹೋದರೆ ಅದು ಭಾರತದ ದೀರ್ಘಾವಧಿ ಚಂದ್ರನ ಗ್ರಹವಾಗಲಿದೆ.