ಭಾರತದ ಬಗ್ಗೆ ರಷ್ಯಾ ಮುನಿಸು: ನನೆಗುದಿಗೆ ಬಿದ್ದ ವಾರ್ಷಿಕ ಸಮ್ಮೇಳನ
ನವದೆಹಲಿ, ಡಿಸೆಂಬರ್ 23: ಕಳೆದ ಎರಡು ದಶಕಗಳಲ್ಲಿಯೇ ಮೊದಲ ಬಾರಿಗೆ ಭಾರತ ಮತ್ತು ರಷ್ಯಾಗಳು ತಮ್ಮ ದ್ವಿಪಕ್ಷೀಯ ವಾರ್ಷಿಕ ಸಮ್ಮೇಳನವನ್ನು ಈ ಬಾರಿ ನಡೆಸಿಲ್ಲ. ಭಾರತವು ಇಂಡೋ-ಪೆಸಿಫಿಕ್ ಪ್ರಕ್ರಿಯೆಯಲ್ಲಿ ಮತ್ತು ಅಮೆರಿಕದ ಕಡೆ ಹೆಚ್ಚು ಒಲವು ಹೊಂದಿರುವ 'ಕ್ವಾಡ್'ನತ್ತ ಆದ್ಯತೆ ನೀಡುತ್ತಿರುವುದರಿಂದ ರಷ್ಯಾ ತನ್ನ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬಾರಿಯ ಸಮ್ಮೇಳನ ನನೆಗುದಿಗೆ ಬಿದ್ದಿದೆ.
2000ನೇ ಇಸವಿಯಿಂದಲೂ ಭಾರತ ಮತ್ತು ರಷ್ಯಾಗಳು ತಮ್ಮ ರಕ್ಷಣಾ ಸಹಭಾಗಿತ್ವದಲ್ಲಿನ ಅತಿ ದೊಡ್ಡ ಸಾಂಸ್ಥಿಕ ಮಾತುಕತೆ ವ್ಯವಸ್ಥೆಯಾಗಿ ಈ ವಾರ್ಷಿಕ ಸಮಾವೇಶಗಳನ್ನು ನಡೆಸುತ್ತಾ ಬಂದಿದ್ದವು. 2000ರಲ್ಲಿ ಇಂಡೋ-ರಷ್ಯಾ ಕಾರ್ಯತಂತ್ರ ಸಹಭಾಗಿತ್ವದ ಘೋಷಣೆಗೆ ಉಭಯ ದೇಶಗಳು ಸಹಿ ಹಾಕಿದ್ದವು.
ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!
ರಷ್ಯಾ ಮತ್ತು ಭಾರತದ ನಡುವೆ ಅನೇಕ ಮಾತುಕತೆ ಮತ್ತು ಉನ್ನತ ಮಟ್ಟದ ಚಟುವಟಿಕೆಗಳು ನಡೆಯುತ್ತಾ ಬಂದಿದ್ದರೂ ಈ ಬಾರಿ ಸಮ್ಮೇಳನ ನಡೆಸಲು ಮುಂದಾಗಿಲ್ಲ. ಅಮೆರಿಕದೊಂದಿಗಿನ ತನ್ನ ವ್ಯವಹಾರಗಳನ್ನು ಭಾರತ ಹೆಚ್ಚಿಸಿಕೊಂಡಿರುವುದು ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಉಭಯ ದೇಶಗಳ ಸಂಬಂಧಗಳ ನಡುವೆ ಉದ್ವಿಗ್ನತೆ ಶುರುವಾಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
2010ರ ಡಿಸೆಂಬರ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ವೇಳೆ ಉಭಯ ದೇಶಗಳ ಸಂಬಂಧವನ್ನು 'ಕಾರ್ಯತಂತ್ರ ಸಹಭಾಗಿತ್ವ'ದಿಂದ 'ವಿಶೇಷ ಮತ್ತು ಮಹತ್ವದ ಕಾರ್ಯತಂತ್ರ ಸಹಭಾಗಿತ್ವ' ಎಂದು ಉನ್ನತೀಕರಿಸಲಾಗಿತ್ತು.
ರಷ್ಯಾ ಮತ್ತು ಭಾರತಗಳಲ್ಲಿ ಇದುವರೆಗೂ ಒಟ್ಟು 20 ವಾರ್ಷಿಕ ಸಮ್ಮೇಳನ ಸಭೆಗಳು ನಡೆದಿವೆ. 2019ರ ಸೆಪ್ಟೆಂಬರ್ನಲ್ಲಿ ನಡೆದ ಕೊನೆಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಲಾಡಿವೊಸ್ಟೊಕ್ಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ 2018ರ ಅಕ್ಟೋಬರ್ನಲ್ಲಿ ನವದೆಹಲಿಗೆ ಅಧ್ಯಕ್ಷ ಪುಟಿನ್ ಆಗಮಿಸಿದ್ದರು. ಈ ಬಾರಿ ಕೂಡ ಭಾರತದಲ್ಲಿ ಸಮ್ಮೇಳನ ನಡೆಯಬೇಕಿತ್ತು.
ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಆನ್ಲೈನ್ ಸಮ್ಮೇಳನ ನಡೆಯಬೇಕಿತ್ತು. ಆದರೆ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಶಾಂತಿ ಸಂಧಾನಕಾರನಾಗಿ ರಷ್ಯಾ ಮಧ್ಯಸ್ಥಿಕೆದಾರನ ಕೆಲಸ ಮಾಡಲು ಪ್ರಯತ್ನಿಸಿದ ಬಳಿಕ ಈ ಯೋಜನೆ ಕೈಗೂಡಿಲ್ಲ. ಜೂನ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಸ್ಕೋಕ್ಕೆ ಭೇಟಿ ನೀಡಿದ್ದಾಗಲೂ ಎಲ್ಎಸಿಯಲ್ಲಿನ ಬಿಕ್ಕಟ್ಟಿನ ಬಗ್ಗೆ ರಷ್ಯಾ ಚರ್ಚಿಸಿತ್ತು.